
ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಬಿಸಿಸಿಐ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಶುಭಮನ್ ಗಿಲ್ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರಾದರೆ, ಸ್ಮೃತಿ ಮಂಧಾನ ಶ್ರೇಷ್ಠ ಮಹಿಳಾ ಕ್ರಿಕೆಟರ್ ಗೌರವಕ್ಕೆ ಪಾತ್ರರಾದರು.
ನವದೆಹಲಿ: ಭಾರತದ ಮಾಜಿ ನಾಯಕ, ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, 1983ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿದ್ದ ರೋಜರ್ ಬಿನ್ನಿ, ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದರು.
ಭಾನುವಾರ ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ಪರಿಗಣಿಸಿ ಈ ಮೂವರಿಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಸಿಸಿಐ ಮಾಜಿ ಕಾರ್ಯದರ್ಶಿ, ಈಗಿನ ಐಸಿಸಿ ಮುಖ್ಯಸ್ಥ ಜಯ್ ಶಾ ಪ್ರಶಸ್ತಿ ಪ್ರದಾನ ಮಾಡಿದರು.
ಇನ್ನು, ಭಾರತದ ಟೆಸ್ಟ್, ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ 2ನೇ ಬಾರಿ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಪಡೆದರೆ, ಸ್ಮೃತಿ ಮಂಧನಾ 5ನೇ ಬಾರಿ ಶ್ರೇಷ್ಠ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟರ್ ಗೌರವಕ್ಕೆ ಪಾತ್ರರಾದರು. ಮುಂಬೈ ದೇಸಿ ಕ್ರಿಕೆಟ್ನ ಶ್ರೇಷ್ಠ ತಂಡ ಪ್ರಶಸ್ತಿ ಪಡೆದರೆ, ಉಲ್ಹಾಸ್ ಗಾಂಧಿ ದೇಸಿ ಕ್ರಿಕೆಟ್ನ ಶ್ರೇಷ್ಠ ಅಂಪೈರ್ ಗೌರವಕ್ಕೆ ಭಾಜನರಾದರು.
Scroll to load tweet…
ಶಫಾಲಿ ವರ್ಮಾ, ಹರ್ಷಿತ್ ರಾಣಾ, ಶ್ರೀ ಚರಣಿ, ದೀಪ್ತಿ ಶರ್ಮಾ, ಆಯುಶ್ ಮ್ಹಾಥ್ರೆ ಸೇರಿದಂತೆ ಹಲವು ಯುವ, ಅನುಭವಿ ಕ್ರಿಕೆಟರ್ಗಳು ಬಿಸಿಸಿಐ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡರು.
Scroll to load tweet…
ರಾಜ್ಯದ ನಾಲ್ವರಿಗೆ ಬಿಸಿಸಿಐ ಗೌರವ
ದ್ರಾವಿಡ್, ರೋಜರ್ ಬಿನ್ನಿ ಹೊರತಾಗಿ ಕರ್ನಾಟಕದ ಇನ್ನಿಬ್ಬರು ಬಿಸಿಸಿಐ ಗೌರವಕ್ಕೆ ಪಾತ್ರರಾಗಿದ್ದಾರೆ. ಸಿ.ಕೆ.ನಾಯ್ಡು ಟ್ರೋಫಿ(ಅಂಡರ್-12)ಯಲ್ಲಿ ಗರಿಷ್ಠ ರನ್ ಸರದಾರ ಪ್ರಶಸ್ತಿಗೆ ಮ್ಯಾಕ್ನಿಲ್ ನೊರೊನ್ಹಾ, 2024-25ರ ರಣಜಿಯ ಪ್ಲೇಟ್ ಗ್ರೂಪ್ನಲ್ಲಿ ಗರಿಷ್ಠ ವಿಕೆಟ್ ಕಿತ್ತ ಆಟಗಾರ ಎಂಬ ಗೌರವಕ್ಕೆ ಜಗದೀಶ್ ಸುಚಿತ್ ಪಾತ್ರರಾದರು. ಸುಚಿತ್ ಈಗ ನಾಗಲ್ಯಾಂಡ್ ಪರ ಆಡುತ್ತಿದ್ದಾರೆ.
ಐಸಿಸಿ ಟ್ರೋಫಿ ಗೆದ್ದ5 ತಂಡಕ್ಕೆ ಸನ್ಮಾನ
2025ರ ಚಾಂಪಿಯನ್ಸ್ ಟ್ರೋಫಿ, ಈ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡ, ಮಹಿಳಾ ಏಕದಿನ ವಿಶ್ವಕಪ್, ಅಂಡರ್-19 ಪುರುಷ ಹಾಗೂ ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಭಾರತೀಯ ಕ್ರಿಕೆಟ್ನ ಬಹುತೇಕ ಎಲ್ಲಾ ಆಟಗಾರರು ಸಮಾರಂಭದಲ್ಲಿ ಭಾಗಿಯಾದರು.