ಯಶ್ ಶೆಟ್ಟಿ ನಟನೆಯ ‘ಜಂಗಲ್ ಮಂಗಲ್’ ಸಿನಿಮಾಗೆ ಶೀರ್ಷಿಕೆ ಕೊಟ್ಟ ಯೋಗರಾಜ್ ಭಟ್

ಯಶ್ ಶೆಟ್ಟಿ ನಟನೆಯ ‘ಜಂಗಲ್ ಮಂಗಲ್’ ಸಿನಿಮಾಗೆ ಶೀರ್ಷಿಕೆ ಕೊಟ್ಟ ಯೋಗರಾಜ್ ಭಟ್


ಜುಲೈ 4ರಂದು ‘ಜಂಗಲ್ ಮಂಗಲ್’ (Jungle Mangal) ಸಿನಿಮಾ ಬಿಡುಗಡೆ ಆಗಲಿದೆ. ರಕ್ಷಿತ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ (Yash Shetty) ಮತ್ತು ಹರ್ಷಿತಾ ರಾಮಚಂದ್ರ (Harshitha Ramachandra) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ‘ಜಂಗಲ್ ಮಂಗಲ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡರು. ‘ನಾನು ಇಬ್ಬರು ಖ್ಯಾತ ನಿರ್ದೇಶಕರಿಗೆ ಮೊದಲು ಧನ್ಯವಾದ ಹೇಳಬೇಕು’ ಎಂದು ಅವರು ಮಾತು ಆರಂಭಿಸಿದರು.

‘ನಮ್ಮ ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಸಿನಿಮಾಗೆ ಜಂಗಲ್ ಮಂಗಲ್ ಅಂತ ಶೀರ್ಷಿಕೆ ಇಡಲು ಸೂಚಿಸಿದರು. ಸಿನಿಮಾ ನೋಡಿ ಮೆಚ್ಚಿಕೊಂಡ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ಅವರು ತಮ್ಮ ‘ಸುನಿ ಸಿನಿಮಾಸ್’ ಬ್ಯಾನರ್ ಮೂಲಕ ಸಿನಿಮಾವನ್ನು ಅರ್ಪಿಸಲು ಮುಂದಾದರು’ ಎಂದು ನಿರ್ದೇಶಕ ರಕ್ಷಿತ್ ಕುಮಾರ್ ಹೇಳಿದರು. ಅರೆ ಮಲೆನಾಡಿನಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು ಎಂದು ಚಿತ್ರತಂಡ ಹೇಳಿದೆ.

‘ನಾವು ಒಂದಿಷ್ಟು ಸ್ನೇಹಿತರೆ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ. ನಾನು ಕಳೆದ 10 ವರ್ಷಗಳಿಂದ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ಅರೆ ಮಲೆನಾಡಿನಲ್ಲಿ ನಡೆಯುವ ಕಹಾನಿ ಆದ್ರೂ ಕೂಡ ಯೂನಿವರ್ಸಲ್ ಸಬ್ಜೆಕ್ಟ್ ಆಗಿದೆ’ ಎಂದಿದ್ದಾರೆ ನಿರ್ದೇಶಕ ರಕ್ಷಿತ್ ಕುಮಾರ್.

ಇದನ್ನೂ ಓದಿ

‘ಸಹ್ಯಾದ್ರಿ ಸ್ಟುಡಿಯೋಸ್’ ಮೂಲಕ ನಿರ್ಮಾಣ ಆಗಿರುವ ‘ಜಂಗಲ್ ಮಂಗಲ್’ ಸಿನಿಮಾಗೆ ಪ್ರಜೀತ್ ಹೆಗಡೆ, ಮನು ಶೇಡ್ಗಾರ್ ಮುಂತಾದವರು ಬಂಡವಾಳ ಹೂಡಿದ್ದಾರೆ. ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ ಜೊತೆ ಉಗ್ರಂ ಮಂಜು, ಬಾಲರಾಜ್ ವಾಡಿ ಮುಂತಾದವರು ಅಭಿನಯಿಸಿದ್ದಾರೆ. ಮನು ಶೇಡ್ಗಾರ್ ಅವರ ನಿರ್ಮಾಣದ ಜೊತೆ ಸಂಕಲನ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ‘ಮೆಟ್ರೋ ಇನ್ ದಿನೋ’ ಸಿನಿಮಾ ಪ್ರಚಾರ ಮಾಡಿದ ಸಾರಾ, ಆದಿತ್ಯ ರಾಯ್ ಕಪೂರ್

ಹರ್ಷಿತಾ ರಾಮಚಂದ್ರ ಅವರು ಈ ಸಿನಿಮಾದಲ್ಲಿ ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ಮಾಡಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಉಗ್ರಂ ಮಂಜು ಅವರು ಖಳನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಮಾಡಿರುವ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ತಮ್ಮ ಪಾತ್ರ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ. ನಟ ಯಶ್ ಶೆಟ್ಟಿ ಮಾತನಾಡಿ, ‘ನನಗೆ ಹೀರೋ ಆಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರುತಿಸಿಕೊಳ್ಳಬೇಕು ಅಷ್ಟೇ. ಈ ಮೊದಲು ನಾನು ‘ಸೂಜಿದಾರ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದೆ. ಅದನ್ನು ಒಪ್ಪಿಕೊಳ್ಳಲು ಕಥೆ ಕಾರಣ. ಈಗ ಜಂಗಲ್ ಮಂಗಲ್ ಕಥೆ ಕೂಡ ಚೆನ್ನಾಗಿದೆ. ಇಲ್ಲಿ ಕಥೆಯೇ ನಾಯಕ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.



Source link

Leave a Reply

Your email address will not be published. Required fields are marked *