
ಮದುವೆಯಾಗುತ್ತಿಲ್ಲವೆಂದು ಮನನೊಂದು ಚಿಕ್ಕಮಗಳೂರಿನಲ್ಲಿ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ವೈಯಕ್ತಿಕ ಕಾರಣಗಳಿಂದ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ (26)ಮೃತಪಟ್ಟ ದುರ್ದೈವಿ. ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಅವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ.
ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ
ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬನ್ ಪಾರ್ಕ್ನಲ್ಲಿ ಕಾರ್ಮಿಕ ಆತ್ಮ*ಹತ್ಯೆ
ಬೆಂಗಳೂರು: ಕಬ್ಬನ್ ಪಾರ್ಕ್ ಆವರಣದ ಮರಕ್ಕೆ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸುರೇಶ್ (35) ಮೃತ ದುರ್ದೈವಿ. ಕಬ್ಬನ್ ಪಾರ್ಕ್ ಆವರಣದ ಮರದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಪೊಲೀಸರಿಗೆ ವಾಯು ವಿಹಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಆತನ ಪೂರ್ವಾಪರ ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ಸುರೇಶ್, ಎಸ್.ಪಿ. ರಸ್ತೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಆತ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.