
ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾಕ್ಕೆ ಆಗುತ್ತಿರುವ ಅನ್ಯಾಯ, ಕಳೆದ ಕೆಲ ವರ್ಷಗಳಲ್ಲಿ ಇನ್ಯಾವ ಸಿನಿಮಾಕ್ಕೂ ಆಗಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಸಿಬಿಎಫ್ ಕ್ಷುಲ್ಲಕ ಕಾರಣ ನೀಡಿ ‘ಜನ ನಾಯಕನ್’ ಸಿನಿಮಾ ಬಿಡುಗಡೆ ಆಗದಂತೆ ತಡೆದು ನಿಲ್ಲಿಸಿದೆ. ವಿಜಯ್ ಅವರು ರಾಜಕೀಯಕ್ಕೆ, ಇದು ತಮ್ಮ ಕೊನೆಯ ಸಿನಿಮಾ ಎಂದು ಹೇಳಿದ್ದು, ಈ ಸಿನಿಮಾವನ್ನು ತಮ್ಮ ರಾಜಕೀಯ ಪಕ್ಷದ ಪರೋಕ್ಷ ಪ್ರಚಾರಕ್ಕೆ ಬಳಸಿರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ವಿಜಯ್ ಅವರ ರಾಜಕೀಯ ಎದುರಾಳಿಗಳ ಪ್ರಭಾವ ಬಳಸಿ ಸಿನಿಮಾ ಬಿಡುಗಡೆ ಆಗದಂತೆ ತಡೆದಿದ್ದಾರೆ.
‘ಜನ ನಾಯಕನ್’ ಬಿಡುಗಡೆಯನ್ನು ಅನ್ಯಾಯವಾಗಿ ತಡೆದ ಬೆನ್ನಲ್ಲೇ ಇದೀಗ ಸಿನಿಮಾವನ್ನು ಆನ್ಲೈನ್ನಲ್ಲಿ ಲೀಕ್ ಮಾಡಿ, ಸಿನಿಮಾಕ್ಕೆ ಭಾರಿ ಪೆಟ್ಟು ನೀಡಿದೆ. ಸಿನಿಮಾದ ಹಲವು ಬಿಡಿ-ಬಿಡಿಯಾಗಿ ಹಾಗೂ ಕೆಲವು ಸೈಟ್ಗಳಲ್ಲಿ ಸಿನಿಮಾದ ಸಂಪೂರ್ಣ ಲಿಂಕ್ ಅನ್ನು ಪೋಸ್ಟ್ ಮಾಡಿ ಲೀಕ್ ಮಾಡಲಾಗಿದೆ. ಇದು ಚಿತ್ರತಂಡಕ್ಕೆ ಆತಂಕ ತಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾದ ನಿರ್ದೇಶಕ ಎಚ್ ವಿನೋದ್, ಸಿನಿಮಾದ ಲೀಕ್ ಆಗಿರುವ ದೃಶ್ಯಗಳನ್ನು ಶೇರ್ ಮಾಡದಂತೆ ಮನವಿ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿನಿಮಾದ ಲೀಕ್ ಹಿಂದೆ ಸೆನ್ಸಾರ್ ಮಂಡಳಿ ಇದೆ ಎಂದು ವಿಜಯ್ ಅವರ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಇನ್ನು ಕೆಲವರು, ಚುನಾವಣೆ ಪ್ರಚಾರ ಸಿಗಲೆಂದು ವಿಜಯ್ ಅಭಿಮಾನಿಗಳೇ ‘ಜನ ನಾಯಕನ್’ ಸಿನಿಮಾ ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಸಿನಿಮಾ ಲೀಕ್ ಆಗಿದೆ, ಇದರಿಂದ ಯಾರಿಗೆ ಲಾಭವಾಗುತ್ತದೆಯೋ ತಿಳಿಯದು ಆದರೆ ನಿರ್ಮಾಪಕರಿಗಂತೂ ಭಾರೀ ನಷ್ಟವೇ ಆಗಲಿದೆ.
ಇದನ್ನೂ ಓದಿ:ದಳಪತಿ ವಿಜಯ್ ಗೆ ಕೂಲ್ ಡ್ರಿಂಗ್ ಕೊಟ್ಟ ಅಭಿಮಾನಿ: ವಿಡಿಯೋ ನೋಡಿ
ಸಿನಿಮಾ ಲೀಕ್ ಆಗಿರುವ ಕಾರಣ, ಹೆಚ್ಚಿನ ಡ್ಯಾಮೇಜ್ ಆಗುವ ಮುಂಚೆ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಒಟಿಟಿ ಬಿಡುಗಡೆಗೂ ಸಹ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತದೆಯೇ ಕಾದು ನೋಡಬೇಕಿದೆ.
ಕೆವಿಎನ್ ನಿರ್ಮಾಣ ಸಂಸ್ಥೆಯು ‘ಜನ ನಾಯಕನ್’ ಸಿನಿಮಾದ ಮೇಲೆ ಸುಮಾರು 400 ಕೋಟಿ ಹೂಡಿಕೆ ಮಾಡಿದೆ. ಜನವರಿ ತಿಂಗಳಲ್ಲೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ ಸಿಯು ಕ್ಷುಲ್ಲಕ ಕಾರಣ ನೀಡಿ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲಿಲ್ಲ. ಬಳಿಕ ನ್ಯಾಯಾಲಯದಲ್ಲಿಯೂ ಸಹ ಕೆವಿಎನ್ಗೆ ‘ನ್ಯಾಯ’ ದೊರಕಲಿಲ್ಲ. ಇದೀಗ ಚುನಾವಣೆ ಬಂದಿರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಿನಿಮಾ ಬಿಡುಗಡೆ ತಡವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