
Organ donation: ವಿಜಯಪುರದಲ್ಲಿ ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಆಕಾಶ್ ಹರಿಜನ ಎಂಬ ಬಾಲಕನ ಸಾವಿನ ನೋವಿನಲ್ಲೂ, ಪೋಷಕರು ಅವನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಆದರೆ, ಹಠಾತ್ ರಕ್ತದೊತ್ತಡ ಕುಸಿತದಿಂದಾಗಿ ಅಂತಿಮವಾಗಿ ಮಗನ ನೇತ್ರಗಳನ್ನು ಮಾತ್ರ ದಾನ ಮಾಡಲು ಸಾಧ್ಯವಾಯ್ತು.
ಮಗನ ಸಾವಿನಲ್ಲೂ ಸಾರ್ಥಕತೆ
ವಿಜಯಪುರ: ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಮಗನ ಸಾವಿನ ನೋವಿನಲ್ಲೂ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಕಳೆದ ಮಾರ್ಚ್ 22 ರಂದು ರಸ್ತೆ ಅಪಘಾತದಲ್ಲಿ ಆಕಾಶ ಹರಿಜನ ಎಂಬ ಬಾಲಕ ತೀವ್ರವಾಗಿ ಗಾಯಗೊಂಡಿದ್ದ ಆತನ ಮಿದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಮಗ ಇನ್ನು ಬದುಕಿ ಬರುವುದು ಸಾಧ್ಯವಿಲ್ಲ ಎಂದು ಅರಿತ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ನಿರ್ಧರಿಸಿದರು. ಅದರಂತೆ ಆಕಾಶ್ ತಂದೆ ಮಲ್ಲಪ್ಪ ಹರಿಜನ ಹಾಗೂ ತಾಯಿ ಸುಜಾತ ಮಗನ ಅಂಗಾಂಗ ದಾನ ಮಾಡುವುದಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಬಸ್ನಲ್ಲಿ ಸೀಟಿಗಾಗಿ ಓಟ, ಚಕ್ರದಡಿ ಸಿಲುಕಿದ ಕಂದಮ್ಮ: ಅಮ್ಮನ ಕೈನಿಂದ ಕೆಳಗೆ ಬಿದ್ದು ದುರಂತ
ಸ್ವಇಚ್ಛೆಯಿಂದ ಮಗನ ಕಣ್ಣುಗಳ ದಾನ
ಆದರೆ ಹಠಾತ್ ರಕ್ತದೊತ್ತಡ ಕಡಿಮೆಯಾದ ಕಾರಣ ಇತರೆ ಅಂಗಾಂಗಗಳನ್ನು ದಾನ ಪಡೆಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಕೊನೆಯ ಕ್ಷಣದಲ್ಲಿ ಮಗನ ನೇತ್ರಗಳನ್ನು ದಾನ ಮಾಡುವುದಕ್ಕ ಬಾಲಕನ ತಂದೆ ತಾಯಿ ನಿರ್ಧರಿಸಿದರು. ಹೀಗಾಗಿ ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಲಾಯ್ತು. ಸ್ವಯಂಪ್ರೇರಿತವಾಗಿ ಪೋಷಕರು ದಾನ ಮಾಡಿದ ನೇತ್ರಗಳನ್ನು ಪಡೆದ ವೈದ್ಯರು ಅಗತ್ಯ ಇರುವವರಿಗೆ ಅವುಗಳನ್ನು ಅಳವಡಿಸಲಿದ್ದಾರೆ. ಆಸ್ಪತ್ರೆಯ ಆಡಳಿತಾಧಿಕಾರಿಗಳು ಬಾಲಕನ ಕುಟುಂಬಕ್ಕೆ ಧನ್ಯವಾದ ಹೇಳಿದ್ದು, ಬಾಲಕನ ಪಾರ್ಥಿವ ಶರೀರಕ್ಕೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ: ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