
ಸೆಕ್ಯುರಿಟಿ ಏಜೆನ್ಸಿ ಹೆಸರಲ್ಲಿ, ರಾಮಾಂಜಿ ಎಂಬಾತ ಅಸಹಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ದೈಹಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿ, ಲಕ್ಷಾಂತರ ರೂಪಾಯಿ ಹಣ ಮತ್ತು ಒಡವೆ ಪಡೆದು ಪರಾರಿಯಾಗುತ್ತಿದ್ದ ಈತನನ್ನು ಸಂತ್ರಸ್ತೆಯೊಬ್ಬಳ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮಾ.24): ಸೆಕ್ಯುರಿಟಿ ಏಜೆನ್ಸಿ ಹೆಸರಲ್ಲಿ ಅಸಹಾಯಕ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಬದಲು ಅವರ ಬಾಳನ್ನೇ ನರಕವಾಗಿಸುತ್ತಿದ್ದ ಕಾಮುಕನೊಬ್ಬನ ಕರಾಳ ಮುಖವಾಡ ಈಗ ಕಳಚಿದೆ. ಪತಿಯಿಂದ ದೂರಾದ ಮತ್ತು ವಿಧವೆಯರನ್ನೇ ಟಾರ್ಗೆಟ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಮತ್ತು ಆರ್ಥಿಕವಾಗಿ ವಂಚಿಸುತ್ತಿದ್ದ ‘ಕಿಲಾಡಿ’ ರಾಮಾಂಜಿಯನ್ನು ಪೊಲೀಸರು ಅತಿಥಿ ಮಾಡಿಸಿದ್ದಾರೆ.
‘ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್’ ಎಂಬ ಸೆಕ್ಯುರಿಟಿ ಮತ್ತು ಹೌಸ್ ಕೀಪಿಂಗ್ ಏಜೆನ್ಸಿಯ ಎಂಡಿ ರಾಮಾಂಜಿ. ವಿವಿಧ ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯುರಿಟಿ ಕೆಲಸ ಕೊಡಿಸುತ್ತಿದ್ದ ಈತನ ಬಳಿ ಸುಮಾರು 60ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬರುತ್ತಿದ್ದ ಹೆಣ್ಣುಮಕ್ಕಳನ್ನೇ ಈತ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.
ವಂಚನೆ ಮಾಡೋ ರೀತಿ ಹೀಗಿತ್ತು
ಪತಿಯಿಂದ ದೂರಾದವರು ಅಥವಾ ಪತಿಯನ್ನು ಕಳೆದುಕೊಂಡ ಮಹಿಳೆಯರೇ ಇವನ ಟಾರ್ಗೆಟ್ ಆಗಿದ್ದರು. ತನಗೆ ಮದುವೆಯಾಗಿಲ್ಲ, ತಾನು ಒಂಟಿ ಎಂದು ನಂಬಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ವಾಸ್ತವದಲ್ಲಿ ಈತನಿಗೆ ಸುಧಾ ಎಂಬಾಕೆಯೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. “ನಿಮಗೆ ಬಾಳು ಕೊಡ್ತೀನಿ” ಎಂದು ನಂಬಿಸಿ ಅವರ ಮನೆಯಲ್ಲೇ ಎರಡು-ಮೂರು ತಿಂಗಳು ಠಿಕಾಣಿ ಹೂಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಅವರ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ನಂತರ ಕಷ್ಟದಲ್ಲಿದ್ದೇನೆ ಎಂದು ನಂಬಿಸಿ ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಹಣ ಮತ್ತು ಒಡವೆಗಳನ್ನು ಪಡೆದು ಕೈಕೊಡುತ್ತಿದ್ದ ಎನ್ನಲಾಗಿದೆ.
ಬಲೆಗೆ ಬಿದ್ದವರು ಐವರು ಹೆಣ್ಣುಮಕ್ಕಳು!
ಇನ್ನು ರಾಮಾಂಜಿಯ ಕಾಮದ ಬಲೆಗೆ ಒಟ್ಟು ಐದು ಹೆಣ್ಣುಮಕ್ಕಳು ಬಿದ್ದಿದ್ದಾರೆ. ಸುಧಾ ಎನ್ನುವ ಹುಡುಗಿ ರಾಮಾಂಜಿಯ ಮೊದಲ ಪತ್ನಿ, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಉಮಾ ಎಂಬಾಕೆಗೆ ನಂಬಿಸಿ ಬರೋಬ್ಬರಿ 10 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ. ಏಜೆನ್ಸಿಗೆ ಕೆಲಸಕ್ಕೆ ಬಂದಿದ್ದ ಅನಿತಾ ಎನ್ನುವಾಕೆಯ ಬಾಳಿನಲ್ಲೂ ಚೆಲ್ಲಾಟವಾಡಿದ್ದಾನೆ. ಆ ಬಳಿಕ ಕೆಲಸಕ್ಕೆ ಬಂದಿದ್ದ ಹೇಮಾ ಎಂಬಾಕೆಗೆ ಮದುವೆಯ ಆಮಿಷವೊಡ್ಡಿ ದೋಖಾ ಮಾಡಿದ್ದಾನೆ. ಇನ್ನು ಗಾಯತ್ರಿ ಎನ್ನುವಾಕೆ ನೀಡಿದ ದೂರಿನಿಂದಲೇ ಈಗ ರಾಮಾಂಜಿಯ ಕಾಮಪುರಾಣ ಬಯಲಾಗಿದೆ. ಈಕೆಯೊಂದಿಗೆ ಲಿವಿಂಗ್ ರಿಲೇಶನ್ನಲ್ಲಿದ್ದ ಈತ, ಲಕ್ಷಾಂತರ ಹಣ ಮತ್ತು ಒಡವೆಗಳನ್ನು ಅಡಮಾನವಿಟ್ಟು ಪರಾರಿಯಾಗಿದ್ದ.
ಪೊಲೀಸ್ ಕಾರ್ಯಾಚರಣೆ
ವಂಚನೆಗೊಳಗಾದ ಗಾಯಿತ್ರಿ ಫೆಬ್ರವರಿ 18ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ರಾಮಾಂಜಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಪ್ರಸ್ತುತ ಈತ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ ಎನ್ನಲಾಗಿದೆ.