
ಮೈಸೂರಿನ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಯೋಜನೆಗಳಿಗೆ ಸಿದ್ದರಾಮಯ್ಯನವರು ಮೈಸೂರಿಗೆ ಮೊದಲ ಪ್ರಾಧಾನ್ಯತೆ ನೀಡುತ್ತಾರೆ ಎಂದು ಹೇಳಿದರು.
ಮೈಸೂರು (ಜು.19): ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಹಿಂದಿನ ಯಾವ ಪಿಎಂ ಕೂಡ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ.
ಯಾವುದೇ ಯೋಜನೆ ಇದ್ದರು ಸಿದ್ದರಾಮಯ್ಯ ಅವರು ಮೊದಲ ಪ್ರಾಧಾನ್ಯತೆ ಕೊಡುವುದು ಮೈಸೂರಿಗೆ. ಮೈಸೂರಿನ ಮೇಲೆ ಸಿದ್ದರಾಮಯ್ಯ ಗೆ ಪ್ರೀತಿ ಜಾಸ್ತಿ. ಮೈಸೂರಿಗೆ ಯಾವಾಗಲೂ ಹಣದ ಹೊಳೆಯನ್ನು ಸಿದ್ದರಾಮಯ್ಯ ಹರಿಸುತ್ತಾರೆ. ಬಿಜೆಪಿ ಯವರು ಟೀಕಾಚಾರಿಗಳು ಅಷ್ಟೆ. ಅಭಿವೃದ್ಧಿ ಕೆಲಸ ಮಾಡುವುದೆ ಇಲ್ಲ. ಬಿಜೆಪಿ ಮಾಡುವುದು ಭ್ರಷ್ಟಾಚಾರ ಮಾತ್ರ. ಕಾಂಗ್ರೆಸ್ ಕ್ಯಾ ಕಿಯಾ ಎಂದು ಮೋದಿ ಅವರು ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ ಎಂದು ಹೇಳಿದ್ದಾರೆ.
ಮೋದಿ ಅವರು ದಿನ ಟಿವಿಯಲ್ಲಿ ಮಾತ್ರ ಕಾಣುತ್ತಾರೆ. ದಿನ ಪೂರ್ತಿ ಟಿವಿಯಲ್ಲಿ ಕಾಣಬೇಕು ಅಷ್ಟೆ ಅವರ ಉದ್ದೇಶ. ಹಿಂದೆ ಯಾವ ಪಿಎಂ ಕೂಡ ಇವರ ರೀತಿ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ. ಅದಾನಿ, ಅಂಬಾನಿಗೆ ದೇಶದ ಆಸ್ತಿಯನ್ನು ಮೋದಿ ಮಾರುತ್ತಿದ್ದಾರೆ. ದೇಶದ ಜನ ಸಂಕಷ್ಟದಲ್ಲಿ ಇದ್ದಾಗ ಮೋದಿ ವಿದೇಶ ಪ್ರವಾಸ ಮಾಡುತ್ತಾರೆ. ಮಣಿಪುರಕ್ಕೆ ಹೋಗಿ ಅಲ್ಲಿನ ಜನರ ಸಾಂತ್ವನ ಹೇಳಲಿಲ್ಲ ಎಂದಿದ್ದಾರೆ.
ಸಂವಿಧಾನ ಬದಲಾವಣೆ ಮಾಡಲು ಜನ ಅವಕಾಶ ಕೊಟ್ಟರೆ ಜನ ಸತ್ತಂತೆ. ಬಿಜೆಪಿ ಎಷ್ಟೇ ತಿಪ್ಪಾರಲಾಗ ಹಾಕಿದರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಒಬ್ಬರೆ ಸಂವಿಧಾನ ಮಾಡಿದ್ದಾ ಅಂತಾ ಬಿಜೆಪಿ ಕೇಳುತ್ತೆ? ಅಂಬೇಡ್ಕರ್ ಅಲ್ಲದೆ ಏನೂ ಅವರ ತಾತಾಂದಿರು ಮಾಡಿದ್ರಾ? RSS ಅವರು ಮಾಡಿದ್ರಾ? ಸಂವಿಧಾನದ ಕೊಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಭಾಷಣದಲ್ಲಿ ಹೇಳಿದ್ದಾರೆ.
