
ಎಲ್ಪಿಜಿ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ರಾಜ್ಯ ಸರ್ಕಾರ 6ನೇ ಗ್ಯಾರಂಟಿಯಾಗಿ ಮಾಸಿಕ ₹15 ಸಾವಿರ ಪರಿಹಾರ ನೀಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದರು.. ಯುದ್ಧದ ಪರಿಸ್ಥಿತಿ ರಾಜಕೀಯಕ್ಕೆ ಬಳಸಿಕೊಂಡು ಕೇಂದ್ರದ ಮೇಲೆ ದೂರುವುದನ್ನು ಬಿಡಲಿ ಎಂದು ತಿವಿದರು.
ಕೊಪ್ಪಳ (ಏ.5): ಎಲ್ಪಿಜಿ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ರಾಜ್ಯ ಸರ್ಕಾರ 6ನೇ ಗ್ಯಾರಂಟಿಯಾಗಿ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೇಂದ್ರದ ವಿರುದ್ಧ ದೂರುವ ಬದಲು ಆಟೋ ಡ್ರೈವರ್ಗಳ ನೆರವಿಗೆ ಬರಲಿ
ಸಿಂಧನೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧದಿಂದಾಗಿ ಎದುರಾಗಿರುವ ಸಂಕಷ್ಟದಲ್ಲಿ ಕೇಂದ್ರವನ್ನು ದೂರುವ ಬದಲು ಆಟೋದವರ ನೆರವಿಗೆ ಬರುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದರು.
ಜಗತ್ತಿನಲ್ಲಿ ಯುದ್ಧ ನಡೆಯುತ್ತಿದ್ದರೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿರುವ ಎನ್ಡಿಎ ಸರ್ಕಾರದಿಂದ ಸಮಸ್ಯೆಯಾಗುತ್ತಿಲ್ಲ. ಈ ನಡುವೆಯೂ ಆಟೋದವರು ಗ್ಯಾಸ್ ಸಮಸ್ಯೆ ಎದುರಿಸುತ್ತಿರುವಾಗ ಟ್ಯಾಕ್ಸ್ ಹಾಕುವ ಮೂಲಕ ರಾಜ್ಯ ಸರ್ಕಾರ ಮತ್ತಷ್ಟು ಸಮಸ್ಯೆಗೆ ಸಿಲುಕಿಸಿದೆ. ಆದ್ದರಿಂದ ಆಟೋದವರು ಕೇಳುತ್ತಿರುವಂತೆ, ಅವರಿಗೆ ಮಾಸಿಕ ₹15 ಸಾವಿರ 6ನೇ ಗ್ಯಾರಂಟಿಯಾಗಿ ರಾಜ್ಯ ಸರ್ಕಾರ ನೀಡುವಂತೆ ತಿಳಿಸಿದರು.
ಯುದ್ಧದ ಸ್ಥಿತಿಯಿಂದ ಸಮಸ್ಯೆ ಎದುರಾಗಿದ್ದನ್ನೇ ರಾಜ್ಯ ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೇಂದ್ರದ ಮೇಲೆ ದೂರಿ, ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.