
ರಾಯಚೂರಿನ ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಇ-ಖಾತಾ ನೀಡಲು ₹1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ರಾಯಚೂರು (ಏ.11): ಸಿರವಾರ ತಾಲೂಕಿನ ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ತಕ್ಷಣ ಪರಾರಿಯಾಗಲು ಯತ್ನಿಸಿದ ಮುಖ್ಯಾಧಿಕಾರಿ ಸುರೇಶರನ್ನು ಸಿನಿಮಾ ಶೈಲಿಯಲ್ಲಿ ಬೆನ್ನತ್ತಿ ಲೋಕಾಯುಕ್ತ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಪಟ್ಟಣದಲ್ಲಿರುವ ಆಸ್ತಿಗೆ ಇ-ಖಾತಾ ನೀಡಲು ರಾಘವೇಂದ್ರ ರೆಡ್ಡಿ ಎಂಬುವರಿಗೆ ₹2 ಲಕ್ಷ ಲಂಚ ಬೇಡಿಕೆಯಿಟ್ಟು ಮುಂಚಿತವಾಗಿ ₹1 ಲಕ್ಷ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಜು ಮತ್ತು ಇನ್ಸ್ಪೆಕ್ಟರ್ಗಳ ಬಲೆಗೆ ಬಿದ್ದಿದ್ದಾರೆ. ನಿವೇಶನದ ಇ ಖಾತಾ ನೀಡಲು ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಅವರು ಸಿರವಾರದ ರಾಘವೇಂದ್ರ ರೆಡ್ಡಿ ಅವರಿಂದ ಲಂಚ ಸ್ವೀಕರಿಸಿ ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು. ಮುಖ್ಯಾಧಿಕಾರಿಯನ್ನು ಬೈಕ್ಗಳಲ್ಲಿ ಹಿಂಬಾಲಿಸಿದ ಪೊಲೀಸರು ಕಾರನ್ನು ಗುರುತಿಸಿ ಮೊಬೈಲ್ ಲೊಕೇಶನ್ ಆಧರಿಸಿ ಸ್ನೇಹಿತನ ಮನೆಯಲ್ಲಿದ್ದ ಅಧಿಕಾರಿಯನ್ನು ಲಂಚದ ಹಣ ಸಹಿತ ವಶಕ್ಕೆ ಪಡೆದರು.