
35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆ ಸರಳಾ ಭಟ್ ಹತ್ಯೆ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಲಾಗಿದೆ. ಮಂಗಳವಾರ ಮಧ್ಯ ಕಾಶ್ಮೀರದ ಹಲವೆಡೆ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಜೆಕೆಎಲ್ಎಫ್ನ ಮಾಜಿ ನಾಯಕ ಸೇರಿದಂತೆ ಹಲವರ ಮನೆಗಳಲ್ಲಿ ಶೋಧ ನಡೆದಿದೆ.
ಶ್ರೀನಗರ(ಆ.12): 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆ ಸರಳಾ ಭಟ್ ಹತ್ಯೆ ಪ್ರಕರಣದ ತನಿಖೆಗೆ ಮತ್ತೆ ಚಾಲನೆ ದೊರೆತಿದೆ. ಮಂಗಳವಾರ ಮಧ್ಯ ಕಾಶ್ಮೀರದ ಹಲವೆಡೆ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಜೊತೆ ಸಂಬಂಧ ಹೊಂದಿದ್ದ ಶಂಕಿತರ ನಿವಾಸಗಳ ಮೇಲೆ ಈ ದಾಳಿ ನಡೆದಿದೆ. 1990ರ ಏಪ್ರಿಲ್ನಲ್ಲಿ ಶ್ರೀನಗರದ ಸೌರಾದ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್ನಿಂದ ಸರಳಾ ಭಟ್ ನಾಪತ್ತೆಯಾಗಿದ್ದರು. ನಂತರ ಶ್ರೀನಗರದ ಡೌನ್ಟೌನ್ನಲ್ಲಿ ಅವರ ಶವ ಪತ್ತೆಯಾಗಿತ್ತು.
ಇದನ್ನೂ ಓದಿ: ಕೊಪ್ಪಳ ವಾಲ್ಮೀಕಿ ಸಮುದಾಯದ ಯುವಕನ ಹತ್ಯೆ ಪ್ರಕರಣ; NIA CBI ತನಿಖೆಗೆ BJP ಆಗ್ರಹ
ತನಿಖೆಯ ಭಾಗವಾಗಿ ಜೆಕೆಎಲ್ಎಫ್ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ ಅಲಿಯಾಸ್ ಏರ್ ಮಾರ್ಷಲ್ ಸೇರಿದಂತೆ ಹಲವರ ಮನೆಗಳಲ್ಲಿ ಶೋಧ ನಡೆದಿದೆ. ದಾಳಿಯಿಂದ ಪ್ರಮುಖ ಸುಳಿವುಗಳು ಸಿಗುವ ನಿರೀಕ್ಷೆಯಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದಾರೆ.