
ಬೆಂಗಳೂರು, ಮಾರ್ಚ್ 16: ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಹಿನ್ನೆಲೆ ಭಾರತದಿಂದ ದುಬೈಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದುಗೊಂಡಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳು ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭವಿಷ್ಯದ ಬೇರೆ ದಿನಾಂಕಕ್ಕೆ ತಮ್ಮ ಪ್ರಯಾಣವನ್ನು ಮರುನಿಗದಿ ಮಾಡಲು ಅವಕಾಶವನ್ನು ನೀಡಲಾಗುತ್ತದೆ. ಪ್ರಯಾಣವೆನ್ನುವವರು ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಪಡೆಯುತ್ತಾರೆ. ಇನ್ನು ವಿಮಾನ ರದ್ದಿನಿಂದ ದುಬೈನಲ್ಲಿ ಸಿಲುಕಿರುವ ಪ್ರಯಾಣಿಕರು ಪರದಾಟ ನಡೆಸುತ್ತಿರುವ ಪ್ರಸಂಗವೂ ವರದಿಯಾಗಿದೆ.
ಬೆಂಗಳೂರಿನಲ್ಲಿ 24 ವಿಮಾನಗಳ ಹಾರಾಟ ಕ್ಯಾನ್ಸಲ್
ದುಬೈ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇದರಿಂದಾಗಿ ದುಬೈಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ದಿನದ ಮಟ್ಟಿಗೆ ರದ್ದಾಗಿವೆ.
ನಾವು ಎಲ್ಲವನ್ನೂ ನೀಡುತ್ತಿದ್ದೇವೆ…
– ಏರ್ ಇಂಡಿಯಾ (@airindia) ಮಾರ್ಚ್ 16, 2026
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಿರ್ಗಮನ ಮತ್ತು ಆಗಮಿಸಬೇಕಿದ್ದ ಒಟ್ಟು 24 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 11 ವಿಮಾನಗಳು ಮತ್ತು ಅರಬ್ ದೇಶಗಳಿಂದ ಕೆಐಎಬಿಗೆ ಆಗಮಿಸಬೇಕಾಗಿತ್ತು 13 ವಿಮಾನಗಳು ರದ್ದಾಗಿವೆ. ಅಬುದಾಬಿ, ರಿಯಾದ್, ಜಿಡ್ಡಾ, ಡಮಾಮ್, ದುಬೈ ಹಾಗೂ ದೋಹಾದಿಂದ ಕೆಐಎಬಿಗೆ ಆಗಮಿಸಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ.
ಇದನ್ನೂ ಓದಿ: ಯುದ್ಧದ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ; ಯುಎಇಯಲ್ಲಿ 19 ಭಾರತೀಯರು ಸೇರಿ 35 ಮಂದಿ ಬಂಧನ
ಮಂಗಳೂರು ಏರ್ಪೋರ್ಟ್ನಿಂದಲೂ ವಿಮಾನ ಹಾರಾಟ ವ್ಯತ್ಯಯ
ದುಬೈ ವಿಮಾನ ನಿಲ್ದಾಣದ ಬಳಿ ದಾಳಿ ಹಿನ್ನೆಲೆ ಮಂಗಳೂರಿನಿಂದ ದುಬೈ, ಡಮಾಮ್ ಮತ್ತು ಅಬುಧಾಬಿಗೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಇಂದು ಮತ್ತು ನಾಳೆಯ ವಿಮಾನ ಹಾರಾಟ ರದ್ದಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯ ಹಿನ್ನೆಲೆ ವಿಮಾನಯಾನ ಹಾರಾಟ ನಡೆಸುತ್ತಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.