Headlines

ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ… | Former Minister Vinay Kulkarni Convicted In Yogesh Gowda Murder Case Update News Sat Videoshow

ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ… | Former Minister Vinay Kulkarni Convicted In Yogesh Gowda Murder Case Update News Sat Videoshow


ಬೆಂಗಳೂರು/ಧಾರವಾಡ (ಏ.16): ‘ನ್ಯಾಯ ವಿಳಂಬವಾಗಬಹುದು, ಆದರೆ ಸತ್ಯಕ್ಕೆ ಸೋಲಿಲ್ಲ’ (Justice may be delayed but truth prevail) ಎಂಬ ಮಾತಿಗೆ ಇಂದು ಮತ್ತೆ ಜಯ ಸಿಕ್ಕಿದೆ. ದಶಕದ ಹಿಂದೆ ನಡೆದಿದ್ದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಲಯವು ‘ಅಪರಾಧಿ’ ಎಂದು ಘೋಷಿಸಿದೆ. ಈ ತೀರ್ಪಿನೊಂದಿಗೆ ಹತ್ತು ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟ ಮತ್ತು ರಾಜಕೀಯ ಹಸ್ತಕ್ಷೇಪಗಳ ನಾಟಕಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.

ಏನಿದು ಪ್ರಕರಣ?

2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್‌ನಲ್ಲಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಇದೊಂದು ಭೂಮಿ ವಿವಾದದ ಕೊಲೆ ಎಂದು ಬಿಂಬಿಸಲು ರಾಜ್ಯ ಪೊಲೀಸರ ಮೇಲೆ ತೀವ್ರ ರಾಜಕೀಯ ಒತ್ತಡ ಹೇರಲಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದ್ದರೂ, ಸ್ಥಳೀಯ ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು.

ಸುವರ್ಣ ನ್ಯೂಸ್ ಬೆನ್ನತ್ತಿದ ಪ್ರಕರಣ:

ಯೋಗೇಶ್ ಗೌಡ ಅವರ ಕುಟುಂಬದವರು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಗ, ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಪ್ರಕರಣವನ್ನು ತನ್ನ ‘ಎಫ್.ಐ.ಆರ್’ (FIR) ಕಾರ್ಯಕ್ರಮದ ಮೂಲಕ ನಿರಂತರವಾಗಿ ಬೆನ್ನತ್ತಿತ್ತು. ಅಧಿಕಾರದ ಬಲದಿಂದ ಈ ಕೊಲೆಯನ್ನು ಹೇಗೆ ಮುಚ್ಚಿ ಹಾಕಲಾಗುತ್ತಿದೆ ಎಂಬುದನ್ನು ದಾಖಲೆ ಸಮೇತವಾಗಿ ಸಮಾಜದ ಮುಂದೆ ತೆರೆದಿಟ್ಟಿತ್ತು. ಈ ನಿರಂತರ ಹೋರಾಟದ ಫಲವಾಗಿಯೇ ಪ್ರಕರಣಕ್ಕೆ ಹೊಸ ಜೀವ ಸಿಕ್ಕಿತು.

ಸಿಬಿಐ ಎಂಟ್ರಿ ಮತ್ತು ಅಸಲಿ ಸತ್ಯ ಬಯಲು:

ರಾಜ್ಯದಲ್ಲಿ ಅಧಿಕಾರ ಬದಲಾದ ಮೇಲೆ ಮತ್ತು ಯೋಗೇಶ್ ಗೌಡ ಅವರ ಪತ್ನಿ ಹಾಗೂ ಕುಟುಂಬದವರ ಹಕ್ಕೊತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯನ್ನು ತಡೆಯಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಹಲವು ಸ್ಟೇ ಆರ್ಡರ್‌ಗಳನ್ನು ತರಲಾಗಿತ್ತು. ಆದರೆ, ಅಂತಿಮವಾಗಿ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ನಂತರ ಸಿಬಿಐ ಅಧಿಕಾರಿಗಳು ಫೀಲ್ಡ್‌ಗೆ ಇಳಿದರು. ಸಿಬಿಐ ತನಿಖೆಯ ವೇಳೆ ನೈಜ ಹಂತಕರು ಯಾರು ಎಂಬುದು ಬಯಲಾಯಿತು. ಈ ಹಿಂದೆ ತಾವೇ ಕೊಲೆ ಮಾಡಿದ್ದೇವೆ ಎಂದು ಶರಣಾಗಿದ್ದವರು ನಕಲಿ ಆರೋಪಿಗಳು ಎಂಬುದು ಸಾಬೀತಾಯಿತು. ಸಿಬಿಐ ಅಧಿಕಾರಿಗಳು ಒಬ್ಬ ಆರೋಪಿಯನ್ನು ‘ಮಾಫಿ ಸಾಕ್ಷಿ’ಯನ್ನಾಗಿ (Approver) ಮಾಡಿಕೊಂಡಿದ್ದು ಈ ಕೇಸ್‌ನಲ್ಲಿ ದೊಡ್ಡ ತಿರುವು ನೀಡಿತು. ಒಟ್ಟು 21 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ, ವಿನಯ್ ಕುಲಕರ್ಣಿಯೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂಬುದನ್ನು ಸಾಕ್ಷ್ಯಧಾರ ಸಮೇತ ನಿರೂಪಿಸಿತು.

ನ್ಯಾಯದೇವತೆಯ ತೀರ್ಪು:

ದಶಕದ ಕಾಲ ನಡೆದ ವಾದ-ಪ್ರತಿವಾದಗಳ ನಂತರ, ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಈ ಮೂಲಕ ಯೋಗೇಶ್ ಗೌಡ ಅವರ ಆತ್ಮಕ್ಕೆ ಅಂತಿಮವಾಗಿ ಶಾಂತಿ ಸಿಕ್ಕಿದೆ. ಯಾರು ಎಷ್ಟೇ ಪ್ರಭಾವಿಯಾಗಿದ್ದರೂ, ಕಾನೂನು ಮತ್ತು ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ಅಧಿಕಾರದ ಅಹಂಕಾರದಿಂದ ಕೊಲೆ ಮಾಡಿ ಬಚಾವಾಗಬಹುದು ಎಂಬ ಕನಸು ಕಂಡಿದ್ದ ರಾಜಕಾರಣಿಗೆ ನ್ಯಾಯಾಲಯವು ಕಠಿಣ ಸಂದೇಶ ರವಾನಿಸಿದೆ.



Source link

Leave a Reply

Your email address will not be published. Required fields are marked *