
ಮಧ್ಯಪ್ರಾಚ್ಯ ಸಂಘರ್ಷ ಮತ್ತು ತೈಲ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಆದರೆ, ಶಶಿ ತರೂರ್, ಆನಂದ್ ಶರ್ಮಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಕೇಂದ್ರದ ನಡೆಯನ್ನು ಬೆಂಬಲಿಸಿ, ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ.
- – ಕೇಂದ್ರ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ
- – ಕೇಂದ್ರಕ್ಕೆ ತರೂರ್, ಶರ್ಮಾ, ತಿವಾರಿ ಬೆಂಬಲ
ನವದೆಹಲಿ (ಏ.5): ಆಪರೇಷನ್ ಸಿಂದೂರ ಬಳಿಕ ಇದೀಗ ಮಧ್ಯಪ್ರಾಚ್ಯ ಯುದ್ಧದ ವಿಚಾರದಲ್ಲೂ ಕಾಂಗ್ರೆಸ್ ನಾಯಕತ್ವ ಮತ್ತು ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಬೀದಿಗೆ ಬಿದ್ದಿದೆ. ಇರಾನ್ ಸಂಘರ್ಷದ ಸಂದರ್ಭದಲ್ಲಿ ಮೋದಿ ಸರ್ಕಾರದ ರಾಜತಾಂತ್ರಿಕ ನಡೆ, ತೈಲ ನಿರ್ವಹಣೆಯನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಠಿಣ ಪದಗಳಲ್ಲಿ ಟೀಕಿಸಿದರೆ, ಶಶಿತರೂರ್ ಸೇರಿ ನಾಲ್ಕೈದು ಹಿರಿಯ ಕಾಂಗ್ರೆಸ್ ಮುಖಂಡರು ಕೇಂದ್ರದ ಬೆನ್ನಿಗೆ ನಿಂತಿದ್ದಾರೆ.
ಮೋದಿ ಸರ್ಕಾರದಡಿ ಭಾರತದ ವಿದೇಶಾಂಗ ನೀತಿ ರಾಜಿಗೊಳಗಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಪೂರೈಕೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಹುಲ್ ಆರೋಪಿಸಿದ್ದು, ಸಂಸದ ಶಶಿತರೂರ್ ಮಾತ್ರ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೊಗಳಿದ್ದಾರೆ.
ಇನ್ನು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರೆ, ಮಾಜಿ ಸಚಿವ ಆನಂದ್ ಶರ್ಮಾ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್ ಕೂಡ ಮೋದಿ ಸರ್ಕಾರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ ವಿಚಾರದಲ್ಲಿ ಭಾರತದ ರಾಜತಾಂತ್ರಿಕ ನಡೆ ಪ್ರಬುದ್ಧ ಮತ್ತು ಕೌಶಲ್ಯ ಪೂರ್ಣವಾಗಿದೆ ಎಂದು ಶರ್ಮಾ ಹೇಳಿಕೊಂಡರೆ, ದೇಶದಲ್ಲಿ ಎಲ್ಪಿಜಿ ಪೂರೈಕೆ ಕೊರತೆ ಆಗಿಲ್ಲ. ಕೊರತೆ ಇದೆ ಎನ್ನುವಂಥ ವಾತಾವರಣ ಸೃಷ್ಟಿಸಲಾಗಿದೆ ಅಷ್ಟೆ ಎಂದು ಕಮಲ್ನಾಥ್ ಅಭಿಪ್ರಾಯಪಟ್ಟಿದ್ದಾರೆ.