
ಐತಿಹಾಸಿಕ ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಏ.1ರಂದು ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ
ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಏ.1ರಂದು ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಕರಗದಲ್ಲಿ ಪಾಲ್ಗೊಳ್ಳುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿದರು.
ಏ.1ರಂದು ಮಧ್ಯರಾತ್ರಿ 12.30ಕ್ಕೆ ಹೂವಿನ ಕರಗದ ಮೆರವಣಿಗೆ
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಏ.1ರಂದು ಮಧ್ಯರಾತ್ರಿ 12.30ಕ್ಕೆ ಹೂವಿನ ಕರಗದ ಮೆರವಣಿಗೆ ಆರಂಭವಾಗಲಿದೆ. ಕಳೆದ ಬಾರಿ ಮುಖ್ಯಮಂತ್ರಿ ಅವರು ಕರಗದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯೂ ಬರುವಂತೆ ಆಹ್ವಾನ ನೀಡಿದ್ದೇವೆ. ಉಪಚುನಾವಣೆಯಿರುವ ಕಾರಣ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಅವರಿಗೂ ಆಹ್ವಾನ ನೀಡಲಾಗಿದೆ ಎಂದರು.
ಈ ಬಾರಿ ಕರಗಕ್ಕಾಗಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕರಗ ವೀಕ್ಷಣೆಗೆ ಹೊರ ಜಿಲ್ಲೆ, ರಾಜ್ಯದಿಂದಲೂ ಬರಲಿದ್ದಾರೆ. ಕರಗದ ಸಮಯದಲ್ಲಿ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. 24 ಗಂಟೆಯೂ ಕಸ ವಿಲೇವಾರಿ ಮಾಡುವಂತೆ ನಿರ್ದೇಶಿಸಿದ್ದೇನೆ. ಕರಗವನ್ನು ಎಲ್ಲರೂ ನೋಡುವಂತಾಗಬೇಕು. ಅದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಳಕೇರಿ ನಾರಾಯಣಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಅವರು ಏ. 2 ಮತ್ತು 3ನೇ ತಾರೀಖಿನಂದು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಮುಂದಿನ ಪೂರ್ಣಿಮೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಎಲ್ಲ ಕಾರ್ಯಗಳು ನಡೆಯುತ್ತಿವೆ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೌಚಾಲಯ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಾಗಿದೆ. ಮೈಸೂರು ದಸರಾದಂತೆ ಬೆಂಗಳೂರು ಕರಗ ನಡೆಯುತ್ತಿದೆ ಎಂದು ಹೇಳಿದರು.
ಹಸಿ ಕರಗ ಸಂಪನ್ನ
ದ್ರೌಪದಮ್ಮ ಕರಗ ಶಕ್ತ್ಯೋತ್ಸವ ಏ.1ರ ಮಧ್ಯರಾತ್ರಿ ನಡೆಯಲಿದೆ. ಅದಕ್ಕೂ ಮುನ್ನ ನಡೆಯುವ ಹಸಿ ಕರಗ ಮಾ.30ರ ಮಧ್ಯರಾತ್ರಿ 3 ಗಂಟೆಗೆ ನಡೆಸಲಾಯಿತು. ಸಂಪಂಗಿರಾಮನಗರ ಸಂಪಂಗಿ ಕೆರೆಯ ಶಕ್ತಿಪೀಠದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹಸಿ ಕರಗವನ್ನು ದೇಗುಲಕ್ಕೆ ತರಲಾಯಿತು. ಚಿತ್ರ ಹುಣ್ಣಿಮೆಯ 3 ದಿನ ಮೊದಲು ದ್ರೌಪದಿ ದೇವಿ ಭೂಮಿಗೆ ಬರುತ್ತಾರೆ, ಮಗು ರೂಪದಲ್ಲಿ ಹಸಿ ಕರಗದಲ್ಲಿ ನೆಲೆಸುತ್ತಾರೆ ಎಂಬ ನಂಬಿಕೆಯಿದೆ.