
ಚೀನಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮಕ್ಕಳ ಮೇಲೆ ಘೋರ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರು ಶಿಶು ಕಾಮಿಗಳನ್ನು ಒಂದೇ ದಿನ ಗಲ್ಲಿಗೇರಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವ ಚೀನಾ, ಈ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ.
ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ
ಭಾರತದಲ್ಲಿ ಶಿಶು ಹಾಗೂ ಮಕ್ಕಳ ಕಾಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಅಮರಾವತಿಯಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಇನ್ನು ಕಾನೂನಿನ ವ್ಯಾಪ್ತಿಗೆ ಬಾರದ ಹಲವು ಪ್ರಕರಣಗಳು ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ. ಆದರೆ ಭಾರತದ ಕಾನೂನು ವ್ಯವಸ್ಥೆಯ ವಿಳಂಬ ಗತಿಯ ತನಿಖೆಯಿಂದಾಗಿ ಯಾವುದೇ ಆರೋಪಿಗಳಿಗೆ ದೊಡ್ಡ ಮಟ್ಟದ ಶಿಕ್ಷೆ ಆಗುವುದೇ ಇಲ್ಲ, ಹಲವು ಪ್ರಕರಣಗಳಲ್ಲಿ ಆರೋಪಿಗಳು ರಾಜರೋಷವಾಗಿ ತಿರುಗಾಡುತ್ತಿರುತ್ತಾರೆ. ಭಾರಿ ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಆರೋಪಿಗಳು ಅಥವಾ ತಪ್ಪಿತಸಸ್ಥರಿಗೆ ಕಾನೂನಿನ ಭಯವೆಂಬುದೇ ಇಲ್ಲವಾಗಿದೆ. ಅಮೆರಿಕಾದಲ್ಲಿ ಮಕ್ಕಳ ಅತ್ಯಾ*ಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಚರ್ಚೆ ನಡೆಯುತ್ತಿದೆಯೇ ಹೊರತು ಕಾನೂನು ಜಾರಿಗೆ ಬಂದಿಲ್ಲ. ಆದರೆ ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲಿ ಮಾತ್ರ ಒಂದೇ ದಿನ ಒಟ್ಟು ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ.
ಒಂದೇ ದಿನ 3 ರೇ*ಪಿಸ್ಟ್ಗಳ ಗಲ್ಲಿಗೇರಿಸಿ ಸ್ಪಷ್ಟ ಸಂದೇಶ
ಆರೋಪಿಗಳು ಮಕ್ಕಳ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯ ಅತ್ಯಂತ ಘೋರವಾದುದು ಎಂದು ತೀರ್ಪು ನೀಡಿದ ಚೀನಾದ ಸರ್ವೋಚ್ಚ ನ್ಯಾಯಾಲಯವು ಮೂವರು ಮಕ್ಕಳ ಕಾಮಿಗಳಿಗೆ ಅತ್ಯಧಿಕ ಶಿಕ್ಷೆಯಾದ ಗಲ್ಲು ಶಿಕ್ಷೆ ನೀಡುವಂತೆ ಆದೇಶಿಸಿತ್ತು. ಅದಂತೆ ಚೀನಾದಲ್ಲಿ ಒಂದೇ ದಿನ ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ. ಚೀನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಯಾವುದೇ ಕ್ಷಮೆ ಇಲ್ಲ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶೂನ್ಯ ಸಹಿಷ್ಣುತೆಯನ್ನು ಪಾಲಿಸುತ್ತಾ ಬಂದಿರುವ ಚೀನಾ ಇಂತಹ ಪ್ರತಿಯೊಂದು ಪ್ರಕರಣವನ್ನು ಸಾರ್ವಜನಿಕಗೊಳಿಸುತ್ತದೆ.
ಇದನ್ನೂ ಓದಿ: ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ
ಚೀನಾದ ನ್ಯಾಯಾಲಯದಿಂದ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ ಓರ್ವ ಅಕ್ರಮವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ ಹಾಗೂ ಅಲ್ಲಿ ಡಜನ್ಗೂ ಹೆಚ್ಚು ಮಕ್ಕಳನ್ನು ಬಂಧನದಲ್ಲಿ ಇರಿಸಿದ್ದ. ಅದರಲ್ಲಿ 14ರೊಳಗಿನ ಕನಿಷ್ಠ 8 ಮಕ್ಕಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹಾಗೆಯೇ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ 2ನೇಯ ಆರೋಪಿಯೂ ಆನ್ಲೈನ್ನಲ್ಲಿ ಪ್ರತೀಭಾ ಶೋಧನೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಹಾಗೂ ಅದರ ಮೂಲಕ ಸಂಪರ್ಕಕ್ಕೆ ಬಂದ 9 ಮಕ್ಕಳನ್ನು ಭೇಟಿಯಾಗುವ ನೆಪ ಮಾಡಿ ಅವರ ಮೇಲೆ ದೌರ್ಜನ್ಯವೆಸಗಿದ್ದ, ಈತ ಲೈಂಗಿಕ ದೌರ್ಜನ್ಯವೆಸಗಿದ್ದ ಮಕ್ಕಳಲ್ಲಿ ವಿಶೇಷ ಚೇತನ ಮಗುವೂ ಸೇರಿತ್ತು. ಹಾಗೆಯೇ ಗಲ್ಲು ಶಿಕ್ಷೆಗೊಳಗಾದ ಮತ್ತೊಬ್ಬ ಆರೋಪಿಯೂ ಅಪರಾದವನ್ನು ಮತ್ತೆ ಮತ್ತೆ ಮಾಡಿದ ಆರೋಪಿಯಾಗಿದ್ದಾನೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆತನಿಗೆ ಈಗಾಗಲೇ ಶಿಕ್ಷೆಯಾಗಿ ಆತ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಾಗಿದ್ದಾನೆ.
ಇದನ್ನೂ ಓದಿ: ನಾನು ಗರ್ಭಿಣಿ ನನಗೆ ರಿಲೀಫ್ ಬೇಕು: ನಾಸಿಕ್ ಟಿಸಿಎಸ್ ಮತಾಂತರ ಕೇಸ್ ಆರೋಪಿ ನಿದಾ ಖಾನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ!
ಮೊದಲ ಬಾರಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾಗಿದ್ದ ಆತ ಶಾಲೆಯೊಂದರ ಚಾಟ್ಗ್ರೂಪ್ ಒಳನುಸುಳಿ ಅಲ್ಲಿ 14ರ ಪ್ರಾಯದೊಳಗಿನ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಆತ ಈ ಲೈಂಗಿಕ ದೌರ್ಜನ್ಯದ ದೃಶ್ಯವನ್ನು ಚಿತ್ರೀಕರಿಸಿಕೊಂಡು ಆ ಮಕ್ಕಳಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ನ್ಯಾಯಾಲಯ ಹೇಳಿದೆ. ಈ ಮರಣದಂಡನೆ ಶಿಕ್ಷೆಯೂ ಮಕ್ಕಳ ಮೇಲಿನ ಅಪರಾಧಕ್ಕೆ ಯಾವುದೇ ಕ್ಷಮೆ ಇಲ್ಲ ಹಾಗೂ ಅದನ್ನು ದೇಶವೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂಬುದರ ಸ್ಪಷ್ಟ ಚಿತ್ರಣವಾಗಿದೆ.