
‘ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡಿದ್ದೆ. ಆದರೆ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಲು ನಿರ್ಧರಿಸಿದ್ದೇನೆ. ಈ ವರ್ಷ ಕನಿಷ್ಠ ಎರಡು ಹೊಸ ಪ್ರಾಜೆಕ್ಟ್ಗಳಿಗೆ ಸಹಿ ಹಾಕುವ ಆಲೋಚನೆ ಇದೆ’ ಎಂದು ಅವರು ತಮ್ಮ ಫ್ಯೂಚರ್ ಪ್ಲಾನ್ ಬಿಚ್ಚಿಟ್ಟಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಕೇರಳದ ಕಡೆ ಹೊರಟ ರಾಧಿಕಾ ಕುಮಾರಸ್ವಾಮಿ
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಅಭಿಮಾನಿ ಬಳಗ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮತ್ತೆ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. 2024ರಲ್ಲಿ ತೆರೆಕಂಡ ‘ಭೈರಾದೇವಿ’ ಚಿತ್ರದ ಯಶಸ್ಸಿನ ನಂತರ ಸಾಮಾಜಿಕವಾಗಿ ಮತ್ತು ಚಿತ್ರರಂಗದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಈ ಸುಂದರಿ, ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಕೇವಲ ಕನ್ನಡಕ್ಕೆ ಸೀಮಿತವಾಗದೆ, ಮಲಯಾಳಂ ಚಿತ್ರರಂಗಕ್ಕೂ ಲಗ್ಗೆ ಇಡುತ್ತಿರುವುದು ವಿಶೇಷ!
ಮಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ!
ಹಲವು ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ರಾಧಿಕಾ, ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಮಲಯಾಳಂ ಚಿತ್ರರಂಗ (Mollywood) ಅವರಿಗೆ ಹೊಸದು. ಸದ್ಯದ ಮಾಹಿತಿ ಪ್ರಕಾರ, ಕೇರಳದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಅತ್ಯುತ್ತಮ ಕಥೆಯೊಂದಿಗೆ ರಾಧಿಕಾ ಅವರನ್ನು ಸಂಪರ್ಕಿಸಿದೆ.
ಈ ಬಗ್ಗೆ ಸ್ವತಃ ರಾಧಿಕಾ ಅವರೇ ಮಾತನಾಡಿದ್ದು, “ಮಲಯಾಳಂ ಚಿತ್ರವೊಂದರ ಆಫರ್ ಬಂದಿರುವುದು ನಿಜ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. ಸದ್ಯ ಡೇಟ್ಸ್ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಈ ಬಾರಿ ಸ್ಕ್ರಿಪ್ಟ್ ಆಯ್ಕೆಯಲ್ಲಿ ಫುಲ್ ಎಚ್ಚರಿಕೆ!
ರಾಧಿಕಾ ಕುಮಾರಸ್ವಾಮಿ ಅವರು ಈ ಹಿಂದೆ ಮಾಡಿದ್ದ ಸಿನಿಮಾಗಳಿಗಿಂತ ಈ ಬಾರಿಯ ಸಿನಿಮಾಗಳು ಭಿನ್ನವಾಗಿರಲಿವೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಅವರು ಈಗ ಕಥೆಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಎಚ್ಚರಿಕೆ ವಹಿಸುತ್ತಿದ್ದಾರಂತೆ. ಕೇವಲ ಗ್ಲಾಮರ್ ಪಾತ್ರಗಳಿಗಿಂತ ಪರ್ಫಾರ್ಮೆನ್ಸ್ ಆಧಾರಿತ ಕಥೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. “ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡಿದ್ದೆ. ಆದರೆ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಲು ನಿರ್ಧರಿಸಿದ್ದೇನೆ. ಈ ವರ್ಷ ಕನಿಷ್ಠ ಎರಡು ಹೊಸ ಪ್ರಾಜೆಕ್ಟ್ಗಳಿಗೆ ಸಹಿ ಹಾಕುವ ಆಲೋಚನೆ ಇದೆ” ಎಂದು ಅವರು ತಮ್ಮ ಫ್ಯೂಚರ್ ಪ್ಲಾನ್ ಬಿಚ್ಚಿಟ್ಟಿದ್ದಾರೆ.
‘ಅಜಾಗ್ರತ’ ಸಿನಿಮಾದಲ್ಲಿ ದೊಡ್ಡ ತಾರಾಗಣ!
ರಾಧಿಕಾ ಅಭಿನಯದ ‘ಅಜಾಗ್ರತ’ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಂ. ಶಶಿಧರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ, ತಮಿಳಿನ ಸಮುತಿರಕಣಿ ಮತ್ತು ಸುನಿಲ್ ಅಂತಹ ಸ್ಟಾರ್ ನಟರು ರಾಧಿಕಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾವಾಗಿದ್ದು, ರಾಧಿಕಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡುವ ನಿರೀಕ್ಷೆಯಿದೆ.
ಸದ್ಯಕ್ಕೆ ಎಲ್ಲವನ್ನೂ ಬದಿಗಿಟ್ಟು ಪೂರ್ಣ ಪ್ರಮಾಣದಲ್ಲಿ ಸಿನಿಮಾದತ್ತ ಗಮನ ಹರಿಸುತ್ತಿದ್ದಾರೆ. ಒಟ್ಟಾರೆಯಾಗಿ, ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳ ಮೂಲಕ ರಾಧಿಕಾ ಕುಮಾರಸ್ವಾಮಿ ಅವರು ಮತ್ತೆ ಚಿತ್ರರಂಗದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಲು ಹೊರಟಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಮಲಯಾಳಂ ಚಿತ್ರರಂಗದಲ್ಲಿ ಈ ‘ಕನ್ನಡದ ನವಿಲು’ ಹೇಗೆ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಿದೆ.