
ಬೆಂಗಳೂರು, ಏಪ್ರಿಲ್ 13: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಸದ (ಕಸ) ಸಮಸ್ಯೆ ತಲೆದೂರಿದೆ. ಹೀಗಾಗಿ ಬಿದ್ದ ರಾಶಿ ರಾಶಿ ಕಸವನ್ನು ಜನರೇ ಎತ್ತಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ರಸ್ತೆ ಬಳಿ ಬಿದ್ದ ಕಸವನ್ನು ಜನರೇ ಜೆಸಿಬಿ ಮತ್ತು ಲಾರಿ ಕರೆಸಿ ಕಸ ಎತ್ತಿಸಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಈ ಮಧ್ಯೆ ನಿಮ್ಮ ಕಸವನ್ನು ಸಂಗ್ರಹಿಸಿ, ವಿಲೇವಾರಿ ಮಾಡುವಿಕೆಯು ಸಂಪೂರ್ಣ ವಿಫಲವಾಗಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಬಿಎ ವಿರುದ್ಧ ಉದ್ಯಮಿ ಗರಂ
ಈ ಬಗ್ಗೆ ಎಕ್ಸ್’ನಲ್ಲಿ ಕಸದ ವಿಡಿಯೋ ಮಾಡಿ, ಟ್ವೀಟ್ ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಳುತ್ತಿದೆಯಾ? ಇಲ್ಲಾ ನಟಿಸುತ್ತಿದೆಯಾ? ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಸದ ಸಮಸ್ಯೆಗೆ ಕಿರಣ್ ಮಜುಂದಾರ್ ಕಿಡಿಕಾರಿದ್ದರು.
ತಾವೇ ಕಸ ಎತ್ತಿದ ಸ್ಥಳೀಯರು
ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 17 ಗುರಪ್ಪನಪಾಳ್ಯದಲ್ಲಿ ಎಲೆಡೆ ಕಸದ ದರ್ಶನವೇ ಆಗುತ್ತೆ. ವಾರ ಅಲ್ಲ, ತಿಂಗಳುಗಳೇ ಕಳೆದರೂ ಕಸ ಎತ್ತುವುದಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡಿಲ್ಲ.
ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಈ ವಾರ್ಡ್ ಅನ್ನ ಮರೆತೇ ಬಿಟ್ಟಿದ್ದಾರೆ. ಹೀಗಾಗಿ ದಿಕ್ಕು ತೋಚದ ಸ್ಥಳೀಯರು ತಾವೇ ನಿನ್ನೆ ಕಸ ಎತ್ತಿದ್ದಾರೆ. ಸ್ಥಳೀಯ ನಿವಾಸಿ ಮತ್ತು ಸಮಾಜ ಸೇವಕ ಮಾಸ್ತಿ ಜಾಕಿರ್ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಕಸ ಎತ್ತುವ ಅಭಿಯಾನ ಮಾಡಿದ್ದಾರೆ.
ಅಧಿಕಾರಿಗಳಿಗೆ ಹಿಡಿಶಾಪ
ಅದೇ ರೀತಿ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ಸ್ಥಳೀಯ ನಿವಾಸಿಗಳು ರೊಚ್ಚಿಗೆದ್ದಿದ್ದರು. ಜಿಬಿಎ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಿದ್ದು ನಾುತ್ತಿರುವ ಕಸದ ರಾಶಿಯಿಂದ ಎದುರಾಗಿರುವ ತೊಂದರೆಗಳನ್ನು ಹೇಳುತ್ತಾ ಹಿಡಿಶಾಪ ಹಾಕಿದರು. ಕಸವನ್ನಾದರೂ ಎತ್ತಿ, ಇಲ್ಲವಾದರೆ ಮತ್ತೆ ಕಸ ಬೀಳದಂತೆ ಕ್ರಮಕೈಗೊಳ್ಳಿ ಎಂದು ಕೇಳಿದರು.
ವರದಿ: ನಟರಾಜ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.