
ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಶಾಸಕರಿಗೆ ತಲಾ 5 ಕೋಟಿ ರೂ. ಹಾಗೂ ಬ್ಲ್ಯಾಂಕ್ ಚೆಕ್ ಆಮಿಷವೊಡ್ಡಿದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಾಖ ಆರೋಪಿಸಿದ್ದಾರೆ. ಬಿಡದಿಯ ರೆಸಾರ್ಟ್ನಲ್ಲಿ ಕುದುರೆ ವ್ಯಾಪಾರ ಯತ್ನದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ರಾಮನಗರ (ಮಾ.15)): ‘ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅತಿಚೇಷ್ಟೆ ನಡೆಸುತ್ತಿದೆ. ನಮ್ಮ ಶಾಸಕರಿಗೆ ತಲಾ 5 ಕೋಟಿ ರೂಪಾಯಿ ಹಣ ಹಾಗೂ ಬ್ಲ್ಯಾಂಕ್ ಚೆಕ್ಗಳ ಆಮಿಷವೊಡ್ಡಲಾಗಿದೆ’ ಎಂದು ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಖ ಗಂಭೀರವಾಗಿ ಆರೋಪಿಸಿದ್ದಾರೆ.
5 ಕೋಟಿ ಆಫರ್ ಮತ್ತು ಬ್ಲ್ಯಾಂಕ್ ಚೆಕ್:
ಬಿಡದಿಯ ವಂಡರ್ ಲಾ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕುದುರೆ ವ್ಯಾಪಾರದ ಹೂರಣವನ್ನು ಬಯಲು ಮಾಡಿದರು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಹರಸಾಹಸ ಪಡುತ್ತಿದೆ ಎಂದು ಆರೋಪಿಸಿದ ಸಂಸದರು, ‘ನಾಲ್ವರು ವ್ಯಕ್ತಿಗಳು ರೆಸಾರ್ಟ್ಗೆ ಬಂದು ನಮ್ಮ ಶಾಸಕರ ಜೊತೆ ರಹಸ್ಯವಾಗಿ ಮಾತನಾಡಲು ಯತ್ನಿಸಿದ್ದಾರೆ. ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಿದ ಅವರು, ಅದಕ್ಕೆ ಪ್ರತಿಯಾಗಿ 5 ಕೋಟಿ ರೂಪಾಯಿ ಹಣದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಹಣದ ಭರವಸೆಗಾಗಿ ಸಹಿ ಮಾಡಿರುವ ಬ್ಲ್ಯಾಂಕ್ ಚೆಕ್ಗಳನ್ನು ಶಾಸಕರ ಮುಂದಿಟ್ಟಿದ್ದಾರೆ’ ಎಂದು ವಿವರಿಸಿದರು.
ಒಡಿಶಾ ಸಿಎಂ ಆಪ್ತನ ವಿರುದ್ಧ ಆರೋಪ:
ಈ ವಂಚನೆಯ ಜಾಲದ ಹಿಂದೆ ಒಡಿಶಾದ ಉನ್ನತ ಮಟ್ಟದ ವ್ಯಕ್ತಿಗಳ ಕೈವಾಡವಿದೆ ಎಂದು ಸಪ್ತಗಿರಿ ಉಲಾಖ ದೂರಿದ್ದಾರೆ. ‘ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ಅವರ ಆಪ್ತನೊಬ್ಬ ಇಲ್ಲಿಗೆ ಬಂದು ಶಾಸಕರ ಖರೀದಿಗೆ ಯತ್ನಿಸಿದ್ದಾನೆ. ಬಿಜೆಪಿಯ ಈ ನೀಚ ರಾಜಕಾರಣಕ್ಕೆ ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯೇ ಬೆಂಬಲ ನೀಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಯಾವುದೇ ಶಾಸಕರು ಹಣದ ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ಶಾಸಕರು ಪಕ್ಷಕ್ಕೆ ಮತ್ತು ಸಂವಿಧಾನಕ್ಕೆ ಬದ್ಧರಾಗಿದ್ದಾರೆ. ಆಮಿಷ ತೋರಲು ಬಂದ ವ್ಯಕ್ತಿಗಳನ್ನು ನಮ್ಮ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಬಿಜೆಪಿಯ ಮುಖವಾಡ ಕಳಚಿಬಿದ್ದಿದೆ’ ಎಂದು ಹೇಳಿದರು.
ಪೊಲೀಸರಿಗೆ ದೂರು ದಾಖಲು:
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವತಿಯಿಂದ ಬಿಡದಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ. ಬ್ಲ್ಯಾಂಕ್ ಚೆಕ್ ಸಮೇತ ಸಿಕ್ಕಿಬಿದ್ದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ‘ಬಿಜೆಪಿ ಸಂವಿಧಾನದ ವಿರುದ್ಧವಾಗಿ ಅಧಿಕಾರ ಹಿಡಿಯಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರನ್ನು ಮಾರುಕಟ್ಟೆಯ ಸರಕಿನಂತೆ ಖರೀದಿ ಮಾಡಲು ಹೊರಟಿರುವುದು ಅತ್ಯಂತ ಆತಂಕಕಾರಿ ಸಂಗತಿ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ, ಒಡಿಶಾ ರಾಜ್ಯಸಭಾ ಚುನಾವಣೆಯ ಕಾವು ಈಗ ಕರ್ನಾಟಕದ ಬಿಡದಿ ರೆಸಾರ್ಟ್ನಲ್ಲಿ ಜೋರಾಗಿದ್ದು, ಸಂಸದ ಉಲಾಖ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.