
<p>ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದಾಗಿ 6 ಅಮಾಯಕ ಹಸುಗಳು ಸಜೀವ ದಹನವಾಗಿವೆ. ನಾಯಿಗಳನ್ನು ಹೆದರಿಸಲು ಕಸಕ್ಕೆ ಬೆಂಕಿ ಹಚ್ಚಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಈ ಕೃತ್ಯದ ಹಿಂದಿನ ನಿಜವಾದ ಉದ್ದೇಶವನ್ನು ತನಿಖೆ ಮಾಡುತ್ತಿದ್ದಾರೆ.</p><img><p>ಬೆಂಗಳೂರಿನ ಡಿಜೆ ಹಳ್ಳಿಯ ಶಾಂಪುರ ರಸ್ತೆಯಲ್ಲಿರುವ ಪ್ಲೈವುಡ್ ಅಂಗಡಿಯೊಂದರಲ್ಲಿ ಸೋಮವಾರ ತಡರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಪಕ್ಕದಲ್ಲಿದ್ದ ಶ್ರೀನಿವಾಸ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಗೆ ವ್ಯಾಪಿಸಿದೆ. ಈ ದುರ್ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ 20 ಹಸುಗಳ ಪೈಕಿ 6 ಹಸುಗಳು ಹೊರಬರಲಾಗದೆ ನಿಂತಲ್ಲೇ ಸಜೀವ ದಹನವಾಗಿದ್ದು, ಮಾಲೀಕ ಶ್ರೀನಿವಾಸ್ ಅವರ ಜೀವನೋಪಾಯಕ್ಕೆ ಭಾರಿ ಪೆಟ್ಟು ಬಿದ್ದಿತ್ತು.</p><img><p>ಈ ಬೆಂಕಿ ಅವಘಡ ಆಕಸ್ಮಿಕವಲ್ಲ, ಬದಲಾಗಿ ಕಿಡಿಗೇಡಿಯೊಬ್ಬನ ಕೃತ್ಯ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿ ಹಳ್ಳಿ ನಿವಾಸಿ ಇರ್ಫಾನ್ ಪಾಷ ಎಂಬಾತನನ್ನು ಡಿಜೆ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ತಡರಾತ್ರಿ ವೇಳೆ ಆ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.</p><img><p>ಪೊಲೀಸರ ವಿಚಾರಣೆ ವೇಳೆ ಆರೋಪಿ ಇರ್ಫಾನ್ ವಿಚಿತ್ರ ಕಾರಣ ನೀಡಿದ್ದಾನೆ. "ರಾತ್ರಿ ವೇಳೆ ಓಡಾಡುತ್ತಿದ್ದಾಗ ನಾಯಿಗಳು ನನ್ನನ್ನು ಅಟ್ಟಾಡಿಸಿದ್ದವು, ಅವುಗಳನ್ನು ಹೆದರಿಸಲು ರಸ್ತೆಯ ಬದಿಯಲ್ಲಿದ್ದ ಕಸಕ್ಕೆ ಬೆಂಕಿ ಹಚ್ಚಿದೆ. ಹಸುಗಳನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ" ಎಂದು ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಈ ಹೇಳಿಕೆಯನ್ನು ಪೂರ್ಣವಾಗಿ ನಂಬುತ್ತಿಲ್ಲ.</p><img><p>ಆರೋಪಿ ನಾಯಿಗಳ ಭಯದಿಂದ ಬೆಂಕಿ ಹಚ್ಚಿದೆ ಎಂದು ಹೇಳುತ್ತಿದ್ದರೂ, ಸಿಸಿಟಿವಿ ದೃಶ್ಯಾವಳಿಗಳು ಬೇರೆಯದೇ ಕಥೆ ಹೇಳುತ್ತಿವೆ. ಆರೋಪಿ ಇರ್ಫಾನ್ ಅತ್ಯಂತ ನಿಧಾನವಾಗಿ ಕುಳಿತು ಕಸಕ್ಕೆ ಬೆಂಕಿ ಹಚ್ಚಿ, ನಂತರ ತನ್ನ ಮುಖವನ್ನು ಮುಚ್ಚಿಕೊಂಡು ಅಲ್ಲಿಂದ ಪಾರಾಗುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದು ಉದ್ದೇಶಪೂರ್ವಕ ಕೃತ್ಯವಿರಬಹುದು ಎಂಬ ಅನುಮಾನ ದಟ್ಟವಾಗಿದೆ.</p><img><p>ಸದ್ಯ ಡಿಜೆ ಹಳ್ಳಿ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಕೇವಲ ನಾಯಿಗಳ ಭಯಕ್ಕೆ ಹೀಗೆ ಮಾಡಿದ್ದಾನೋ ಅಥವಾ ಇದರ ಹಿಂದೆ ಬೇರೆ ಏನಾದರೂ ವೈಯಕ್ತಿಕ ದ್ವೇಷವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸುಮಾರು 25 ವರ್ಷಗಳಿಂದ ಹೈನುಗಾರಿಕೆ ನಂಬಿಕೊಂಡಿದ್ದ ಶ್ರೀನಿವಾಸ್ ಅವರ ಕುಟುಂಬಕ್ಕೆ ಈಗ ಪರಿಹಾರದ ಭರವಸೆಯಷ್ಟೇ ಬಾಕಿಯಿದೆ.</p>
Source link
ಡಿಜೆ ಹಳ್ಳಿ ಬೆಂಕಿ ಅವಘಡ: ನಿಂತಲ್ಲೇ 6 ಹಸುಗಳ ಸಜೀವ ದಹನಕ್ಕೆ ಕಾರಣವಾದ ಆರೋಪಿ ಇರ್ಫಾನ್ ಪಾಷ ಸೆರೆ