
ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಅವರು ಡಿಎಂಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ಮಾರಕವಾದ ಮೇಕೆದಾಟು ಯೋಜನೆಗೆ ಮುಂದಾಗಿರುವ ಕರ್ನಾಟಕದ ಡಿಸಿಎಂ ಡಿಕೆಶಿ ಜೊತೆ ಡಿಎಂಕೆ ಜಂಟಿ ಪ್ರಚಾರ ನಡೆಸಿರುವುದು ಜನರ ಹಿತಕ್ಕೆ ವಿರುದ್ಧ ಎಂದಿದ್ದಾರೆ.
ತಂಜಾವೂರು (ಏ.13): ಆಡಳಿತಾರೂಢ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ನಡುವಿನ ಚುನಾವಣಾ ಸಮರದಲ್ಲಿ ಇದೀಗ ಕರ್ನಾಟಕದ ‘ಮೇಕೆದಾಟು’ ಯೋಜನೆಯೂ ಪ್ರಸ್ತಾಪವಾಗಿ ಗದ್ದಲಕ್ಕೆ ಸಾಕ್ಷಿಯಾಗಿದೆ. ಶನಿವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ, ‘ಡಿಎಂಕೆ ಪಕ್ಷವು, ತಮಿಳುನಾಡು ಜನರ ಹಿತ ಕಾಯುವಲ್ಲಿ ಇಬ್ಬಗೆ ನೀತಿ ಪ್ರದರ್ಶಿಸುತ್ತಿದೆ. ತಮಿಳು ಜನರ ಕೃಷಿಗೆ ಮಾರಕವಾದ ಮೇಕೆದಾಟು ಯೋಜನೆ ಜಾರಿಗೆ ಮುಂದಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಡಿಎಂಕೆ ಜಂಟಿ ಪ್ರಚಾರ ನಡೆಸಿದೆ’ ಎಂದು ಕುಟುಕಿದ್ದಾರೆ.
ಕೇಂದ್ರದೊಡನೆ ಉದ್ದೇಶಪೂರ್ವಕವಾಗಿ ಸಂಘರ್ಷ ನಡೆಸಿರುವ ಡಿಎಂಕೆ ರಾಜ್ಯಕ್ಕೆ ಅನುದಾನ ತರಲು ವಿಫಲವಾಗಿದೆ. ಚುನಾವಣೆ ವೇಳೆ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ ಚುನಾಯಿತ ಸರ್ಕಾರ ಜನರ ಹಿತಕ್ಕಾಗಿ ದುಡಿಯಬೇಕು ಎಂದು ತಿವಿದಿದ್ದಾರೆ.