Bengaluru: ಹಳೆಯ ಬಾಯ್ ಫ್ರೆಂಡ್‌ನಿಂದ 2.5 ಕೋಟಿ ಸುಲಿಗೆ ಯತ್ನ: ನಾಲ್ವರ ಬಂಧನ | Four Arrested Blackmail Ex Boyfriend 2 5 Crore Gvd

Bengaluru: ಹಳೆಯ ಬಾಯ್ ಫ್ರೆಂಡ್‌ನಿಂದ 2.5 ಕೋಟಿ ಸುಲಿಗೆ ಯತ್ನ: ನಾಲ್ವರ ಬಂಧನ | Four Arrested Blackmail Ex Boyfriend 2 5 Crore Gvd



ತನ್ನ ಹಳೆಯ ಬಾಯ್ ಫ್ರೆಂಡ್‌ನನ್ನು ಮಾತುಕತೆ ಸೋಗಿನಲ್ಲಿ ಕರೆಸಿಕೊಂಡು ಬಳಿಕ ಅಪಹರಿಸಿ 2.5 ಕೋಟಿ ರು. ವಸೂಲಿಗೆ ಯತ್ನಿಸಿದ್ದ ದುಬೈ ಟ್ರಾವೆಲ್ಸ್‌ ಏಜೆನ್ಸಿ ಉದ್ಯೋಗಿಯ ಮಾಜಿ ಪ್ರಿಯತಮೆಯ ನಾಲ್ವರು ಸಹಚರರು ಅಶೋಕ ನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಜು.27): ತನ್ನ ಹಳೆಯ ಬಾಯ್ ಫ್ರೆಂಡ್‌ನನ್ನು ಮಾತುಕತೆ ಸೋಗಿನಲ್ಲಿ ಕರೆಸಿಕೊಂಡು ಬಳಿಕ ಅಪಹರಿಸಿ 2.5 ಕೋಟಿ ರು. ವಸೂಲಿಗೆ ಯತ್ನಿಸಿದ್ದ ದುಬೈ ಟ್ರಾವೆಲ್ಸ್‌ ಏಜೆನ್ಸಿ ಉದ್ಯೋಗಿಯ ಮಾಜಿ ಪ್ರಿಯತಮೆಯ ನಾಲ್ವರು ಸಹಚರರು ಅಶೋಕ ನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ. ಆರ್‌.ಟಿ. ನಗರದ ದಿನ್ನೂರು ಮೇನ್‌ನ ಮೊಹಮ್ಮದ್‌ ಆಸೀಫ್‌, ಮೊಹಮ್ಮದ್‌ ಸೋಹೆಲ್‌, ಡಿ.ಜೆ.ಹಳ್ಳಿಯ ಸಲ್ಮಾನ್ ಪಾಷಾ ಹಾಗೂ ಕೆ.ಜಿ.ಹಳ್ಳಿಯ ಶಾಂಪುರದ ಮಹಮ್ಮದ್ ನವಾಜ್ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಸಂತ್ರಸ್ತನ ಮಾಜಿ ಪ್ರಿಯತಮೆ ಮಹಾರಾಷ್ಟ್ರ ಮೂಲದ ಮಹಿಮಾ ವಾಟ್‌ ಸೇರಿ ಇತರರ ಪತ್ತೆಗೆ ತನಿಖೆ ಮುಂದುವರಿದಿದೆ.

