
ಹುಲಿ ಜೊತೆ ಸೆಲ್ಫೀ ಫೋಟೊ ತೆಗೆದುಕೊಳ್ಳೋದು ಅಂದ್ರೆ ಸಾಮಾನ್ಯ ಮಾತಲ್ಲ. ಗಟ್ಟಿ ಗುಂಡಿಗೆ ಇದ್ದವರು ಮಾತ್ರ ಹುಲಿರಾಯನ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಅದರಲ್ಲೂ ಹೆಣ್ಣು ಹುಲಿ ಜೊತೆ ನಮ್ಮ ಗಂಡುಗಳು ಮುಗಿಬಿದ್ದು ಸೆಲ್ಫೀ ತೆಗೆದುಕೊಂಡ ‘ಸಾಹಸ’ದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ವರದಿ: ರಂಗೂಪುರ ಶಿವಕುಮಾರ್, ಗೌಡೇಶ್
ಹೆಣ್ಣು ಹುಲಿ ಜೊತೆ ಗಂಡುಗಲಿಗಳ ಸೆಲ್ಫೀ
ಮೊಬೈಲ್ ಬಂದ ಮೇಲಂತೂ ಸೆಲ್ಫೀ ಹುಚ್ಚು ಯಾರಲ್ಲಿ, ಯಾವಾಗ, ಎಲ್ಲಿ ಕಾಣಿಸಿಕೊಳ್ಳುತ್ತೋ ಗೊತ್ತಿಲ್ಲ. ಕುಂತರೂ, ನಿಂತರೂ ಸೆಲ್ಫೀ ಫೋಟೋ ತೆಗೆಯೋದು ಮಾಮೂಲಿಯಾಗಿದೆ ಬಿಡಿ. ಅದರಲ್ಲೂ ಹುಲಿ ಜೊತೆ ಸೆಲ್ಫೀ ಫೋಟೊ ತೆಗೆದುಕೊಳ್ಳೋದು ಅಂದ್ರೆ ಸಾಮಾನ್ಯ ಮಾತಲ್ಲ. ಗಟ್ಟಿ ಗುಂಡಿಗೆ ಇದ್ದವರು ಮಾತ್ರ ಹುಲಿರಾಯನ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಅದರಲ್ಲೂ ಹೆಣ್ಣು ಹುಲಿ ಜೊತೆ ನಮ್ಮ ಗಂಡುಗಳು ಮುಗಿಬಿದ್ದು ಸೆಲ್ಫೀ ತೆಗೆದುಕೊಂಡ ‘ಸಾಹಸ’ದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಗಾಬರಿಯಾಗಬೇಡಿ, ಇಂತಹ ಸಾಹಸದ ಸೆಲ್ಫಿ ತೆಗೆದುಕೊಂಡಿದ್ದು ಸೆರೆ ಸಿಕ್ಕ ಹೆಣ್ಣು ಹುಲಿಯ ಜೊತೆ.
ನಡೆದದ್ದು ಇಷ್ಟೆ…. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಚನ್ನಮಲ್ಲೀಪುರದ ಬಳಿ ಮೂರು ದಿನಗಳ ಹಿಂದೆ ತಾಯಿ ಹುಲಿಯಿಂದ ಬೇರ್ಪಟ್ಟಿದ್ದ ಮರಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಮತ್ತೊಂದು ಮರಿ ತಾಯಿಯನ್ನು ಹುಡುಕಿಕೊಂಡು ಬರುತ್ತದೆ ಎಂದು ಬುಧವಾರ ಕಾಯುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದ ಅರಣ್ಯ ಸಿಬ್ಬಂದಿ ಡ್ರೋನ್ ಮೂಲಕ ಶೋಧ ನಡೆಸಿದಾಗ ಮರಿ ಸಿಕ್ಕ ಸ್ಥಳದಲ್ಲಿಯೇ ಬುಧವಾರ ಬೆಳಗ್ಗೆಯಿಂದಲೇ ತಾಯಿ ಕುಳಿತಿರುವುದು ಕಂಡು ಬಂತು.
