
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಸಂಭವಿಸಿದ ಭಾರಿ ಹಿಮಪಾತದಲ್ಲಿ 7 ಜನರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಡಜನ್ಗಟ್ಟಲೆ ವಾಹನಗಳು ಹಿಮದಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ
ಶ್ರೀನಗರ: ಜಮ್ಮುಕಾಶ್ಮೀರದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭಾರಿ ಹಿಮಪಾತ 7 ಜನರನ್ನು ಬಲಿಪಡೆದಿದೆ. ತೀವ್ರವಾದ ಹಿಮಪಾತದಿಂದಾಗಿ ಡಜನ್ಗಟ್ಟಲೇ ವಾಹನಗಳ ಮೇಲೆ ಹಿಮಬಿದ್ದು ವಾಹನಗಳು ಹಿಮದಡಿ ಹೂತು ಹೋಗಿದ್ದರಿಂದ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 7 ಜನ ಮೃತಪಟ್ಟು 5 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮದಡಿ ಹೂತು ಹೋದ ಡಜನ್ಗಟ್ಟಲೇ ವಾಹನಗಳು
ಲಡಾಖ್ನ ಝೋಜಿಲಾ ಪಾಸ್ನಲ್ಲಿರುವ ಝೀರೋ ಪಾಯಿಂಟ್ ಮತ್ತು ಮಿನಿಮಾರ್ಗ್ ನಡುವಿನ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಹಿಮಪಾತ ಸಂಭವಿಸಿದ ಬಳಿಕ ಈ ಅವಘಡ ನಡೆದಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಎಕ್ಸ್ ಮೂಲಕ ಹೇಳಿದಾರೆ.
ಜೋಜಿ ಲಾದಲ್ಲಿ ಹಿಮಪಾತದ ದುರದೃಷ್ಟಕರ ಸುದ್ದಿ ಕೇಳಿದೆ. ಕಾರ್ಗಿಲ್ನ ಡಿಸಿ ಮತ್ತು ಎಸ್ಎಸ್ಪಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಜ್ಜುಗೊಳಿಸುವಂತೆ ನಾನು ನಿರ್ದೇಶಿಸಿದ್ದೇನೆ. ವಿಪತ್ತು ಪರಿಹಾರ ಪಡೆಗಳು ಮತ್ತು ಬಿಆರ್ಒ (ಗಡಿ ರಸ್ತೆಗಳ ಸಂಸ್ಥೆ) ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಘಟನೆಯ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಹಿಮವನ್ನು ತೆರವುಗೊಳಿಸಲು ಮತ್ತು ಹಿಮದಡಿ ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನ ಪೆಂಟ್ಹೌಸನ್ನು Airbnbಗೆ ಬಾಡಿಗೆ ನೀಡುವುದನ್ನು ವಿರೋಧಿಸಿದ್ದಕ್ಕೆ ಮಹಿಳೆ ಕೊಲೆ
ಜೋಜಿಲಾ ಪಾಸ್ನ ದಯಾಳ್ ಸ್ಲೈಡ್ ಬಳಿ ಹಿಮಪಾತಕ್ಕೆ ಸಂಬಂಧಿಸಿದಂತೆ ನ್ಯೂಸ್ ಏಜೆನ್ಸಿ ಎಎನ್ಐ ಹಂಚಿಕೊಂಡ ವೀಡಿಯೋದಲ್ಲಿ ಹಿಮಪಾತಕ್ಕೆ ತುತ್ತಾದ ರಸ್ತೆಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡುತ್ತಿರುವ ದೃಶ್ಯವಿದ್ದು, ಭಾರಿ ಪ್ರಮಾಣದ ಹಿಮ ರಸ್ತೆ ಹಾಗೂ ವಾಹನಗಳ ಮೇಲೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಹಿಮಪಾತದಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಕನೇ ಭಕ್ಷಕನಾದಾಗ: ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆಯನ್ನೇ ಕೊಂದ ಪಾಪಿ
ಜೋಜಿಲಾ ಪಾಸ್ನಲ್ಲಿ ವಾಹನದ ಮೇಲೆ ಹಿಮಬಿದ್ದ ಪರಿಣಾಮ7 ಜನರು ಸಾವನ್ನಪ್ಪಿ, 5 ಜನರು ಗಾಯಗೊಂಡಿರುವ ಬಗ್ಗೆ ತಿಳಿದು ದುಃಖವಾಯಿತು. ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವ ಸಂತಾಪಗಳು. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಿಮಪಾತದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ 1ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಅಧಿಕಾರಿಗಳು ಹಿಮವನ್ನು ತೆರವುಗೊಳಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೆಲಸ ಮಾಡುತ್ತಿದ್ದಾರೆ.
Scroll to load tweet…