
<p>ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಐಟಿಬಿಪಿ ಸಿಬ್ಬಂದಿ ರಕ್ಷಿಸಿದ್ದಾರೆ. ಯೋಧರು ಮಹಿಳೆಯನ್ನು ಸ್ಟ್ರೆಚರ್ನಲ್ಲಿ ಸುಮಾರು ಐದು ಕಿಲೋಮೀಟರ್ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸುವ ಮೂಲಕ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.</p><img><p>ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರನ್ನು ಐಟಿಬಿಪಿ (Indo Tibetan Border Police) ಸಿಬ್ಬಂದಿ ಐದು ಕಿಲೋ ಮೀಟರ್ ದೂರ ಕಾಲುಮಾರ್ಗದಲ್ಲಿ ದಟ್ಟವಾದ ಕಾಡುಗಳ ನಡುವೆ ಎತ್ತಿಕೊಂಡು ಬಂದು ರಕ್ಷಣೆ ಮಾಡಿದ್ದಾರೆ. ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಅತ್ಯಂತ ಸೂಕ್ಷ್ಮ ಮತ್ತು ದುರ್ಗಮ ಪ್ರದೇಶವಾದ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಐಟಿಬಿಪಿ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಸುಮಾರು ಐದು ಕಿಲೋಮೀಟರ್ ದೂರ ದಟ್ಟ ಕಾಡುಗಳು ಮತ್ತು ಪರ್ವತ ಪ್ರದೇಶದ ಮೂಲಕ ಹೊತ್ತುಕೊಂಡು ಹೋಗಿ ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ತಾಯಿ ಮತ್ತು ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.</p><img><p>ನಾರಾಯಣಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ಬೋಟರ್ ಗ್ರಾಮವು ಕಷ್ಟಕರವಾದ ಭೌಗೋಳಿಕ ಪರಿಸ್ಥಿತಿಗಳು ಮತ್ತು ಸೂಕ್ಷ್ಮತೆಯಿಂದಾಗಿ ಬಹಳ ಹಿಂದಿನಿಂದಲೂ ಸವಾಲಿನ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ. ಮಾರ್ಚ್ 27 ರಂದು ಈ ಗ್ರಾಮದ ಒಬ್ಬರು ಗರ್ಭಿಣಿ ಮಹಿಳೆಯ ಗಂಭೀರ ಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತು, ನಂತರ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.</p><img><p>ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಐಟಿಬಿಪಿಯ 29 ನೇ ಬೆಟಾಲಿಯನ್ನ ಸಹಾಯಕ ಕಮಾಂಡೆಂಟ್ ಅನಿಲ್ ಕುಮಾರ್ ವಹಿಸಿದ್ದರು. ಅವರ ನಿರ್ದೇಶನದ ಮೇರೆಗೆ, ತ್ವರಿತ ಪ್ರತಿಕ್ರಿಯೆ ತಂಡವನ್ನು(Quick Response Team) ಸ್ಥಳಕ್ಕೆ ಕಳುಹಿಸಲಾಯಿತು. ನಂತರ ಓರ್ಚಾದಲ್ಲಿ(Orchha)ಕಂಪನಿ ಕಾರ್ಯಾಚರಣಾ ನೆಲೆಯಲ್ಲಿ ಮಹಿಳೆಯನ್ನು ಸಾಗಿಸುವುದಕ್ಕೆ ಆಂಬ್ಯುಲೆನ್ಸ್ ಅನ್ನು ಸಿದ್ಧವಾಗಿ ಇರಿಸಲಾಗಿತ್ತು.</p><img><p>ಈ ಕಾರ್ಯಾಚರಣೆ ಸೈನಿಕರಿಗ ದೊಡ್ಡ ಸವಾಲಾಗಿತ್ತು ಏಕೆಂದರೆ ಕಡಿದಾದ ಪರ್ವತ ಮಾರ್ಗ, ದಟ್ಟವಾದ ಕಾಡುಗಳು ಮತ್ತು ಯಾವುದೇ ರಸ್ತೆ ಸೌಲಭ್ಯಗಳು ಇಲ್ಲದೇ ಇರುವುದು ಈ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು. ನಂತರ ಐಟಿಬಿಪಿ ಸೈನಿಕರು ಸ್ಥಳದಲ್ಲೇ ತಾತ್ಕಾಲಿಕ ಸ್ಟ್ರೆಚರ್ ನಿರ್ಮಿಸಿ ಗರ್ಭಿಣಿ ಮಹಿಳೆಯನ್ನು ಸುಮಾರು ಐದು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿಸಿದರು. ಈ ಮಾರ್ಗವು ಒರಟಾದ ಹಾದಿಗಳು, ಕಡಿದಾದ ಇಳಿಜಾರು ಹಾಗೂ ಏರುಮುಖವಾಗಿದ್ದ ಮಾರ್ಗಗಳು ಸೇರಿದಂತೆ ಹಲವು ಮತ್ತು ನೈಸರ್ಗಿಕ ಅಡೆತಡೆಗಳಿಂದ ತುಂಬಿತ್ತು.</p><img><p>ರಕ್ಷಣಾ ತಂಡವು ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಬೋಟರ್ ಮತ್ತು ಕುಡ್ಮೆಲ್ ನಡುವಿನ ಗೊತ್ತುಪಡಿಸಿದ ಸ್ಥಳಕ್ಕೆ ಸಾಗಿಸಿತು, ಅಲ್ಲಿ ಈಗಾಗಲೇ ಸಿದ್ಧವಾಗಿತ್ತು. ನಂತರ ಅವರನ್ನು ತಕ್ಷಣವೇ ಓರ್ಚಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್ಸಿ) ಕರೆದೊಯ್ಯಲಾಯಿತು. ವೈದ್ಯರ ಮೇಲ್ವಿಚಾರಣೆಯಲ್ಲಿ ಸಕಾಲಿಕ ಚಿಕಿತ್ಸೆ ಪಡೆದ ನಂತರ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಇಬ್ಬರೂ ಸುರಕ್ಷಿತವಾಗಿದ್ದಾರೆ. ಈ ಕಾರ್ಯಾಚರಣೆಯು ಐಟಿಬಿಪಿ ಮತ್ತು ನಾರಾಯಣಪುರ ಪೊಲೀಸರ ಅತ್ಯುತ್ತಮ ಸಮನ್ವಯ ಹಾಗೂ ಕೂಡಲೇ ತೆಗೆದುಕೊಂಡು ನಿರ್ಧಾರದಿಂದ ಯಶಸ್ವಿಯಾಗಿದೆ. ಇಂದ್ರಾವತಿಯ ದಟ್ಟ ಕಾಡುಗಳ ನಡುವೆ ನಡೆಸಲಾದ ರಕ್ಷಣಾ ಕಾರ್ಯಾಚರಣೆಯು ಬರೀ ಜೀವ ಉಳಿಸುವ ಕಥೆಯಲ್ಲ, ಇದು ಭದ್ರತಾ ಪಡೆಗಳ ಮಾನವೀಯ ಮುಖವನ್ನೂ ಎತ್ತಿ ತೋರಿಸಿದೆ.</p>
Source link
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 5 ಕಿಮೀ ದೂರ ಹೊತ್ತು ಸಾಗಿಸಿ ತಾಯಿ ಮಗು ರಕ್ಷಣೆ ಮಾಡಿದ ಸೈನಿಕರು