ಸಿದ್ದು ಹಣಕಾಸು ಸಚಿವರಾದಾಗ ಲಕ್ಷ್ಮೀ ಕುಂಟಾಗಿ ಖಜಾನೆಯಲ್ಲಿ ಕೂರ್ತಾಳೆ
ಐದು ಗ್ಯಾರಂಟಿ ಬರೀ ಸಿದ್ದರಾಮಯ್ಯ ಮನೆಗೆ, ಡಿಕೆ ಶಿವಕುಮಾರ್ ಮನೆಗಾ, ಪರಮೇಶ್ವರ್ ಮನೆಗೆ ಕೊಟ್ಟಿದ್ದಿವಾ? ಇಷ್ಟು ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಕೊಟ್ಟ ಮೇಲೂ ನಮ್ಮವರೆ ಕೆಲವರು ಅಭಿವೃದ್ಧಿ ಆಗ್ತಿಲ್ಲ ಅಂತಾರೆ? ಯಾಕೆ ಅಂತಾನೆ ಗೊತ್ತಾಗಲ್ಲ. ಈ ಸರಕಾರ ದಿವಾಳಿ ಆಗಿದೆ ಎಂದು ಸುಳ್ಳು ಹಬ್ಬಿಸಿದ್ದಾರೆ ಎಂದು ಮಲ್ಲುಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸರ್ಕಾರ ದಿವಾಳಿ ಆಗಿಲ್ಲ. ದಿವಾಳಿ ಆಗಿದ್ದರೆ ಶಾಸಕರಿಗೆ 50 ಕೋಟಿ ರು. ಅನುದಾನ ಕೊಡುತ್ತಿದ್ದರಾ? ಸಿದ್ದರಾಮಯ್ಯ ಯಾವಾಗ ಯಾವಾಗ ಹಣಕಾಸು ಸಚಿವರಾಗುತ್ತಾರೋ ಆಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿ ಕೂರುತ್ತಾಳೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಲಕ್ಷ್ಮಿ ಓಡುತ್ತಾಳೆ. ಮೋದಿ ಅವರೆ ಕರ್ನಾಟಕಕ್ಕೆ ಬಂದು ನೋಡಿ. ಈ ನಾಡು ಎಷ್ಟು ಸುಭಿಕ್ಷವಾಗಿದೆ ಅಂತಾ. ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಮಾಡಲು ಹುಡುಕಿ ಹುಡುಕಿ ಜನ ಬರುತ್ತಿದ್ದಾರೆ. ಹೊಟ್ಟೆ ಕಿಚ್ಚಿಗೆ ಆರೋಪ ಮಾಡುತ್ತಾರೆ. ಹೊಟ್ಟೆ ಕಿಚ್ಚಿಗೆ ಮದ್ದು ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಯನ್ನು ಮೋದಿ 1% ಕೂಡ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಎಂದ ಡಿಕೆ ಶಿವಕುಮಾರ್
ಸಾಧನಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಚುನಾವಣೆ ಪೂರ್ವದಲ್ಲಿ ಕಮಲ ಕೆರೆಯಲ್ಲಿ ಇದ್ದರೆ ಚಂದ, ತೆನೆ ಹೊಲದಲ್ಲಿ ಇದ್ದರೆ ಚಂದ, ಕೈ ಅಧಿಕಾರದಲ್ಲಿ ಇದ್ದರೆ ಚಂದ ಎಂದು ಹೇಳಿದ್ದೆ. ಐದು ಬೆರಳು ಸೇರಿದರೆ ಒಂದು ಮುಷ್ಠಿ. ನಾವು ಜೈಕಾರ ಹಾಕಿಸಿ ಕೊಳ್ಳಲು ಇಲ್ಲಿಗೆ ಬಂದಿಲ್ಲ. ನಿಮ್ಮ ಋಣವನ್ನು ತೀರಿಸಲು ಇಲ್ಲಿಗೆ ಬಂದಿದ್ದೇವೆ. ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಗ್ಯಾರಂಟಿಗೆ ಚಾಲನೆ ಕೊಟ್ಟೆವು. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಲಿದೆ ಎಂದಿದ್ದ ಬಿಜೆಪಿಯವರು ಇದೀಗ ಅವರು ಕೂಡ ಗ್ಯಾರಂಟಿ ಭರವಸೆ ನೀಡ್ತಿದ್ದಾರೆ. ಮುಂಬರುವ ಬಿಹಾರ ಚುನಾವಣೆಗೂ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ. ಮಧ್ಯಪ್ರದೇಶ ದೆಹಲಿ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದಾರೆ. ನಾವು ಭಾವನೆಗಳ ಮೇಲೆ ಅಧಿಕಾರ ಮಾಡುತ್ತಿಲ್ಲ. ಜನರ ಬದುಕಿನ ಆಧಾರದ ಮೇಲೆ ಅಧಿಕಾರ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತೇ ಎಂದಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಶಾಶ್ವತವಾಗಿ ಉಳಿಯುವಂತಹ ಯಾವುದೇ ಕಾರ್ಯಕ್ರಮ ಮಾಡಿಲ್ಲ. ನಿಮ್ಮ ಟೀಕೆಗೆ ನಿಂದನೆಗೆ ಬಗ್ಗಲ್ಲ. ನಿಂದಕರಿರಬೇಕು, ನಿಂದಕರಿದ್ದರೆ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯ. ನಿಮ್ಮ ಟೀಕೆ ನಿಂದನೆಗೆ ಜಗ್ಗದೇ ನುಗ್ಗಿ ನಡೆ ಮುಂದೆ ಎಂದು ನಾವು ಸಾಗುತ್ತೇವೆ ಎಂದು ಹೇಳಿದ್ದಾರೆ.