ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸರ ಕ್ಯಾಪ್ನ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸುತ್ತಿದೆ. ಹೊಸ ವಿನ್ಯಾಸವು ಆಧುನಿಕ ಮತ್ತು ಕಾರ್ಯಾತ್ಮಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಗೃಹ ಸಚಿವರು ಹೊಸ ಮಾದರಿಯ ಕ್ಯಾಪ್ಗಳನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು (ಜೂ.27): ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸರ ಕ್ಯಾಪ್ನ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಪ್ರಸ್ತುತ ಬಳಕೆಯಲ್ಲಿರುವ ಕ್ಯಾಪ್ನ ರೂಪವನ್ನು ಆಧುನಿಕವಾಗಿ ಮತ್ತು ಕಾರ್ಯಾತ್ಮಕವಾಗಿ ಮಾರ್ಪಡಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನೂತನ ಮಾದರಿಯ ಕ್ಯಾಪ್ಗಳನ್ನು ವೀಕ್ಷಿಸಿದ್ದಾರೆ.
ಗೃಹ ಸಚಿವರು ದೇಶದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು ಬಳಸುವ ಕ್ಯಾಪ್ಗಳ ವಿನ್ಯಾಸವನ್ನು ವೀಕ್ಷಿಸಿದ್ದು, ಕರ್ನಾಟಕಕ್ಕೆ ಸೂಕ್ತವಾದ ಆಕರ್ಷಕ ಹಾಗೂ ಕಾರ್ಯನಿರ್ವಹಣೆಗೆ ಪೂರಕವಾದ ಕ್ಯಾಪ್ನ ಮಾದರಿಯನ್ನು ಆಯ್ಕೆ ಮಾಡಿ, ಹೊಸ ಕ್ಯಾಪ್ನ ವಿನ್ಯಾಸವು ಪೊಲೀಸರ ವೃತ್ತಿಪರ ಗೌರವವನ್ನು ಎತ್ತಿ ಹಿಡಿಯುವ ಜೊತೆಗೆ ಆಧುನಿಕತೆಯನ್ನು ಪ್ರತಿಬಿಂಬಿಸಲಿದೆ. ಶೀಘ್ರದಲ್ಲೇ ರಾಜ್ಯದಾದ್ಯಂತ ಪೊಲೀಸರಿಗೆ ಹೊಸ ಕ್ಯಾಪ್ಗಳು ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಇಲಾಖೆಯಿಂದ ಮತ್ತಷ್ಟು ವಿವರಗಳು ಬರಬೇಕಷ್ಟೆ.
ಸೆಪ್ಟೆಂಬರ್ನಲ್ಲಿ ಕ್ರಾಂತಿಯೇ? ರಾಜಣ್ಣ ಹೇಳಿಕೆಗೆ ಗೃಹ ಸಚಿವರಿಂದ ತಿರುಗೇಟು
‘ಸೆಪ್ಟೆಂಬರ್ನಲ್ಲಿ ಕ್ರಾಂತಿ’ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೃಹಸಚಿವರು, ರಾಜಣ್ಣ ಅವರಿಗೆ ಯಾವುದೋ ಮಾಹಿತಿ ಇರಬಹುದು, ಆದರೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರನ್ನೇ ಕೇಳಿ ಎಂದರು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ರಾಜಣ್ಣ ಈ ರೀತಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ ಎಂದರು.
ಇದೇ ವೇಳೆ, ಸಚಿವ ಸತೀಶ್ ಜಾರಕಿಹೊಳಿ ಅವರ ‘ಸಣ್ಣಪುಟ್ಟ ಬದಲಾವಣೆ, ಮಂತ್ರಿಗಳ ಬದಲಾವಣೆ’ ಆಗಬಹುದು ಎಂಬ ಹೇಳಿಕೆಗೆ ಪರಮೇಶ್ವರ್, ‘ನನಗೆ ಯಾವುದೇ ಬದಲಾವಣೆಯ ಮಾಹಿತಿ ಇಲ್ಲ. ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸ್ಪಷ್ಟಪಡಿಸಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಗ್ರಿಪ್ ಕಳೆದುಕೊಂಡಿಲ್ಲ ಎಂದು ಸಿಎಂ ಪರ ಬಲವಾಗಿ ಬ್ಯಾಟಿಂಗ್ ಮಾಡಿದ ಅವರು, ಸಿಎಂ ಆಡಳಿತವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಸಣ್ಣಪುಟ್ಟ ವಿಚಾರಗಳಿರುವುದು ಸಹಜ, ಅವು ಬಗೆಹರಿಯುತ್ತವೆ’ ಎಂದರು.
ನಮ್ಮಲ್ಲಿರೋದು ಒಂದೇ ಪವರ್ ಸೆಂಟರ್:
ರಾಜಣ್ಣ ಅವರ ‘ಮೂರು ಪವರ್ ಸೆಂಟರ್’ ಹೇಳಿಕೆಯನ್ನು ತಳ್ಳಿಹಾಕಿದ ಪರಮೇಶ್ವರ್, ನಮ್ಮಲ್ಲಿ ಒಂದೇ ಪವರ್ ಸೆಂಟರ್ ಇದೆ. ಸಿಎಂ ಮತ್ತು ಪಕ್ಷಾಧ್ಯಕ್ಷರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಕ್ಕಿಂತ ಮೇಲೆ ಹೈಕಮಾಂಡ್ ಇದೆ, ಅದು ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದರು. ಬಿಜೆಪಿಯ ಟೀಕೆಗಳನ್ನು ತಿರಸ್ಕರಿಸಿದ ಅವರು ಸಿಎಂ ವಯಸ್ಸಿನಿಂದ ಸ್ವಲ್ಪ ಸಾಫ್ಟ್ ಆಗಿರಬಹುದು, ಆದರೆ ಆಡಳಿತದಲ್ಲಿ ಯಾವುದೇ ಕೊರತೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.