
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಹೊಸ ಬಸ್ ಖರೀದಿ ಮಾಡುತ್ತಿದ್ದು, ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಿರುವ ಎರಡು ಸಾವಿರ ಬಸ್ ಸೇರಿದಂತೆ ಈ ವರ್ಷ ಒಂದು ಸಾವಿರ ಬಸ್ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ (ಮಾ.19): ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಹೊಸ ಬಸ್ ಖರೀದಿ ಮಾಡುತ್ತಿದ್ದು, ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಿರುವ ಎರಡು ಸಾವಿರ ಬಸ್ ಸೇರಿದಂತೆ ಈ ವರ್ಷ ಒಂದು ಸಾವಿರ ಬಸ್ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಜೆಪಿಯ ಭಾರತಿಶೆಟ್ಟಿ, ಜೆಡಿಎಸ್ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದಿನ ಸರ್ಕಾರ ಹೊಸ ಬಸ್ಗಳ ಖರೀದಿ, ಹೊಸದಾಗಿ ಸಿಬ್ಬಂದಿಗಳ ನೇಮಕಾತಿ ಹಾಗೂ ವೇತನ ಪರಿಷ್ಕರಣೆ ಮಾಡಲಿಲ್ಲ. ಆದರೆ 2023 ರಿಂದ 2025-26ನೇ ಸಾಲಿನವರೆಗೆ 6082 ಹೊಸ ಬಸ್ ಖರೀದಿ ಹಾಗೂ ಖರೀದಿ ಹಂತದಲ್ಲಿದೆ ಎಂದರು. ಬಿಜೆಪಿಯ ವೈ.ಎಂ. ಸತೀಶ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗೆ ಹೊಸ ಬಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವರ್ಷದ ಮಾರ್ಚ್ ಅಂತ್ಯಕ್ಕೆ ಕೆಎಸ್ಆರ್ಟಿಸಿಗೆ 60 ನಾನ್ ಎಸಿ ಸ್ಲೀಪರ್ ಬಸ್, 45 ಕರ್ನಾಟಕ ಸಾರಿಗೆ ಮಾದರಿ ಬಸ್ ಹಾಗೂ ವಾಯವ್ಯ ಸಾರಿಗೆ ನಿಗಮಕ್ಕೆ 354 ಬಸ್ ಸೇರ್ಪಡೆಯಾಗಲಿವೆ. ಮಾರ್ಚ್ ನಂತರ 850 ಬಸ್ಗಳು ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಗೆ ಸೇರ್ಪಡೆಯಾಗಲಿವೆ. ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಿದ ಅನ್ವಯ ಖರೀದಿಸಲಿರುವ 2000 ಬಸ್ಗಳ ಪೈಕಿ ಕೆಎಸ್ಆರ್ಟಿಸಿಗೆ 900, ವಾಯುವ್ಯ ನಿಗಮಕ್ಕೆ 700 ಹಾಗೂ ಕಲ್ಯಾಣ ಕರ್ನಾಟಕ ನಿಗಮಕ್ಕೆ 400 ಬಸ್ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
4833 ಕೋಟಿ ರು. ಸಾಲ
ಹೊಸ ಬಸ್ ಖರೀದಿ, ನೌಕರರ ಪರಿಷ್ಕೃತ ವೇತನ ಶ್ರೇಣಿ ನಿಗದಿ ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟಾರೆ ಸಾಲದ ಮೊತ್ತ 4833 ಕೋಟಿ ರು. ಇದೆ. ಬಾಕಿ ಉಳಿಸಿಕೊಂಡಿರುವ ಭವಿಷ್ಯ ನಿಧಿ ಮೊತ್ತ ಹಾಗೂ ಇಂಧನ ಬಾಕಿ ಮೊತ್ತ ಪಾವತಿಸಲು ಹಣಕಾಸು ಸಂಸ್ಥೆಗಳಿಂದ ಎರಡು ಸಾವಿರ ಕೋಟಿ ಸಾಲ ಪಡೆಯಲು ಸರ್ಕಾರ ಅನುಮೋದನೆ ನೀಡಿದ್ದು, ಸಾಲದ ಮೊತ್ತವನ್ನು ಸರ್ಕಾರ ಮರು ಪಾವತಿ ಮಾಡುತ್ತದೆ ಎಂದು ಸಚಿವರು ತಿಳಿಸಿದರು.