
ಚುನಾವಣಾ ಪೂರ್ವ ಸಮೀಕ್ಷೆ: ಬಂಗಾಳದಲ್ಲಿ ಮಮತಾ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದ್ದರೆ, ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸೋಲನುಭವಿಸುವ ಮುನ್ಸೂಚನೆ ಇದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಮರಳಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ.
ನವದೆಹಲಿ: 5 ರಾಜ್ಯಗಳಿಗೆ ಚುನಾವಣೆ ಘೋಷಣೆ ಬೆನ್ನಲ್ಲೇ ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಮತದಾನ ಪೂರ್ವ ಸಮೀಕ್ಷೆ ನಡೆಸಲಾಗಿದೆ. ಮ್ಯಾಜಿಜ್ ಜೊತೆಗೂಡಿ ಐಎಎನ್ಎಸ್ ಸುದ್ದಿಸಂಸ್ಥೆ ನಡೆಸಿರುವ ಸಮೀಕ್ಷೆ ಅನ್ವಯ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಅಧಿಕಾರ ಕಳೆದುಕೊಳ್ಳಲಿದ್ದು, ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಸದ್ಯದ ಪಕ್ಷಗಳೇ ಆಳ್ವಿಕೆ ಮುಂದುವರೆಯಲಿವೆ.
ತಮಿಳುನಾಡು
ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಕದನಕಣವಾಗಿದ್ದ 234 ಸೀಟುಗಳ ತಮಿಳುನಾಡಲ್ಲೀಗ ಹೊಸ ಪಕ್ಷದೊಂದಿಗೆ ದಳಪತಿ ವಿಜಯ್ ಅವರ ಆಗಮನವಾಗಿದೆ. ಇದರಿಂದ ಮತವಿಭಜನೆ ಆಗುವ ಸಂಭವವಿದೆ. ಪರಿಣಾಮ ಬಿಜೆಪಿ ಬೆಂಬಲಿತ ಅಣ್ಣಾಡಿಎಂಕೆ ಶೇ.39ರಿಂದ 40ರಷ್ಟು ಮತ ಪಡೆದು 114-127 ಸೀಟುಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ. ಆಡಳಿತಾರೂಢ ಡಿಎಂಕೆ ಶೇ.37-38ರಷ್ಟು ಮತಗಳೊಂದಿಗೆ 104-114 ಸ್ಥಾನ, ವಿಜಯ್ರ ಟಿವಿಕೆ ಶೇ.14-15ರಷ್ಟು ಮತಗಳನ್ನು ಆಕರ್ಷಿಸಿ 6ರಿಂದ 12 ಸೀಟು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಕೇರಳ
ರಾಜ್ಯದಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ತೀವ್ರ ಹಣಾಹಣಿ ಏರ್ಪಡುವ ನಿರೀಕ್ಷೆಯಿದೆ. ಎಲ್ಡಿಎಫ್ ಶೇ.42-43ರಷ್ಟು ಮತ ಪಡೆದು 61-71 ಸೀಟು ಪಡೆಯಲಿದೆ. ಯುಡಿಎಫ್ ಶೇ.41-42ರಷ್ಟು ಮತಗಳನ್ನು ಸೆಳೆದು 58-69 ಸೀಟುಗಳನ್ನು ತನ್ನದಾಗಿಸಿಕೊಳ್ಳಬಹುದು. ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಶೇ.12-13ರಷ್ಟು ಮತದೊಂದಿಗೆ 2 ಸೀಟುಗಳಿಗೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಪಶ್ಚಿಮ ಬಂಗಾಳ
ರಾಜ್ಯದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ವಿರುದ್ಧ ನೇರಯುದ್ಧ ನಡೆಯಲಿದೆ. ಟಿಎಂಸಿಗೆ ಶೇ.43-45ರಷ್ಟು ಮತಗಳು ಸಿಕ್ಕಿ 115-170 ಸೀಟುಗಳು ಸಿಗಲಿದ್ದರೆ, ಬಿಜೆಪಿಗೆ ಶೇ.41-43ರಷ್ಟು ಮತದಾರರು ಒಲಿದು 100-115 ಸೀಟುಗಳು ದೊರಕಲಿವೆ. ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಶೇ.13-15ರಷ್ಟು ಮಂದಿಯಷ್ಟೇ ಬೆಂಬಲಿಸಲಿದ್ದು, ಸೀಟುಗಳ ಸಂಖ್ಯೆ 5-7ಕ್ಕೆ ಸೀಮಿತವಾಗಿರಲಿದೆ.
ಇದನ್ನೂ ಓದಿ: ಚುನಾವಣೆ ಘೋಷಣೆಗೂ ಕೆಲ ನಿಮಿಷಕ್ಕೂ ಮುನ್ನ ಮಮತಾ ಬಂಪರ್ ಘೋಷಣೆ; ದೀದಿ ಕೊನೇ ಕ್ಷಣದ ಆಟ?
ಅಸ್ಸಾಂ
ಸದ್ಯ ಸಿಎಂ ಹಿಮಂತ ಬಿಸ್ವ ಶರ್ಮಾರ ಸರ್ಕಾರದ ವಿರುದ್ಧ ಆಡಳಿತವಿರೋಧಿ ಅಲೆ ಎದ್ದಿರುವ ಲಕ್ಷಣವಿಲ್ಲ. ಆದಕಾರಣ ಒಟ್ಟು ಮತಗಳಲ್ಲಿ ಶೇ.43-44ರಷ್ಟನ್ನು (96-98 ಸೀಟು) ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ ನೇತೃತ್ವದ ವಿಪಕ್ಷ ಇಂಡಿಯಾ ಕೂಟ ಶೇ.39–40ರಷ್ಟು ಮತ ಪಡೆದು 26-28 ಸೀಟುಗಳನ್ನು ತನ್ನದಾಗಿಸಿಕೊಳ್ಳಬಹುದು. ಉಳಿದ ಪಕ್ಷಗಳ ಮತಪಾಲು ನಗಣ್ಯವಾಗಿರಲಿದೆ.
ಇದನ್ನೂ ಓದಿ: ಬಹು ನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