
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ತಾನು ಮೂರನೇ ಬಾರಿ ಮುಖ್ಯಮಂತ್ರಿಯಾಗುವುದು ಜನರ ಕೈಯಲ್ಲಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಅವರು, ಇನ್ನು ಮುಂದೆ ವಾರದಲ್ಲಿ ಎರಡು ದಿನ ರಾಜ್ಯದಲ್ಲಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಏ.15): ‘ನಾನು ಮೂರನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ನನ್ನ ಕೈಯಲ್ಲಿಲ್ಲ. ಅದು ನಾಡಿನ ಜನತೆ ಕೈಯಲ್ಲಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿಎಂ ಆಗುವುದು ಮುಖ್ಯವಲ್ಲ. ಈಗಾಗಲೇ ಭಗವಂತನ ಆಶೀರ್ವಾದ, ಕಾರ್ಯಕರ್ತರ ದುಡಿಮೆಯಿಂದ ಬಹುಮತ ಇಲ್ಲದಿದ್ದರೂ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ನಾಡಿನ ಜನ ಕೈ ಹಿಡಿದರೆ 3ನೇ ಬಾರಿ ಸಿಎಂ ಆಗುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಎಲ್ಲಿ ಹೋದರೂ ಗ್ಯಾರಂಟಿಗಳ ಭಜನೆ ಮಾಡುತ್ತಿದ್ದಾರೆ. 2 ಸಾವಿರ ರು.ನಿಂದ ಜನ ಸುಖದ ಸುಪ್ಪತ್ತಿಗೆ ಮೇಲೆ ತೇಲುತ್ತಿದ್ದಾರೆ ಎಂದು ಕಥೆ ಕಟ್ಟಿ ಹೇಳುತ್ತಿದ್ದಾರೆ. ರಾಜ್ಯವನ್ನು ಆಳುವ ಜನ ಎಸಿ ರೂಮಿನಲ್ಲಿ ಕೂತು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೆ ಜನರ ಸಮಸ್ಯೆ ನೀಗಲ್ಲ ಎಂದರು.
. ಹಳ್ಳಿಗಳಿಗೆ ತೆರಳಿ ಅವರ ಪರಿಸ್ಥಿತಿಗಳನ್ನು ಖದ್ದು ನೋಡಬೇಕು. ವಿಧಾನಸೌಧದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದರೆ ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು:
ಈ ಸರ್ಕಾರದ ದುರಾಡಳಿತ ನೋಡಿಕೊಂಡು ನಾನು ಸುಮ್ಮನೆ ಕೂರಲು ಆಗಲ್ಲ. ಜನರ ಪರವಾಗಿ ನಾನೂ ದನಿ ಎತ್ತಬೇಕು. ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲೇ ಇರುತ್ತೇನೆ. ನಾನು ಪಕ್ಷದ ರಾಜ್ಯಾಧ್ಯಕ್ಷ. ಕರ್ನಾಟಕ ನನ್ನ ಕರ್ಮಭೂಮಿ. ಚುನಾವಣಾ ವರ್ಷ ಶುರುವಾಗಲಿದೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ. ಜನ ಪರವಾಗಿಯೂ ಹೋರಾಡುತ್ತೇನೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಳಿತಾಗಲಿದೆ. ಬೆಂಗಳೂರು ಸೇರಿ ಇಡೀ ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯವರು ಮಹಾ ಸುಳ್ಳುಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ. ಆದರೆ, ಇವರು ಎಷ್ಟು ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಿದೆ. ಯಾರು ಸುಳ್ಳುಗಾರರು ಎಂದು ಸಿದ್ದರಾಮಯ್ಯ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
– ಬಹುಮತ ಇಲ್ಲದಿದ್ದರೂ 2 ಬಾರಿ ಸಿಎಂ ಆಗಿದ್ದೆ
– ಇನ್ನು ವಾರದಲ್ಲಿ ಎರಡು ದಿನ ರಾಜ್ಯದಲ್ಲಿರುತ್ತೇನೆ
– ಪಕ್ಷ ಸಂಘಟಿಸಲು ಶ್ರಮಿಸ್ತೇನೆ: ಕುಮಾರಸ್ವಾಮಿ