
ಎಸ್ಎಸ್ಎಲ್ಸಿ ಪರೀಕ್ಷೆಯ ಕಾರಣ ಯುಗಾದಿ ಹಬ್ಬಕ್ಕೆ ಮನೆಗೆ ಹೋಗಲಾಗದ ವಸತಿ ಶಾಲೆಯ ವಿದ್ಯಾರ್ಥಿಗಳ ಬೇಸರವನ್ನು ಶಿಕ್ಷಕರು ದೂರಾಗಿಸಿದ್ದಾರೆ. ಕಡೂರಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕರು ತಾವೇ ಅಭ್ಯಂಜನ ಸ್ನಾನ ಮಾಡಿಸಿ, ಹಬ್ಬದೂಟ ಬಡಿಸಿ ಮನೆಯ ವಾತಾವರಣ ನಿರ್ಮಿಸಿ ಮಾದರಿಯಾಗಿದ್ದಾರೆ.
ಬೀರೂರು (ಮಾ.22): ಯುಗಾದಿ ಹಬ್ಬವೆಂದರೆ ಎಲ್ಲರಿಗೂ ಸಂತೋಷ, ಹೊಸ ವರ್ಷಾಚರಣೆ ಆರಂಭವಾಗುವುದು ಈ ದಿನದಿಂದಲೇ, ಈ ಬಾರಿ ಪರಾಭವ ನಾಮ ಸಂವತ್ಸರವನ್ನು ಆಚರಿಸಲು ಮತ್ತು ಸ್ವಾಗತಿಸಲು ಸಿದ್ದರಿದ್ದರೆ, ವಸತಿ ಶಾಲೆ ಮಕ್ಕಳು ಹಬ್ಬವನ್ನು ಆಚರಿಸಲು ಪರೀಕ್ಷೆ ಸಮಸ್ಯೆಯಾಯಿತು.
ಎಲ್ಲೆಡೆ ಎಸ್ಎಸ್ಎಲ್ಸಿ ಪರೀಕ್ಷೆ ಕಳೆದ ಮಾ.18ರಿಂದಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲರು ಯಾವ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸದೆ, ಶ್ರದ್ದೆ ಮತ್ತು ಏಕಾಗ್ರತೆಯಿಂದ ಮಕ್ಕಳನ್ನು ತಮ್ಮ ವಸತಿ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಪಠ್ಯಗಳನ್ನು ಕಲಿಸುತ್ತಿದ್ದಾರೆ.
ಇನ್ನೊಂದೆಡೆ ಯುಗಾದಿ ಹಬ್ಬವನ್ನು ನಾವು ಮಿಸ್ ಮಾಡಿಕೊಂಡೆವು, ಈ ಬಾರಿ ಊರಿಗೆ ಹೋಗಿದ್ದರೆ ಅಪ್ಪ-ಅಮ್ಮಂದಿರು ಎಣ್ಣೆ ಹಚ್ಚಿ ನಮಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು ಎಂಬ ವಿದ್ಯಾರ್ಥಿಗಳ ಮನೋಭಾವನೆ ಅರಿತ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಚ್.ಗಿರೀಶ್ ಮತ್ತು ನಿಲಯಾಧಿಕಾರಿ ಹೊನ್ನಪ್ಪ, ಶಿಕ್ಷಕರ ತಂಡ ಮಕ್ಕಳೊಂದಿಗೆ ಯುಗಾದಿ ಆಚರಿಸಲು ಮುಂದಾಗಿ, ತಾವೇ ಅರಿಶಿಣ, ಹರಳೆಣ್ಣೆ ತರಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಚ್ಚಿ ಅವರಿಗೆಲ್ಲ ಅಭ್ಯಂಜನ ಸ್ನಾನ ಮಾಡಿಸಿ ಮಕ್ಕಳೊಂದಿಗೆ ಯುಗಾದಿ ಅಚರಿಸಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿಸಿದೆ.
ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ತಂಡ ಉತ್ತಮವಾಗಿ ಕಾರ್ಯನಿರ್ವಸುವುದರ ಜತೆ ನಮ್ಮಂತ ವಿದ್ಯಾರ್ಥಿಗಳ ಮನಸ್ಸನ್ನು ಅರಿತು, ಅವರೇ ಯುಗಾದಿ ಹಬ್ಬಕ್ಕೆ ಸಂಭ್ರಮದಿಂದ ಆಚರಿಸಲು ನಮಗೆಲ್ಲ ಸ್ವತಃ ಮೈಗೆಲ್ಲ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿದ್ದು ಯುಗಾದಿ ಹಬ್ಬದ ಸಂಭ್ರವನ್ನು ಹೆಚ್ಚಿಸುವುದರ ಜೊತೆ ನಮಗೆ ಮನೆಕಡೆಯ ನೆನಪು ಕಾಡದ ಹಾಗೆ ನೋಡಿಕೊಂಡಿದ್ದು ಸಂತಸ ತಂದಿದೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಾದ ನಾವು ಅವರ ನಿರೀಕ್ಷೆ ತಕ್ಕಂತೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶಾಲೆಯ ಹೆಸರನ್ನು ಉಳಿಸುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ದೃಪದ್, ಲಿಖಿತ್.
ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವ ಮಕ್ಕಳನ್ನು ಮನೆಗೆ ಕಳಿಸಿರುವುದಿಲ್ಲ. ಮಕ್ಕಳು ಯುಗಾದಿ ಆಚರಿಸಲಿಲ್ಲ ಎನ್ನುವ ಮನೋಭಾವನೆ ಅರಿತು ಪ್ರತಿ ಸಾರಿಯಂತೆ ಈ ಬಾರಿಯು ಕೂಡ ಅವರೊಂದಿಗೆ ಕೂಡಿ ಹಬ್ಬ ಆಚರಿಸಲಾಯಿತು. ಅವರಿಗೆ ಮನೆಯಲ್ಲಿ ಹಬ್ಬದಲ್ಲಿ ಹೇಗೆ ರುಚಿಕರ ಹೋಳಿಗೆ ಮತ್ತಿತರ ಖಾದ್ಯಗಳನ್ನು ಮಾಡಿಸಿ ಅವರ ಜತೆ ಹಬ್ಬ ಆಚರಿಸುವುದು ನಮಗೆ ಆತ್ಮ ತೃಪ್ತಿ ತಂದಿದೆ ಎನ್ನುತ್ತಾರೆ ಪ್ರಾಂಶುಪಾಲ ಕೆ.ಎಚ್.ಗಿರೀಶ್.