ಕೆಲ ದಿನಗಳ ಹಿಂದೆ ಬಸವ ಲೇಔಟ್‌ನ ಲಾರೆನ್ಸ್‌ ಮೇಲ್ವಿನ್ ಎಂಬುವರನ್ನು ಸ್ನೇಹಿತೆ ಮಹಿಮಾ ತಂಡ ಅಪಹರಿಸಿತ್ತು. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾದ ಕೂಡಲೇ ಬಂಧನ ಭೀತಿಯಿಂದ ಆತನನ್ನು ಯಶವಂತಪುರ ಸಮೀಪ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಬಿ.ರವಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇರಳ ಮೂಲದ ಲಾರೆನ್ಸ್‌ ಮೇಲ್ವಿನ್, ದುಬೈನಲ್ಲಿರುವ ರಾಯನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದು, ಕಳೆದ ತಿಂಗಳು ರಜೆ ಪಡೆದು ಪೋಷಕರ ಭೇಟಿಯಾಗಲು ಬಂದಿದ್ದರು. ನಂತರ ಪೋಷಕರ ಜತೆ ಕೇರಳಕ್ಕೆ ಹೋಗಿ ವಾಪಸ್‌ ಬೆಂಗಳೂರಿಗೆ ಬಂದು ಹೋಟೆಲ್‌ನಲ್ಲಿ ಉಳಿದಿದ್ದರು. ಕೇರಳದಿಂದ ಆತನ ಪೋಷಕರು ಕಾರಿನಲ್ಲಿ ಮರಳುತ್ತಿದ್ದರು. ಈತ ವಿಮಾನದಿಂದ ಬೇಗ ಬಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ.

ದೂರಿನ ವಿವರ: 14 ರಂದು ರಾತ್ರಿ ಏಳು ಗಂಟೆಗೆ ನನಗೆ ಅಪರಿಚಿತ ನಂಬರ್‌ನಿಂದ ಮಹಿಮಾ ಕರೆ ಮಾಡಿ ಮಾತನಾಡಿದ್ದಳು. ಮತ್ತೆ ಮುಂಜಾನೆ 3 ಗಂಟೆಗೆ ಕರೆ ಮಾಡಿ ಪದೇ ಪದೇ ಭೇಟಿಗೆ ಒತ್ತಾಯಿಸಿದ್ದಳು. ಕ್ಯಾಬ್ ಬುಕ್ ಮಾಡಿದ್ದೇನೆ ಬಾ ಎಂದು ಮೆಸೇಜ್ ಮಾಡಿದ್ದಳು. ಅಂತೆಯೇ ಹೋಟೆಲ್‌ನಿಂದ ಹೊರಬಂದು ನಿಂತಾಗ ಅಲ್ಲಿದ್ದ ಕ್ಯಾಬ್‌ ಚಾಲಕನಿಗೆ ಮಹಿಮಾ ಅವರು ಬುಕ್ ಮಾಡಿದ್ದಾರೆಯೇ ಎಂದಾಗ ವಿಚಾರಿಸಿದಾಗ ಹೌದು ಎಂದ. ಅಂತೆಯೇ ಆ ಕಾರಿನಲ್ಲಿ ನಾನು ಕುಳಿತುಕೊಂಡೆ. ಚಾಲಕ ಕಾರನ್ನು ಕೋರಮಂಗಲದ ಕಡೆಗೆ ಯೂಟರ್ನ್‌ ತೆಗೆದುಕೊಳ್ಳದೆ ಹಾಗೆಯೇ ಮುಂದುವರಿದ. ಈ ಬಗ್ಗೆ ಪ್ರಶ್ನಿಸಿದಾಗ ನಾನು ಕರೆದೊಯ್ದ ಕಡೆ ಬರುವಂತೆ ತಾಕೀತು ಮಾಡಿದ. ತಕ್ಷಣ ಆತ ಕಾರು ನಿಲ್ಲಿಸಿದ. ಆಗ ಕಾರಿಗೆ ಹತ್ತಿಕೊಂಡು ಎಡ-ಬಲ ಬಂದು ಇಬ್ಬರು ಕುಳಿತರು.

