
ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ನೊಂದ ಪತಿಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವಿಕ್ಕಿ ಕೊಂದು ಬಳಿಕ ಡೆತ್ನೋಟ್ ಬರೆದಿಟ್ಟು ತಾನು ಸಾವಿಗೆ ಶರಣಾಗಿದ್ದಾನೆ. ಗುಜರಾತ್ನ ಸೂರತ್ ನಗರದ ದಿಂಡೋಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಸೂರತ್: ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ನೊಂದ ಪತಿಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವಿಕ್ಕಿ ಕೊಂದು ಬಳಿಕ ಡೆತ್ನೋಟ್ ಬರೆದಿಟ್ಟು ತಾನು ಸಾವಿಗೆ ಶರಣಾಗಿದ್ದಾನೆ. ಗುಜರಾತ್ನ ಸೂರತ್ ನಗರದ ದಿಂಡೋಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 41 ವರ್ಷದ ಅಲ್ಪೇಶ್ ಭಾಯ್ ಎಂದು ಗುರುತಿಸಲಾಗಿದೆ. ಅಲ್ಪೇಶ್ ಭಾಯ್ ಅವರು ಸೂರತ್ ನಗರದ ದಿಂಡೋಲಿಯಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದರು. ಅವರ ಪತ್ನಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಅಲ್ಪೇಶ್ ಭಾಯ್ ಪತ್ನಿ ಫಾಲ್ಗುಣಿ ಹಾಗೂ ಆಕೆಯ ಪ್ರಿಯಕರ ನರೇಶ್ ರಾಥೋಡ್ನನ್ನು ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಜೊತೆಗೆ ಕೆಲಸ ಮಾಡುತ್ತಿದ್ದವನ ಜೊತೆ ಅನೈತಿಕ ಸಂಬಂಧ:
ಫಾಲ್ಗುಣಿಯ ಪ್ರಿಯಕರ ನರೇಶ್ ರಾತೋಡ್ ಕೂಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರ ಮಧ್ಯೆ 4 ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಪೊಲೀಸರ ಪ್ರಕಾರ, ಈ ರಾಥೋಡ್ಗೆ ಈ ಮೊದಲೇ ವಿವಾಹವಾಗಿದ್ದು, ಮೊದಲ ಮದುವೆಯಿಂದ ಒಂದು ಮಗುವನ್ನು ಹೊಂದಿದ್ದ. ಆದರೆ ಪತ್ನಿಯ ಮರಣದ ನಂತರ, ಈತ ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆದರೆ ಆ ಸಂಬಂಧವೂ ಕೊನೆಗೊಂಡಿತು. ಇದರ ನಂತರ, ಆತ ಫಾಲ್ಗುಣಿ ಜೊತೆ ಸಂಬಂಧ ಬೆಳೆಸಿದ್ದ.
ಸಂಬಂಧ ಬಿಟ್ಟುಬಿಡುವಂತೆ ಪತ್ನಿಗೆ ಬುದ್ಧಿ ಹೇಳಿದ್ದ ಅಲ್ಪೇಶ್:
ಇತ್ತ ಪತ್ನಿಯ ಅನೈತಿಕ ಸಂಬಂಧದಿಂದಾಗಿ ಅಲ್ಪೇಶ್ ಭಾಯ್ ತೀವ್ರವಾಗಿ ನೊಂದಿದ್ದ. ಪತ್ನಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡಿದ್ದ ಆದರೆ ಹಲವು ಅವಕಾಶಗಳನ್ನು ನೀಡಿದ ನಂತರವೂ ಫಾಲ್ಗುಣಿ, ನರೇಶ್ ರಾಥೋಡ್ ಜೊತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲಿಲ್ಲ. ಫಾಲ್ಗುಣಿ ಅವರ ಮಾವ ಮತ್ತು ಚಿಕ್ಕಮ್ಮನ ಹಸ್ತಕ್ಷೇಪದ ಹೊರತಾಗಿಯೂ, ಅವರು ರಾಥೋಡ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದರು ಎಂದು ಅವರು ಬರೆದಿದ್ದಾರೆ.