ಜೋಳದ ಹೊಲದಲ್ಲಿ ತಾಯಿ ಹುಲಿ
ಜೋಳದ ಹೊಲದಲ್ಲಿ ತಾಯಿ ಹುಲಿ ಇರುವುದು ಗೊತ್ತಾಗುತ್ತಿದ್ದಂತೆ ರೈತರು, ಗ್ರಾಮಸ್ಥರು ಹುಲಿ ಹಿಡಿಯಿರೋ ಎಂದು ಬೊಬ್ಬೆ ಹಾಕಲಾರಂಭಿಸಿದರು. ತಕ್ಷಣ ಹುಲಿ ಹಿಡಿಯಿರಿ, ಇಲ್ಲದಿದ್ದರೆ ಓಡಿ ಹೋಗುತ್ತದೆ, ಹಿಡಿಯದಿದ್ದರೆ ರೈತರಿಗೆ ಕಷ್ಟವಾಗುತ್ತದೆ ಎಂದೆಲ್ಲಾ ಮಾತನಾಡತೊಡಗಿದರು. ಪಾಪ ಅರಣ್ಯ ಸಿಬ್ಬಂದಿ ಮೇಲಾಧಿಕಾರಿಗಳು ಅನುಮತಿ ಕೊಟ್ಟರೆ ಮಾತ್ರ ನಾವು ಹುಲಿ ಹಿಡಿಯುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ಹುಲಿ ಜೊತೆ ಸೆಲ್ಪಿಗೆ ನೂಕಾಟ ತಳ್ಳಾಟ
ಈ ಮಧ್ಯೆ ಕೆಲವರು ಸೀದಾ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ಹುಲಿ ಹಿಡಿಯಿರಿ ಸರ್ ಎಂದು ಫೋನ್ಗಳ ಮಳೆ ಸುರಿಸಿದರು. ಹೀಗಾಗಿ ಎಂಎಲ್ಎ ಸಾಹೇಬ್ರು ಫೋನ್ನಲ್ಲಿ ಅಧಿಕಾರಿಗಳಿಗೆ ಹುಲಿ ಹಿಡಿಯುವಂತೆ ತಾಕೀತು ಮಾಡಿದರು. ಕೊನೆಗೆ ಮೇಲಾಧಿಕಾರಿಗಳ ಒಪ್ಪಿಗೆ ಪಡೆದು, ಕಾಡಾನೆಗಳನ್ನು ಕರೆಸಲು ಮುಂದಾದರು. ಹುಲಿ ಇದ್ದ ಸ್ಥಳದ ಸುತ್ತ 144 ಸೆಕ್ಷನ್ ಜಾರಿ ಮಾಡಿಸಿದ್ದೂ ಆಯಿತು. ಪೊಲೀಸರು ಬಂದಿದ್ದಾಯಿತು. ಕೊನೆಗೆ ಕಾಡಾನೆಗಳು, ವೈದ್ಯರು, ಅಧಿಕಾರಿಗಳ ಜೊತೆಗೂಡಿ ಜೋಳದ ಹೊಲದಲ್ಲಿದ್ದ ಹುಲಿಯನ್ನು ಕೇವಲ ತಾಸಿನಲ್ಲೇ ಹಿಡಿಯಲಾಯಿತು. ನಂತರ ಶುರುವಾಗಿದ್ದೇ ಸೆಲ್ಫೀ ಹುಲಿಗಳ ಆರ್ಭಟ. ಸೆರೆ ಸಿಕ್ಕಿ ಘರ್ಜಿಸುತ್ತಿದ್ದ ಹುಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದೆ, ತಾ ಮುಂದೆ ಎಂಬಂತೆ ನೂಕಾಟಕ್ಕೆ ಬಿದ್ದರು. ವಿಡಿಯೋ, ಫೋಟೊ, ಗ್ರೂಪ್ ಫೋಟೋ ಒಂದೇ ಎರಡೇ ನಾನಾ ಅವತಾರದಲ್ಲಿ ಫೋಟೋ ಶೂಟ್ ಮಾಡಲಾರಂಭಿಸಿದರು. ಅಲ್ಲಿಗೆ ಬಂದಿದ್ದ ಇವರನ್ನು ನಿಯಂತ್ರಿಸುವಲ್ಲಿ ಅಲ್ಲಿದ್ದ ಅರಣ್ಯ ಸಿಬ್ಬಮದಿ ಹೈರಾಣರಾದರು. ಕೊನೆಗೆ ಹುಲಿಯನ್ನು ಮೈಸೂರು ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದ ಬಳಿಕವೇ ಸೆಲ್ಫೀ ಹುಲಿಗಳೆಲ್ಲಾ ಮನೆಯತ್ತ ಹೆಜ್ಜೆ ಹಾಕಿದರು.
