
ಬೀದರ್ನ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ಫೇಸ್ಬುಕ್ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ತುಕಾರಾಮ ದೊಡ್ಡಿ ಎಂಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾಲಿ ಸಂಸದ ಸಾಗರ್ ಖಂಡ್ರೆ ಹೆಸರಿನ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಬೀದರ್ (ಮಾ.31): ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಾಲ್ಕಿ ತಾಲೂಕಿನ ನಿಟ್ಟೂರು(ಬಿ) ಗ್ರಾಮದ ತುಕಾರಾಮ ದೊಡ್ಡಿ ಎಂಬಾತನೇ ಮಾಜಿ ಸಚಿವರಿಗೆ ಬೆದರಿಕೆ ಹಾಕಿದ ಆರೋಪಿ. ಈತ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾನೆ.
ಫೇಸ್ಬುಕ್ ವಿಡಿಯೋ ಮೂಲಕ ನಿಂದನೆ
ಆರೋಪಿ ತುಕಾರಾಮ್ ‘ಸಂಸದ ಸಾಗರ್ ಖಂಡ್ರೆ ಅಭಿಮಾನಿ ಭಾಲ್ಕಿ’ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ವಿಡಿಯೋದಲ್ಲಿ ಮಾಜಿ ಸಚಿವ ಭಗವಂತ ಖೂಬಾ ಅವರ ವಿರುದ್ಧ ಏಕವಚನದಲ್ಲಿ ಬಳಸಬಾರದ ಶಬ್ದಗಳನ್ನು ಬಳಸಿ ನಿಂದಿಸಲಾಗಿದೆ. ಕೇವಲ ನಿಂದನೆಯಷ್ಟೇ ಅಲ್ಲದೆ, ಪ್ರಾಣ ಬೆದರಿಕೆ ಹಾಕುವ ಮಟ್ಟಕ್ಕೆ ಈತ ಹೋಗಿದ್ದಾನೆ. ಹೀಗಾಗಿ ಮುಂಜಾಗ್ರತವಾಗಿ ಎಫ್ಐಆರ್ ದಾಖಲಿಸಲಾಗಿದೆ.
ಸಂಸದ ಸಾಗರ್ ಖಂಡ್ರೆ ಹೆಸರು ಬಳಕೆ
ವಿಶೇಷವೆಂದರೆ, ಈ ಕಿಡಿಗೇಡಿ ಹಾಲಿ ಸಂಸದ ಸಾಗರ್ ಖಂಡ್ರೆ ಅವರ ಹೆಸರನ್ನು ಬಳಸಿಕೊಂಡು ಮಾಜಿ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಸಂಸದ ಕುಮ್ಮಕ್ಕಿನಿಂದಲೇ ಇಂಥ ಬೆದರಿಕೆ ಹಾಕಿದ್ದಾನೆಯೇ? ಅಥವಾ ಸಂಸದ ಹೆಸರು ದುರಪಯೋಗಪಡಿಸಿಕೊಂಡಿದ್ದಾನೆಯೇ ಎಂಬ ಬಗ್ಗೆ ಸದ್ಯ ಜಿಲ್ಲೆಯಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಿಂದಬಂದಗಿ ಗ್ರಾಮದ ರವಿ ನಿಜಾಂಪುರೆ ಎಂಬುವವರು ತಕ್ಷಣವೇ ಗಮನಹರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್ಐಆರ್ ದಾಖಲು
ರವಿ ನಿಜಾಂಪುರೆ ನೀಡಿದ ದೂರಿನನ್ವಯ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿ ತುಕಾರಾಮ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಕದಡುವ ಇಂತಹ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.