ಮಗುವಿನ ಪಿತೃತ್ವದ ಬಗ್ಗೆಯೂ ಅನುಮಾನ:
ಪತ್ನಿಯ ಈ ಸಂಬಂಧ ಖಚಿತವಾದ ನಂತರ ಅಲ್ಪೇಶ್ ಆಕೆ ಹೋದಲೆಲ್ಲಾ ಆಕೆಯನ್ನು ಹಿಂಬಾಲಿಸಲು ತೊಡಗಿದ್ದರು. ಆಕೆಯ ಸಿಮ್ ಕಾರ್ಡ್ ಕೂಡ ಪತಿ ಅಲ್ಪೇಶ್ ಹೆಸರಿನಲ್ಲೇ ಇದ್ದು, ಅವರು ಪತ್ನಿಗೆ ಬರುತ್ತಿದ್ದ ಕರೆ ವಿವರಗಳನ್ನೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ. ಇದು ಆತನನ್ನು ಮತ್ತಷ್ಟು ಖಿನ್ನತೆಗೆ ತಳ್ಳಿತ್ತು. ತಮ್ಮ ಡೆತ್ನೋಟ್ನಲ್ಲಿ ಅವರು ತಮ್ಮ 2ನೇ ಮಗುವಿನ ಪಿತೃತ್ವದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ತಾನು ಊರಲ್ಲಿ ಇಲ್ಲದ ಸಂದರ್ಭದಲ್ಲೆಲ್ಲಾ ನರೇಶ್ ರಾಥೋಡ್ ಮನೆಗೆ ಬರುತ್ತಿದ್ದು, ಹೀಗಾಗಿ ಮಗುವಿನ ಜೈವಿಕ ತಂದೆ ನಾನಲ್ಲ ಎಂಬ ಅನುಮಾನವನ್ನು ಡೆತ್ನೋಟ್ನಲ್ಲಿ ಬರೆದಿದ್ದಾನೆ.
ಅಲ್ಲದೇ ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಫಾಲ್ಗುಣಿ ತನಗೆ ದಿನವೂ ಹೀಗಳೆಯುತ್ತಿದ್ದಳು. ತನ್ನಂತಹ ಸುಂದರಿಯನ್ನು ಮದುವೆಯಾಗಲು ನೀನು ಪುಣ್ಯ ಮಾಡಿರಬೇಕು. ನನ್ನ ಹೊರತಾಗಿ ಬೇರೆ ಯಾರೂ ನಿನ್ನನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಆಕೆ ಹೇಳುತ್ತಿದ್ದಳು. ಹೀಗೆ ಕಳೆದ ಹಲವು ವರ್ಷಗಳಿಂದ ತನಗೆ ಆಕೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಡೆತ್ನೋಟ್ನಲ್ಲಿ ಅಲ್ಪೇಶ್ ಭಾಯ್ ಆರೋಪಿಸಿದ್ದಾನೆ
ಪತ್ನಿಯ ಸಂಬಂಧದ ತಿಳಿದ ನಂತರ ಖಿನ್ನತೆಗೆ ಒಳಗಾದ ಅಲ್ಪೇಶ್, ಮದ್ಯಪಾನ ಹಾಗೂ ಧೂಮಪಾನದತ್ತ ಮುಖ ಮಾಡಿದ್ದಾರೆ. ಕಾಲ ಕಳೆದಂತೆ ಅವರ ಈ ಎರಡು ಚಟಗಳು ಹೆಚ್ಚಾಗಿದ್ದು, ಪತ್ನಿ ಫಾಲ್ಗುಣಿ ಇದಕ್ಕೆ ಆಕ್ಷೇಪಿಸುತ್ತಿದ್ದಳು ಇದನ್ನು ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾನೆ.
ತಮ್ಮ ಡೆತ್ನೋಟ್ನಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ ಅವರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಡೆತ್ನೋಟ್ನಲ್ಲಿ ತನ್ನ ಭವಿಷ್ಯ ನಿಧಿಯ ಮೂಲವನ್ನು ಅವರು ತಮ್ಮ ಕುಟುಂಬದೊಂದಿಗೆ ಹಂಚಿಕೊಂಡಿದ್ದು, ತಮ್ಮ ಬ್ಯಾಂಕ್ ಉಳಿತಾಯದಲ್ಲಿ ಚಿನ್ನದ ಉಂಗುರವನ್ನು ಖರೀದಿಸಲು ಮನವಿ ಮಾಡಿದ್ದಾರೆ.