
ಯುದ್ಧ ಸಂಕಷ್ಟದ ಬೆನ್ನಲ್ಲೇ ತುರ್ತು ಸರ್ವ ಪಕ್ಷ ಸಭೆ ಕರೆದ ಮೋದಿ, ಇಂದು ಮಹತ್ವದ ಘೋಷಣೆ, ಯುದ್ಧ ಬಿಕ್ಕಟ್ಟಿನಿಂದ ಭಾರತದಲ್ಲಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಈಗಾಗಲೇ ಕೋವಿಡ್ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ ಎಂದಿರುವ ಮೋದಿ ಇಂದು ಸಂಜೆ ಕೆಲ ಘೋಷಣೆ ಮಾಡಲಿದ್ದಾರೆ.
ನವದೆಹಲಿ (ಮಾ.25) ಮಧ್ಯಪ್ರಾಚ್ಯ ದೇಶಗಳ ಯುದ್ಧ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಯುದ್ದ ವಿಸ್ತರಣೆಗೊಳ್ಳುತ್ತಿರುವುದು ಮಾತ್ರವಲ್ಲ ವ್ಯಾಪಿಸುತ್ತಿದೆ. ಡ್ರೋನ್, ಮಿಸೈಲ್ ದಾಳಿಗಳು ತೀವ್ರಗೊಳ್ಳುತ್ತಿದೆ. ಸರಕು ಸಾಗಾಣೆ ಹಡಗುಗಳು ಹೊರ್ಮುಜ್ ಜಲಸಂಧಿ ದಾಟಿ ಬರುವುದೇ ಕಷ್ಟವಾಗಿದೆ. ಈಗಾಗಲೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ಎದುರಾಗಿರುವ ಸಂಕಷ್ಟದ ಕುರಿತು ಮಾತನಾಡಿದ್ದಾರೆ. ಕೋವಿಡ್ಗಿಂತಲೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಮೋದಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ತುರ್ತು ಸರ್ವ ಪಕ್ಷ ಸಭೆ ಕರೆದಿದ್ದಾರೆ.
ಸಂಜೆ 5 ಗಂಟೆಗೆ ತುರ್ತು ಸಭೆ
ಸರ್ವ ಪಕ್ಷಗಳ ನಾಯಕರನ್ನು ತುರ್ತು ಸಭೆಗೆ ಆಹ್ವಾನಿಸಲಾಗಿದೆ. ಸಂಸತ್ತಿನಲ್ಲಿ ಮಧ್ಯಪ್ರಾಚ್ಯ ಯುದ್ದ ಪರಿಸ್ಥಿತಿ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶ ಒಗಟ್ಟಿನಿಂದ ಪರಿಸ್ಥಿತಿ ಎದುರಿಸಬೇಕಿದೆ ಎಂದಿದ್ದರು. ಇತ್ತ ಹಲವು ಪಕ್ಷಗಳು ಕೆಲ ಸಲಹೆ ಸೂಚನೆಗಳನ್ನು ನೀಡಿತ್ತು. ಇದೀಗ ಮಧ್ಯಪ್ರಾಚ್ಯ ಯುದ್ದ ಬಿಕ್ಕಟ್ಟು ಹಾಗೂ ದೇಶದ ಮುಂದಿರುವ ಸವಾಲುಗಳ ಕುರಿತು ಸರ್ವ ಪಕ್ಷ ಸಭೆಯಲ್ಲಿ ಚರ್ಚೆಯಾಗಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆ ತುರ್ತು ಸರ್ವ ಪಕ್ಷ ಸಭೆ ನಡೆಯಲಿದೆ.
ಸಭೆ ಬಳಿಕ ಕೇಂದ್ರ ಸರ್ಕಾರ ಕೆಲ ನಿರ್ಧಾರಗಳನ್ನು ಕೈಗೊಳ್ಳಲಿದೆ. ಸರ್ವ ಪಕ್ಷ ನಾಯಕರ ಸಲಹೆ ಸೂಚನೆ, ಟೀಕೆಗಳನ್ನು ಆಲಿಸಿ ನಿರ್ಧಾರ ಕಸೈಗೊಳ್ಳಲಿದೆ. ಪ್ರಮುಖವಾಗಿ ಭಾರತ ಗ್ಯಾಸ್ ಕೊರತೆ ಎದುರಿಸುತ್ತಿದೆ. ಹೊಟೆಲ್ಗಳು ಬಾಗಿಲು ಮುಚ್ಚಿದೆ. ಹಲವು ಮನೆಗಳಲ್ಲೂ ಗ್ಯಾಸ್ ಕೊರತೆ ಎದುರಾಗಿದೆ. ಪೂರೈಕೆ ಸಮಸ್ಯೆಗಳು ತೀವ್ರಗೊಂಡಿದೆ. ಒಂದೆಡೆ ಹೊಟೆಲ್ ಮಾಲೀಕರ ಸಂಘ ಸತತವಾಗಿ ಈ ಕುರಿತು ಪತ್ರ ಬರೆಯುತ್ತಿದೆ. ಹೀಗಾಗಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳುವ ಮೊದಲು ಕೆಲ ನಿರ್ಧಾರ ಘೋಷಣೆಯಾಗುವ ಸಾಧ್ಯತೆ ಇದೆ.
ಸಂಸತ್ತಿನ ಎರಡು ಸಭೆಗಳಲ್ಲಿ ಮಧ್ಯಪ್ರಾಚ್ಯ ಯುದ್ದ ಭಾರತದ ಸಂಕಷ್ಟ ಕುರಿತು ಸಂಪೂರ್ಣ ಚರ್ಚೆಯಾಗಲಿಲ್ಲ ಎಂದು ಕಾಂಗ್ರೆಸ್ ಅಸಮಾಧಾನಗೊಂಡಿದೆ. ಸರ್ಕಾರ ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜನಸಾಮಾನ್ಯರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತುರ್ತು ನಿರ್ಧಾರಗಳ ಅಶ್ಯಕತೆ ಇದೆ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಸರ್ವ ಪಕ್ಷ ಸಭೆ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಸಂಜೆ 5 ಗಂಟೆಯ ಸಭೆಯಲ್ಲಿ ಕೇಂದ್ರ ಸರ್ಕಾರ ಕೆಲ ನಿರ್ಧಾರ ಸರ್ವ ಪಕ್ಷದ ಮುಂದಿಡಲಿದೆ.