
ಪಂಜಾಬ್ನ ಬಿಜೆಪಿ ಕಚೇರಿಯನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ದಾಳಿಯ ಹೊಣೆಯನ್ನು ನಿಷೇಧಿತ ಬಬ್ಬರ್ ಖಾಲ್ಸಾ ಸಂಘಟನೆ ಹೊತ್ತುಕೊಂಡಿದ್ದು, ಎನ್ಕೌಂಟರ್ವೊಂದರ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದೆ.
ಘಟನೆಯ ಹೊಣೆ ಹೊತ್ತ ನಿಷೇಧಿತ ಬಬ್ಬರ್ ಖಾಲ್ಸಾ
ಚಂಡೀಗಢ (ಏ.2) ಪಂಜಾಬ್ ಬಿಜೆಪಿ ಕಚೇರಿಯನ್ನು ಗುರಿಯಾಗಿಸಿ ಬುಧವಾರ ಸಂಜೆ ಗ್ರೆನೇಡ್ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಗ್ರೇನೇಡ್ ಕಚೇರಿ ಬಳಿ ಇಟ್ಟಿದ್ದ ಮರಳಿನ ಚೀಲಕ್ಕೆ ಅಪ್ಪಳಿಸಿದೆ. ಪರಿಣಾಮ ಪಕ್ಕದಲ್ಲಿದ್ದ ಸ್ಕೂಟರ್ ಸೇರಿದಂತೆ ಕೆಲವೊಂದು ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎನ್ಐಎ ತಂಡ ದೌಡಾಯಿಸಿದ್ದು, ಪರಿಶೀಲನೆ ಕೈಗೊಂಡಿದೆ. ಈ ನಡುವೆ ದಾಳಿಯ ಹೊಣೆಯನ್ನು ನಿಷೇಧಿತ ಬಬ್ಬರ್ ಖಾಲ್ಸಾ ಸಂಘಟನೆ ಹೊತ್ತುಕೊಂಡಿದೆ. ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗ್ರೆನೇಡ್ ಎಸೆದ ದೃಶ್ಯಗಳು ಸಮೀಪದ ಸಿಸಿಟೀವಿಯಲ್ಲಿ ಸೆರೆಯಾಗಿದೆ.
ಪ್ರತೀಕಾರ:
ಕಳೆದ ಫೆ.22 ರಂದು ಭಾರತ – ಪಾಕ್ ಗಡಿಯಲ್ಲಿ ಎಎಸ್ಐ ಮತ್ತು ಹೋಮ್ಗಾರ್ಡ್ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ರಂಜಿತ್ ಸಿಂಗ್ ಸೇರಿ ಮೂವರು ಯುವಕರು ಆರೋಪಿಗಳೆಂದು ಕಂಡುಬಂದಿತ್ತು. ಹತ್ಯೆ ನಡೆದ ಮೂರು ದಿನಗಳ ಬಳಿಕ ನಡೆದ ಎನ್ಕೌಂಟರ್ನಲ್ಲಿ ರಂಜಿತ್ ಸಾವನ್ನಪ್ಪಿದ್ದ. ಈ ಘಟನೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾಗಿ ಖಾಲ್ಸಾ ಸಂಘಟನೆ ಹೇಳಿಕೊಂಡಿದೆ.