
ಬೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿಯೊಂದು ಮಗುಚಿ ಬಿದ್ದು, ಪಂಜಾಬ್ ಮೂಲದ 10 ಮಂದಿ ಸಾವನ್ನಪ್ಪಿದ್ದಾರೆ. ಬಲವಾದ ಗಾಳಿಯಿಂದ ನಿಯಂತ್ರಣ ತಪ್ಪಿದ ದೋಣಿ ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬೃಂದಾವನ (ಏ.10): ಬೃಂದಾವನದ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಸಿಗರಿದ್ದ ಸ್ಟೀಮರ್ (ದೋಣಿ) ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ದೋಣಿಯಲ್ಲಿದ್ದವರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದ್ದು, ನಾಪತ್ತೆಯಾದವರಿಗಾಗಿ ಸೇನೆ ಮತ್ತು ವಿಪತ್ತು ನಿರ್ವಹಣಾ ಪಡೆಗಳು ಶೋಧ ನಡೆಸುತ್ತಿವೆ.
ಮಥುರಾ ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ಅವರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ಮೃತಪಟ್ಟವರೆಲ್ಲರೂ ಪಂಜಾಬ್ ಮೂಲದ ಪ್ರವಾಸಿಗರು ಎಂದು ಅವರು ತಿಳಿಸಿದ್ದಾರೆ. “ಈವರೆಗೆ ಆರು ಶವಗಳನ್ನು ಹೊರತೆಗೆಯಲಾಗಿದೆ. ಸುಮಾರು 16 ರಿಂದ 17 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದೆ” ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ನದಿಯ ಮಧ್ಯಭಾಗದಲ್ಲಿ ದೋಣಿ ಸಾಗುತ್ತಿದ್ದಾಗ ಹಠಾತ್ತನೆ ಬೀಸಿದ ಬಲವಾದ ಗಾಳಿಗೆ ದೋಣಿ ಅಲುಗಾಡಲು ಆರಂಭಿಸಿತು. ಈ ವೇಳೆ ದೋಣಿಯ ವೇಗ ಹೆಚ್ಚಾಗಿ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಪಾಂಟೂನ್ ಸೇತುವೆಗೆ (pontoon bridge) ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೋಣಿ ತಲೆಕೆಳಗಾಗಿ ನದಿಯಲ್ಲಿ ಮುಳುಗಿದೆ.
ರಕ್ಷಣಾ ಕಾರ್ಯ ಚುರುಕು
ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಸ್ಥಳಕ್ಕೆ ಧಾವಿಸಿವೆ. ಇವರ ಜೊತೆಗೆ ಸುಮಾರು 50 ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸ್ಥಳೀಯ ಈಜುಗಾರ ಗುಲಾಬ್ ಎಂಬುವವರು ಈಗಾಗಲೇ 15 ಜನರನ್ನು ನದಿಯಿಂದ ಹೊರಕ್ಕೆ ಎಳೆದು ಪ್ರಾಣ ಉಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ
ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಾಪತ್ತೆಯಾದವರಿಗಾಗಿ ನದಿಯ ಆಳವಾದ ಭಾಗಗಳಲ್ಲಿ ಶೋಧ ನಡೆಸಲಾಗುತ್ತಿದೆ. ಘಟನೆಯಲ್ಲಿ ಸಿಲುಕಿದವರು ಲೈಫ್ ಜಾಕೆಟ್ ಧರಿಸದೇ ಇದ್ದುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.