
<p>2020ರ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ತಮ್ಮ ಹೆಸರು ಕೇಳಿಬಂದಾಗ ಅನುಭವಿಸಿದ ನರಕಯಾತನೆಯ ಬಗ್ಗೆ ಆ್ಯಂಕರ್ ಅನುಶ್ರೀ ಮಾತನಾಡಿದ್ದಾರೆ. ಪೊಲೀಸರು ಕೇವಲ ವಿಚಾರಣೆಗೆ ಕರೆದಿದ್ದರೂ, ಮಾಧ್ಯಮಗಳು ತಮ್ಮನ್ನು ತಪ್ಪಿತಸ್ಥೆಯಂತೆ ಬಿಂಬಿಸಿ ‘ಮಾನಸಿಕ ಅ*ತ್ಯಾಚಾರ’ ನಡೆಸಿದವು ಎಂದು ನೋವು ಹಂಚಿಕೊಂಡಿದ್ದಾರೆ.</p><img><p>2020ರಲ್ಲಿ ಸ್ಯಾಂಡಲ್ವುಡ್ನಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದು ಡ್ರಗ್ಸ್ ಕೇಸ್. ಈ ಕೇಸ್ನಲ್ಲಿ ಹಲವರ ಹೆಸರು ಕೇಳಿಬಂದಿತ್ತು. ಮಂಗಳೂರಿನ ಸಿಸಿಬಿ ಪೊಲೀಸರ ಬಂಧನದಲ್ಲಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿ ಎಂಬುವವರು ನೀಡಿದ್ದ ಮಾಹಿತಿ ಆಧರಿಸಿ ಆ್ಯಂಕರ್ ಅನುಶ್ರೀ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎನ್ನುವ ಸುದ್ದಿ ಮಿಂಚಿನಂತೆ ಎಲ್ಲೆಡೆ ಪ್ರಸಾರ ಆಗಿ, ಡ್ರಗ್ಸ್ ಕೇಸ್ನಲ್ಲಿ ಅನುಶ್ರೀ ಅವರ ಹೆಸರು ಥಳಕು ಹಾಕಿಕೊಂಡಿತ್ತು.</p><img><p>ಆ ದಿನಗಳಲ್ಲಿ ನೆನೆದ ನರಕಯಾತನೆಯನ್ನು, ತಮ್ಮದಲ್ಲದ ತಪ್ಪಿಗೆ ಎದುರಿಸಿದ ಮೀಡಿಯಾ ಟ್ರಯಲ್ ಸೇರಿದಂತೆ ಎಲ್ಲರ ಚುಚ್ಚುಮಾತುಗಳಿಂದ ಆದ ನೋವುಗಳ ಬಗ್ಗೆ ಅನುಶ್ರೀ ಅವರು, Gold Class With Mayuraa ಯುಟ್ಯೂಬ್ ಚಾನೆಲ್ ಜೊತೆ ಹಂಚಿಕೊಂಡಿದ್ದಾರೆ. ಆ ಕೇಸ್ ನಡೆದು ಅದೆಷ್ಟೋ ವರ್ಷ ಆಗಿದೆ. ಅದರ ಜಸ್ಟಿಫಿಕೇಷನ್ ಕೊಡುವ ಅಗತ್ಯವೇ ಇಲ್ಲ. ತುಂಬಾ ಹಿಂಸೆ ಅನುಭವಿಸಿಬಿಟ್ಟಿದ್ದೇನೆ ಎನ್ನುತ್ತಲೇ ತಮ್ಮನ್ನು ಎಲ್ಲರೂ ಕಂಡ ಬಗೆಯನ್ನು ಅನುಶ್ರೀ ನೋವಿನಿಂದ ತೆರೆದಿಟ್ಟಿದ್ದಾರೆ.