
ಮತ್ತೊಂದು ಸ್ಲೀಪರ್ ಬಸ್ ದುರಂತ, ಚಲಿಸುತ್ತಿದ್ದ ಬಸ್ ಹೊತ್ತಿ ಉರಿದು ಪ್ರಯಾಣಿಕ ಸಾವು, 6 ಮಂದಿ ಗಂಭೀರ, ಐಷಾರಾಮಿ ಸ್ಲೀಪರ್ ಬಸ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಲವರು ಬಸ್ಸಿನ ಗಾಜು ಒಡೆದು ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಬನಸ್ಕಂತ (ಮಾ.13) ಸ್ಲೀಪರ್ ಬಸ್ ದುರಂತಗಳು ದೇಶವನ್ನೇ ಬೆಚ್ಚಿ ಬೀಳಿಸಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಲೀಪರ್ ಬಸ್ ಹೊತ್ತಿ ಉರಿದು ದುರಂತಗಳೇ ಸಂಭವಿಸಿದೆ. ಕಟ್ಟು ನಿಟ್ಟಿನ ಕ್ರಮಗಳ ಮೂಲಕ ಈ ರೀತಿ ಘಟನೆಗಳು ನಿಯಂತ್ರಣವಾಗಿದೆ ಎಂದುಕೊಳ್ಳುವಷ್ಟರಲ್ಲೇ ಇದೀಗ ಮತ್ತೊಂದು ಸ್ಲೀಪರ್ ಬಸ್ ಹೊತ್ತಿ ಉರಿದು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಸುಟ್ಟು ಕರಕಲಾದರೆ, 6 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಗುಜರಾಜ್ನ ಬನಸ್ಕಂತ ಜಿಲ್ಲೆಯಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಘಟನೆ
ರಾಜಸ್ಥಾನದ ನಂಚಾದಿಂದ ಗುಜರಾತ್ನ ಅಹಮ್ಮದಾಬಾದ್ಗೆ ತೆರಳತ್ತಿದ್ದ ಸ್ಲೀಪರ್ ಬಸ್ ಇಂದು ಮುಂಜಾನೆ 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸ್ಲೀಪರ್ ಬಸ್ ವೇಗವಾಗಿ ಹೆದ್ದಾರಿ ಮೂಲಕ ಸಾಗಿತ್ತು. ಈ ವೇಳೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ನಿದ್ದೆಯಲ್ಲಿದ್ದರೆ, ಬಸ್ ಚಾಲಕ ಹಾಗೂ ಸಿಬ್ಬಂದಿ ತಕ್ಕ ಸಮಯಕ್ಕೆ ತಲುಪುವ ಉದ್ದೇಶದಿಂದ ವೇಗವಾಗಿ ಸಾಗುವ ಯೋಚನೆಯಲ್ಲಿದ್ದರು. ಇದರ ನಡುವೆ ಬೆಂಕಿ ಹೊತ್ತಿಕೊಂಡಿದೆ.
ಕೆಲವೇ ಕ್ಷಣದಲ್ಲಿ ಹೊತ್ತಿಕೊಂಡ ಬೆಂಕಿ
ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಜ್ವಾಲೆಯಾಗಿ ಆವರಿಸಿಕೊಂಡಿದೆ. ಬಸ್ ನಿಲ್ಲಿಸುತ್ತಿದ್ದಂತೆ ಪ್ರಯಾಣಿಕರು ಬಸ್ನ ಗಾಜು ಒಡೆದು ಹೊರಕ್ಕೆ ಜಿಗಿದಿದ್ದಾರೆ. ಆದರೆ ಓರ್ವ ಪ್ರಯಾಣಿಕರ ಬೆಂಕಿಯಲ್ಲಿ ಬೆಂದು ಹೋಗಿದ್ದಾನೆ. ಇತ್ತ ಪ್ರಯಾಣಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಪ್ರಯಾಣಿಕರು ಕಿಟಕಿ ಗಾಜು ಒಡೆದು ಹೊರಕ್ಕೆ ಜಿಗಿದಿದ್ದಾರೆ. ಬಳಿಕ ಕೆಲವರನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಸುಟ್ಟು ಕರಕಲಾದರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಲೀಪರ್ ಬಸ್ ಪ್ರಯಾಣವೇ ಇದೀಗ ಅಪಾಯಕಾರಿಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಹಲವು ಸ್ಲೀಪರ್ ಬಸ್ ದುರಂತ ಸಂಭವಿಸಿದೆ. ಪ್ರತಿ ಘಟನೆಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಅಧಿಕಾರಿಗಳು ಸ್ಲೀಪರ್ ಬಸ್ ಸೇವೆ ನಿಯಮಗಳನ್ನು ಕಠಿಣಗೊಳಿಸುವುದಾಗಿ ಎಚ್ಚರಿಸಿದ್ದರು. ಆದರೆ ಘಟನೆಗಳು ಮತ್ತೆ ಮರುಕಳಿಸುತ್ತಿದೆ. ದೂರ ಪ್ರಯಾಣದ ಪ್ರಯಾಣಿಕರು ಹೆಚ್ಚಾಗಿ ಸ್ಲೀಪರ್ ಬಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಯಾಣದ ಆಯಾಸ, ನಿದ್ದೆ ಎಲ್ಲವನ್ನು ಮನಗಂಡು ಸ್ಲೀಪರ್ ಬಸ್ನಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ದುಬಾರಿ ಟಿಕೆಟ್ ಬೆಲೆ ನೀಡಿ ಪ್ರಯಾಣ ಮಾಡುತ್ತಾರೆ. ಆದರೆ ಸ್ಲೀಪರ್ ಬಸ್ ಸುರಕ್ಷತೆ ಇದೀಗ ಸವಾಲಾಗುತ್ತಿದೆ.