
ಬಾಗಲಕೋಟೆ ಉಪಚುನಾವಣೆ ಪ್ರಚಾರವು ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತಯಾಚಿಸಿದರೆ, ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮತದಾರರ ಮನವೊಲಿಸುತ್ತಿದೆ.
ಬಾಗಲಕೋಟೆ (ಮಾ.28): ನೆತ್ತಿ ಸುಡುವ ಬಿಸಿಲಿನ ಮಧ್ಯೆಯೇ ಬಾಗಲಕೋಟೆ ಉಪಕನದ ಪ್ರಚಾರ ಕಾರ್ಯ ಚುರುಕು ಪಡೆದುಕೊಂಡಿದ್ದು, ಶುಕ್ರವಾರ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಭರ್ಜರಿ ಮತಬೇಟೆ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮತಯಾಚಿಸಿದರೆ, ಬಿಜೆಪಿ ಪರವಾಗಿ ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಸ್ಥಳೀಯ ಸಂಸದ ಪಿ.ಸಿ. ಗದ್ದಿಗೌಡರ, ಚರಂತಿಮಠರ ಪತ್ನಿ ರಾಜೇಶ್ವರ ಭರ್ಜರಿ ಪ್ರಚಾರ ನಡೆಸಿದರು.
ಮೇಟಿ ಜನಪರ ಕಾರ್ಯ ನೋಡಿ ಮತ ಕೊಡಿ: ಅಜಯಕುಮಾರ ಸರನಾಯಕ
ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ಅಜಯಕುಮಾರ ಸರನಾಯಕ ಬಾಗಲಕೋಟೆ ನಗರದ ಅಂಬೇಡ್ಕರ್ ನಗರ, ಜಾಡಗೇರ ಗಲ್ಲಿ, ಹಳಪೇಟೆ, ವಿದ್ಯಾಗಿರಿ ಹಾಗೂ ನವನಗರದ 2,3, 12ನೇ ಸೆಕ್ಟರ್ಗಳಲ್ಲಿ ಮತಯಾಚಿಸಿದರು.
ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಮಾದರಿಯಾಗಿವೆ. ದಿ.ಎಚ್.ವೈ. ಮೇಟಿ ಅವರ ಜನಪರ ಕಾರ್ಯಗಳನ್ನು ಗಮನಿಸಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಇತರರು ಇದ್ದರು.
ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಮುಚಖಂಡಿ, ನೀರಲಕೇರಿ, ಬೇವಿನಮಟ್ಟಿ, ಹೊನ್ನಾಕಟ್ಟಿ, ಕಮತಗಿ, ರಾಮತಾಳ, ಅಮೀನಗಡ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು, ಅಭ್ಯರ್ಥಿ ಉಮೇಶ ಮೇಟಿ, ಪಕ್ಷದ ಮುಖಂಡರೊಂದಿಗೆ ಬಿಲ್ಕೆರೂರ, ಅಚನೂರು, ಮುಡಪಲಜೀವಿ, ಕಡ್ಲಿಮಟ್ಟಿ, ತಳಗಿಹಾಳ, ಇಲಾಳ, ಶಿರಗುಂಪಿ, ಬೆಣ್ಣೂರ, ಮುಗಳೊಳ್ಳಿ, ಮುಗಳೊಳ್ಳಿ ಎಲ್ಟಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಬಿಜೆಪಿ ಪರ ಶ್ರೀರಾಮುಲು, ಶೆಟ್ಟರ ಮತಯಾಚನೆ:
ಇತ್ತ ಕಡೆ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಅಂಬಾಭವಾನಿ ದೇವಿಗೆ ಪೂಜೆ ಸಲ್ಲಿಸಿ ಕಿಲ್ಲಾ ವಾರ್ಡ್ ನಂ.11 ಹಾಗೂ 13 ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.
ಪ್ರಚಾರದ ವೇಳೆ ಮಾತನಾಡಿದ ಶ್ರೀರಾಮುಲು ಅವರು, ಚರಂತಿಮಠ ಜನಪ್ರಿಯ ನಾಯಕರಾಗಿದ್ದು, ಹಲವು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ. ಮನೆಮನೆ ಪ್ರಚಾರಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನಮಗೆ ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿ ಚರಂತಿಮಠ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಇತರರು ಸಾಥ್ ನೀಡಿದರು.
ಚರಂತಿಮಠ ಗೆಲುವಿಗೆ ಪೂರಕ ವಾತಾವರಣ:
ನಗರದ ಶಿವಾನಂದ ಜೀನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ಅಪಾರ ಕೊಡುಗೆ ನೀಡಿದ್ದಾರೆ. ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರ ಜೊತೆಗೆ ಮುಳುಗಡೆ ಸಂತ್ರಸ್ತರಿಗೆ ಸಹಾಯ ಮಾಡಿರುವುದು ಗಮನಾರ್ಹವಾಗಿದೆ. ಕ್ಷೇತ್ರದಲ್ಲಿ ಚರಂತಿಮಠ ಅವರ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲರೂ ಅವರ ಗೆಲುವಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಮಾಜಿ ಸಚಿವ ಬಿ. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮುಖಂಡರು ಇದ್ದರು.
ಪತಿ ಪರ ರಾಜೇಶ್ವರಿ ಚರಂತಿಮಠ ಮತಯಾಚನೆ:
ನವನಗರದ 14.15ನೇ ಸೇಕ್ಟರ್ ನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರ ಪರವಾಗಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಮಾತನಾಡಿದ ಅವರು, ಡಾ.ವೀರಣ್ಣ ಚರಂತಿಮಠ ಶಾಸಕರಾಗಿದ್ದ ಅವದಿಯಲ್ಲಿ ಬಾಗಲಕೋಟೆ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದಿದೆ. ಮತ್ತೆ ಚುನಾವಣೆ ಬಂದಿದ್ದರಿಂದ ಬಾಗಲಕೋಟೆ ಜನರ ಕ್ಷೇತ್ರದ ಮಹಿಳೆಯರು ಅಭಿವೃದ್ಧಿ ಪರವಾದ ಬಿಜೆಪಿಯ ಬೆಂಬಲಿಸಲಿದ್ದಾರೆ, ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ದೇಶ ಉಳಿಯಲು ಬಿಜೆಪಿಗೆ ಮತ ನೀಡಿ:ವೀರಣ್ಣ ಚರಂತಿಮಠ
ಜಾತಿ, ಮತ, ಪಂಥ ನೋಡದೇ ದೇಶ ಉಳಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ತಿಳಿಸಿದರು.
ಬಾಗಲಕೋಟೆ ಮತಕ್ಷೇತ್ರದ ಬೆಣ್ಣೂರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ದೇಶ ಉಳಿದರೆ ನಾವೆಲ್ಲ ಉಳಿಯುತ್ತೇವೆ. ನಾವೆಲ್ಲ ಭಾರತೀಯರಾಗಿದ್ದೇವೆ. ದೇಶದ ಸುರಕ್ಷತೆಗೆ ಪ್ರಧಾನಿ ಮೋದಿಯವರ ಕೈಬಲಪಡಿಸಲು ಬಿಜೆಪಿ ಗೆಲ್ಲಿಸಬೇಕೆಂದರು. ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ಮಾತನಾಡಿದರು.