ನಾನು ಭಯದಿಂದ ಕೂಗಿಕೊಳ್ಳಲು ಯತ್ನಿಸಿದಾಗ ಮುಖಕ್ಕೆ ಬಟ್ಟೆ ಹಾಕಿ ಕೈಗಳಿಂದ ಗುದ್ದಿದರು. ಬಳಿಕ ನನ್ನ ಬಳಿ ಇದ್ದ 1 ಲಕ್ಷ ರು. ಹಣ ಹಾಗೂ 2 ಮೊಬೈಲ್ ಆರೋಪಿಗಳು ಕಿತ್ತುಕೊಂಡರು. ಮೊಬೈಲ್ ಪಾಸ್ ವರ್ಡ್ ಕೇಳಿದರೂ ಹೇಳದೆ ಹೋದಾಗ ನನ್ನ ಮುಖಕ್ಕೆ ಹೊಡೆದರು. ಬಳಿಕ ಯಾವುದೋ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ನನ್ನ ಕಣ್ಣುಗಳನ್ನು ಮುಚ್ಚಿ ಕರೆದೊಯ್ದು ಕೂಡಿ ಹಾಕಿದರು ಎಂದು ವಿವರಿಸಿದ್ದಾರೆ. ಅಲ್ಲಿಗೆ ಮತ್ತೊಬ್ಬ ವ್ಯಕ್ತಿ ಬಂದು ನನಗೆ 50 ಲಕ್ಷ ರು. ಹಣವು ನಗದು ರೂಪದಲ್ಲಿ ನೀಡುವಂತೆ ತಾಕೀತು ಮಾಡಿದ. ಆಗ ನಾನು ನನ್ನ ಬಳಿ ಅಷ್ಟೊಂದು ಹಣವಿಲ್ಲ, 20 ಲಕ್ಷ ರು. ಬೇಕಾದರೆ ಕೊಡುವುದಾಗಿ ತಿಳಿಸಿದೆ. ಆದರೆ 50 ಲಕ್ಷ ರು. ಹಣಕ್ಕೆ ಪಟ್ಟು ಹಿಡಿದರು. ಹೀಗೆ ಎರಡ್ಮೂರು ದಿನ ನನಗೆ ಚಿತ್ರಹಿಂಸೆ ನೀಡಿದರು. ಕೊನೆಗೆ 50 ಲಕ್ಷ ರು. ಕೊಡಲು ಒಪ್ಪಿದೆ. ಆದರೆ 2.5 ಕೋಟಿಗೆ ಬೇಡಿಕೆ ಇಟ್ಟರು ಎಂದು ಮೆಲ್ವಿನ್ ಹೇಳಿದ್ದಾರೆ.