</p><img><p>10 ವರ್ಷಗಳ ಹಿಂದೆ ಊರಿನಲ್ಲಿ ಡಾನ್ಸ್ ಮಾಡಿದ್ದ ಸಂದರ್ಭದಲ್ಲಿ ಯಾರೋ ನನ್ನ ಹಿಂದೆ ಡಾನ್ಸ್ ಮಾಡಿದವರು ಸಿಕ್ಕಾಕಿಕೊಂಡಿದ್ದರು. ಅವರು ಯಾರು, ಏನು ಎತ್ತ ಎನ್ನುವುದು ನನಗೆ ಗೊತ್ತಿರಲಿಲ್ಲ. ಪಕ್ಕದ ಮನೆಯಲ್ಲಿ ಕಳ್ಳತನವಾದರೆ ಪೊಲೀಸರು ಅವರ ಬಗ್ಗೆ ವಿಚಾರಿಸಲು ನಮ್ಮನ್ನು ಕರೆಯುತ್ತಾರೆ ತಾನೆ, ಹಾಗೆಂದು ನೀವೇ ಕಳ್ಳತನ ಮಾಡಿದ್ದೀರಿ ಎಂದು ಕರೆಯಲ್ವಲ್ಲಾ, ಇಲ್ಲೂ ಹಾಗೆಯೇ ಆಗಿತ್ತು. ಪೊಲೀಸರು ಆ ಬಗ್ಗೆ ವಿಚಾರಿಸಲು ಕರೆದಿದ್ದರು. ಆದರೆ ಅದನ್ನೇ ಯಾವ್ಯಾವುದೋ ರೀತಿಯಲ್ಲಿ ಬಿಂಬಿಸಲಾಯಿತು ಎಂದು ನೋವನ್ನು ಅನುಶ್ರೀ ತೆರೆದಿಟ್ಟಿದ್ದಾರೆ.</p><img><p>ಪೊಲೀಸ್ನವರು ನನ್ನನ್ನು ಕರೆದು ಆ ಬಗ್ಗೆ ವಿಚಾರಿಸಿದರು. ಅವರೆಲ್ಲಾ ಯಾರು ಗೊತ್ತಾ ಎಂದು ಸಹಜವಾಗಿ ಕೇಳಿದರು. ನನಗೆ ಅವರು ಯಾರು ಎಂದು ತಿಳಿಯದ ಕಾರಣ, ಇಲ್ಲ ಎಂದೆ, ಹೀಗೆ ಸಹಜವಾಗಿ ವಿಚಾರಣೆ ಮಾಡಿ ಪೊಲೀಸರು ಕಳುಹಿಸಿದರು. ಆದರೆ ಠಾಣೆಯಿಂದ ಹೊರಕ್ಕೆ ಬರುತ್ತಲೇ ಎಲ್ಲರೂ ನನ್ನನ್ನು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಸಿಬಿಟ್ಟಿದ್ದರು. ನಾನು ಹೇಗೆ ಖುಷಿಯಿಂದ ಅಂದು ಪೊಲೀಸ್ ಠಾಣೆಗೆ ಹೋಗಿದ್ನೋ ಅದೇ ರೀತಿ ಬಂದಿದ್ದೆ. ಆದರೆ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆದು ಹೋಗಿತ್ತು ಎಂದು ಅಂದಿನ ದಿನಗಳನ್ನು ಅನುಶ್ರೀ ನೆನೆದಿದ್ದಾರೆ.</p><img><p>ನನ್ನ ತುಂಬಾ ಪರಿಚಯದವರು ಕೂಡ ನನ್ನನ್ನು ಡ್ರಗ್ಸ್ ಕೇಸ್ನಲ್ಲಿ ಸಿಲುಕಿದವರಂತೆ ಕಂಡರು. ಈಗ ಅದನ್ನು ಯೋಚಿಸಿದ್ದಾಗ ಅನಿಸೋದು ಏನೆಂದರೆ, ನಾನು ಎಲ್ಲರ ಪ್ರಶ್ನೆಗಳಿಗೆ ಉತ್ತರನೇ ಕೊಡಬಾರದಿತ್ತು. ಉತ್ತರ ಕೊಟ್ಟಿದ್ದಕ್ಕೆ ಏನೇನೋ ಹೇಳಿ, ಅದಕ್ಕೆ ಇನ್ನೇನೋ ಸೇರಿಸಿ ಕೆಟ್ಟದ್ದಾಗಿ ಬಿಂಬಿಸಿದರು. ಕೊನೆಗೆ ಯಾವ್ಯಾವುದೋ ರಾಜಕಾರಣಿಗಳ ಹೆಸರನ್ನು ತಂದು ಅವರ ಕೃಪೆ ಇರುವುದರಿಂದ ಪೊಲೀಸರು ಅನುಶ್ರೀಯನ್ನು ಏನು ಮಾಡಿಲ್ಲ ಎಂದೆಲ್ಲಾ ಹೇಳಿಬಿಟ್ಟರು ಎಂದು ನೊಂದುಕೊಂಡಿದ್ದಾರೆ ನಟಿ.</p><img><p>ಆ ಟೈಮ್ನಲ್ಲಿ ನಾನಿನ್ನೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಕಡಿಮೆ ರೇಟ್ನಲ್ಲಿ ಚಿಕ್ಕ ಕಾರು ಇತ್ತು. ಒಂದು ವೇಳೆ ನನಗೆ ಅಷ್ಟೊಂದು ಇನ್ಫ್ಲುಯೆನ್ಸ್ ಇದ್ದಿದ್ದರೆ ಐಷಾರಾಮಿ ಬಂಗಲೆಯಲ್ಲಿ ಇರ್ತಿದ್ದೆ. ದುಬಾರಿ ಕಾರಿನಲ್ಲಿ ಓಡ್ತಾ ಇದ್ದೆನಲ್ಲ. ಆದರೆ ನನ್ನ ಹೆಸರು ಸಿಲುಕಿಸಿ ಏನೇನೋ ಸುದ್ದಿ ಮಾಡಿಬಿಟ್ಟರು. ಮೆಂಟಲ್ ರೇ*ಪ್ ಮಾಡಿಬಿಟ್ಟರು ಎಂದು ಆ ದಿನಗಳ ಚಿತ್ರಹಿಂಸೆಯನ್ನು ನಟಿ ನೆನಪಿಸಿಕೊಂಡಿದ್ದಾರೆ.</p><img><p>ಆ ಸಮಯದಲ್ಲಿ ಅರುಣ್ ಸಾಗರ್ ಜೊತೆ ಸಿನಿಮಾ ಮಾಡಿದ್ದೆ. ಅದರಲ್ಲಿ ಒಂದು ಸ್ಮೋಕ್ ಸೀನ್ ಇತ್ತು. ಅದನ್ನು ಎಷ್ಟು ಕಷ್ಟ ಪಟ್ಟು ಮಾಡಿದ್ದೆ ಎನ್ನುವುದು ನಿರ್ದೇಶಕ, ನಿರ್ಮಾಪಕರಿಗೆ ಗೊತ್ತು. ಆದರೆ ಆ ಸೀನ್ಗಳನ್ನೇ ತೋರಿಸಿ, ಅನುಶ್ರೀ ಇವೆಲ್ಲಾ ಮಾಡ್ತಾಳೆ ಅಂತ ಬಣ್ಣ ಕಟ್ಟಿಬಿಟ್ರು. ಆದರೆ ತುಂಬಾ ನೋವಾಗಿದ್ದ ಸಂಗತಿ ಎಂದರೆ, ಆ ಸಮಯದಲ್ಲಿ ಸಿನಿಮಾದವರು ಕೂಡ, ಇದು ನಮ್ಮ ಚಿತ್ರದ್ದು, ಅದನ್ಯಾಕೆ ಹೀಗೆ ತೋರಿಸ್ತೀರಿ ಎಂದು ಕೇಳುವ ಗೋಜಿಗೆ ಹೋಗಲಿಲ್ಲ, ಯಾರೂ ನನ್ನ ಸಪೋರ್ಟ್ಗೆ ಬರಲಿಲ್ಲ ಎಂದಿದ್ದಾರೆ ಅನುಶ್ರೀ.</p>
Source link
ಡ್ರಗ್ಸ್ ಕೇಸ್ನಲ್ಲಿ ಹೆಸರು ಬಂದಾಗ ನಡೆದದ್ದೇನು? ಆ ಕರಾಳ ದಿನಗಳನ್ನು ನೆನೆದ Anchor Anushree