
ಜನವರಿ, ಮಾರ್ಚ್ 30: ಇರಾನ್ನ ಹೆಚ್ಚು ಉದಾರಿ ಆಡಳಿತದ ಜೊತೆ ಅಮೆರಿಕದ ಸಂಧಾನ (ಮಾತುಕತೆಗಳು) ನಡೆಯುತ್ತಿದೆ. ಒಂದು ವೇಳೆ, ಈ ಮಾತುಕತೆ ವಿಫಲವಾಗಿ ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೆ ಇರಾನ್ ಇಂಧನ ಮೂಲಸೌಕರ್ಯ (ಎನರ್ಜಿ ಇನ್ಫ್ರಾ), ತೈಲ ಬಾವಿಗಳು (ತೈಲ ಬಾವಿಗಳು) ಮತ್ತು ಖರ್ಗ್ ದ್ವೀಪವನ್ನು (ಖಾರ್ಗ್ ದ್ವೀಪ) ಉಡಾಯಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಅವರು ತಮ್ಮ ಟ್ರೂಟ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇರಾನ್ನಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಅಂತ್ಯಗೊಳ್ಳಲು ಅಗತ್ಯವಾದ ಸಂಧಾನಗಳನ್ನು ಗಂಭೀರವಾಗಿ ನಡೆಸಲಾಗುತ್ತಿದೆ. ಇರಾನ್ನ ಹೊಸ ಮತ್ತು ಹೆಚ್ಚು ಉದಾರಿ ಆಡಳಿತದ ಜೊತೆ ಮಾತುಕತೆ ನಡೆಯುತ್ತಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಇರಾನ್ ಖರ್ಗ್ ದ್ವೀಪದ ಮೇಲೆ ಟ್ರಂಪ್ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?
‘ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಸಿಕ್ಕಿದೆ. ಬಹಳ ಬೇಗ ಕುದುರಬಹುದು. ಒಂದು ವೇಳೆ ಒಪ್ಪಂದ ಏರ್ಪಡಲು ಆಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯು ವ್ಯಾಪಾರಕ್ಕೆ ತತ್ಕ್ಷಣವೇ ತೆರೆಯದಿದ್ದರೆ, ನಾವು ಉದ್ದೇಶಪೂರ್ವಕವಾಗಿ ಮುಟ್ಟದೇ ಸುಮ್ಮನಿರುವ ಇರಾನ್ನ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು, ತೈಲ ಬಾವಿಗಳು ಮತ್ತು ಖರ್ಗ್ ದ್ವೀಪಗಳು ಎಲ್ಲವನ್ನೂ ಉಡಾಯಿಸಿ ನಾಶಪಡಿಸುವ ಮೂಲಕ ಇರಾನ್ನಲ್ಲಿ ನಮ್ಮ ಅದ್ಭುತ ಇರುವಿಕೆಯನ್ನು ಕೊನೆಗೊಳಿಸುತ್ತೇವೆ. ಹಳೆಯ ಆಡಳಿತದ 47 ವರ್ಷದ ಭಯೋತ್ಪಾದನೆಗೆ ಬಲಿಯಾದ ನಮ್ಮ ಹಲವು ಸೈನಿಕರು ಮತ್ತು ಇತರರ ಸಾವಿಗೆ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಆರಂಭಿಸಿ ಒಂದು ತಿಂಗಳ ಮೇಲಾಯಿತು. ಫೆಬ್ರುವರಿ 28 ರಂದು ಮೊದಲು ದಾಳಿಯಾಗಿದೆ. ಸಾವಿರಾರು ಕ್ಷಿಪಣಿಗಳು, ಡ್ರೋನ್ಗಳು ಸಾಕಷ್ಟು ಹಾನಿ ತಂದಿವೆ. ಇರಾನ್ ತೀವ್ರ ಪ್ರತಿರೋಧ ಒಡ್ಡುತ್ತಿದೆ. ಇಸ್ರೇಲ್ ಮೇಲೆ ವ್ಯಾಪಕ ವಾಯುದಾಳಿಗಳನ್ನು ಮಾಡಿದೆ. ಅಷ್ಟೇ ಅಲ್ಲ, ಸೌದಿ, ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳು ಮತ್ತು ಇಂಧನ ಘಟಕಗಳ ಮೇಲೆ ಇರಾನ್ ದಾಳಿ ಮಾಡಿ ಹಾನಿಯಾಗಿದೆ.
ಇದನ್ನೂ ಓದಿ: ಹಾರ್ಮುಜ್ ನಂತರ ಮತ್ತೊಂದು ಜಲಸಂಧಿ ಕಂಟಕ; ಜಗತ್ತಿಗೆ ಕಾದಿದೆ ಡಬಲ್ ಶಾಕ್
ಇರಾನ್ ಮೇಲೆ ದಾಳಿ ಮಾಡಿದ ಉದ್ದೇಶವಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಯುದ್ಧದ ಆರಂಭದಲ್ಲೇ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನೈ ಹಾಗೂ ಇತರ ಹಲವಾರು ಮುಖಂಡರನ್ನು ಇಸ್ರೇಲ್ ಮತ್ತು ಅಮೆರಿಕದ ಕಾರ್ಯಾಚರಣೆಯಲ್ಲಿ ಕೊಲ್ಲಲಾಯಿತು. ಈಗ ವಿಶ್ವದ ಶೇ. 20ರಷ್ಟು ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಮುಕ್ತಗೊಳಿಸುವುದು ಮತ್ತು ಇರಾನ್ ತೈಲ ಸಾಗಣೆಯ ಕೇಂದ್ರಬಿಂದುವಾಗಿರುವ ಖರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಮೆರಿಕದ ಮತ್ತೊಂದು ಗುರಿ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