ಮಧು ಅವರು ಬಂಗಾರಪ್ಪ ಆದರು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಮೊದಲಿನಿಂದಲೂ ಕ್ಷೇತ್ರದ ಹಿರಿಯರು, ರಾಜಕೀಯ ಕ್ಷೇತ್ರದ ಹಿರಿಯರು ಮಧು ಎಂದೇ ಕರೆಯುತ್ತಿದ್ದರು. ಸಚಿವರಾದ ಬಳಿಕವೂ ಹಿರಿಯ ನಾಯಕರು, ಸಭಾಧ್ಯಕ್ಷ ಹಾಗೂ ಸಭಾಪತಿ ಅವರು ಅವರನ್ನು ಮಧು ಎಂದೇ ಸಂಬೋಧಿಸುತ್ತಿದ್ದರು.
ಇದನ್ನೂ ಓದಿ: ನುಡಿದಂತೆ ನಡೆದ ಅಮಿತ್ ಷಾ: 10 ವರ್ಷದಲ್ಲಿ 10,000 ನಕ್ಸಲರು ಶರಣು: ದೇಶ ನಕ್ಸಲ್ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆ
ಆದರೆ, ಅವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆಯಲ್ಲಿ ತಂದ ಸುಧಾರಣೆ, ಶಿಕ್ಷಣ ಕ್ಷೇತ್ರದ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ, 1ನೇ ತರಗತಿ ಪ್ರವೇಶದ ವಯೋಸಡಿಲಿಕೆ, ದ್ವಿಭಾಷಾ ಸೂತ್ರದ ಕುರಿತ ಅವರ ನಿಲುವು, ಹಿಂದಿ ಭಾಷೆಗೆ ಅಂಕವಿಲ್ಲ ಎಂದು ಗ್ರೇಡ್ ವ್ಯವಸ್ಥೆ ಜಾರಿ ತಂದಂತಹ ದಿಟ್ಟ ನಿರ್ಧಾರಗಳಿಂದ ಮಧು ಅವರನ್ನು ನೋಡುತ್ತಿದ್ದ ದೃಷ್ಟಿಕೋನವೇ ಬದಲಾಗಿದೆ. ದಿಟ್ಟ, ಪ್ರಗತಿಪರ, ಸುಧಾರಣಾ ನಿರ್ಧಾರಗಳ ಮೂಲಕ ತಂದೆಯ ಛಾಯೆ ಮೂಡಿಸಿರುವ ಅವರನ್ನು ನಿಧಾನವಾಗಿ ಎಲ್ಲ ನಾಯಕರೂ ಮಧು ಬದಲಿಗೆ ಬಂಗಾರಪ್ಪ ಎಂದು ಕರೆಯಲು ಶುರು ಮಾಡಿದ್ದಾರೆ. ಒಂದು ರೀತಿ ಮಧು ಅವರು ಈಗ ಸಾರೆಕೊಪ್ಪ ಬಂಗಾರಪ್ಪ ಆಗಿ ಬದಲಾಗುತ್ತಿದ್ದಾರೆ.
ಇದನ್ನೂ ಓದಿ: 1ನೇ ಕ್ಲಾಸ್ಗೆ ವಯೋಮಿತಿ 60 ದಿನ ಸಡಿಲಿಕೆಯಿಂದ 1 ಲಕ್ಷ ಮಕ್ಕಳಿಗಷ್ಟೇ ಅನುಕೂಲ : ಇನ್ನೂ 4 ಲಕ್ಷ ಮಕ್ಕಳಿಗೆ ಅನ್ಯಾಯ