ತಪ್ಪಿಸಿಕೊಂಡ ಸಂತ್ರಸ್ತ: ಜು.22 ರಂದು ಫ್ಲ್ಯಾಟ್‌ಗೆ ಚಿಲಕ ಹಾಕಿ ಆರೋಪಿಗಳು ಹೊರ ಹೋಗಿದ್ದರು. ಆಗ ನನ್ನ ಚೀರಾಟ ಕೇಳಿ ಪಕ್ಕದ ಮನೆ ಮಹಿಳೆ ಮಾತನಾಡಿಸಿದರು. ಅವರ ಮೂಲಕ ನನ್ನ ಸೋದರಿಗೆ ಕರೆ ಮಾಡಿ ಅಪಹರಣ ವಿಷಯ ತಿಳಿಸಿದೆ. ಕೂಡಲೇ ಪೊಲೀಸರಿಗೆ ಆಕೆ ದೂರು ಕೊಟ್ಟಳು. ತಕ್ಷಣವೇ ಅಲ್ಲಿಂದ ನನ್ನನ್ನು ಕಾರಿನಲ್ಲಿ ತುಮಕೂರು ರಸ್ತೆಯ ಮೂಲಕ ಬೇರೆಡೆಗೆ ಸಾಗಿಸುತ್ತಿದ್ದರು. ಅಷ್ಟರಲ್ಲಿ ಅಪಹರಣಕಾರರ ಮೊಬೈಲ್‌ಗೆ ಕರೆ ಬಂತು. ಆ ವೇಳೆ ನನ್ನ ಜತೆ ಮಾತನಾಡಿದ ಅಪರಿಚಿತ ‘ನನಗೆ ಸಿಡೋಪೋನಿಕ್ ಎಫೀಸೋ ಕಾಯಿಲೆ ಇದೆ. ನಿನಗೆ ಯಾರೋ ಕಿಡ್ನಾಪ್ ಮಾಡುತ್ತಿರುವುದಾಗಿ ಅನಿಸುತ್ತಿದೆ ಎಂದು ಪೊಲೀಸರಿಗೆ ಹೇಳುವಂತೆ’ ತಾಕೀತು ಮಾಡಿದ. ಅಲ್ಲದೆ ನಿನ್ನ ತಂಗಿಗೆ ಹೇಳು ಇಲ್ಲದೆ ಹೋದರೆ ನಿನ್ನನ್ನು ಇನ್ನೆರಡು ದಿನಗಳಲ್ಲಿ ಪುನಃ ಅಪಹರಿಸಿ ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಬಳಿಕ ಯಶವಂತಪುರದ ಹತ್ತಿರದ ತಾಜ್ ಹೊಟೇಲ್ ಬಳಿ ಕಾರಿನಿಂದ ಇಳಿಸಿ ನನಗೆ ಒಂದು ಕೀ ಪ್ಯಾಡ್ ನ ಮೊಬೈಲ್, ನನ್ನ ಸಿಮ್ ಹಾಗೂ ಮನೆಗೆ ಹೋಗಲೆಂದು 1 ಸಾವಿರ ರು. ಹಣ ಕೊಟ್ಟು ಪರಾರಿಯಾದರು. ನಾನು ಅಲ್ಲಿದ್ದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂದರು ಎಂದು ಮೆಲ್ವಿನ್ ಹೇಳಿದ್ದಾರೆ.

ಮಾಜಿ ಪ್ರಿಯತಮೆ ಸಂಚು: ಆರು ವರ್ಷಗಳ ಹಿಂದೆ ಮೆಲ್ವಿನ್ ಹಾಗೂ ಮಹಾರಾಷ್ಟ್ರದ ಮಹಿಮಾ ವಾಟ್ ಪ್ರೀತಿಸುತ್ತಿದ್ದರು. ಆದರೆ ವೈಯಕ್ತಿಕ ಕಾರಣಕ್ಕೆ ಅವರು ಪ್ರತ್ಯೇಕವಾದರು. ಈ ಪ್ರೇಮ ವಿಫಲ ಬಳಿಕ ದುಬೈಗೆ ಹೋಗಿ ಮೆಲ್ವಿನ್ ನೆಲೆಸಿದರು. ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮಹಿಮಾ, ಹಣಕ್ಕಾಗಿ ಮಾಜಿ ಪ್ರಿಯತಮನ ಅಪಹರಣಕ್ಕೆ ಸಂಚು ರೂಪಿಸಿದ್ದಳು. ಈ ಕೃತ್ಯಕ್ಕೆ ಆಕೆಗೆ ಸ್ನೇಹಿತ ಶಾಕಿಬ್ ಹಾಗೂ ಆತನ ತಂಡ ಸಾಥ್ ಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ಕೂಡಲೇ ರಾತ್ರೋರಾತ್ರಿ ಕೋರಮಂಗಲದಲ್ಲಿದ್ದ ಮನೆಯಿಂದ ಮಹಿಮಾ ಓಡಿ ಹೋಗಿದ್ದಾಳೆ. ವಿಜಯಪುರ ಜಿಲ್ಲೆಯ ಶಾಕಿಬ್ ಸಹ ತಲೆಮರೆಸಿಕೊಂಡಿದ್ದಾನೆ. ಬಂಧಿತರ ಪೈಕಿ ಇಬ್ಬರು ಗ್ಯಾರೇಜ್‌ ನಲ್ಲಿ ಮೆಕ್ಯಾನಿಕ್ ಆಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *