ಬೆಂಗಳೂರಿನಲ್ಲಿ ಅಪೂರ್ಣ ಪರಿಶಿಷ್ಟ ಜಾತಿ ಸಮೀಕ್ಷೆ: ಸ್ಟಿಕ್ಕರ್ ಹಗರಣ? | Asianet Suvarna News | Incomplete Scheduled Caste Survey In Bengaluru Sticker Scam Rav

ಬೆಂಗಳೂರಿನಲ್ಲಿ ಅಪೂರ್ಣ ಪರಿಶಿಷ್ಟ ಜಾತಿ ಸಮೀಕ್ಷೆ: ಸ್ಟಿಕ್ಕರ್ ಹಗರಣ? | Asianet Suvarna News | Incomplete Scheduled Caste Survey In Bengaluru Sticker Scam Rav



ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ಅಪೂರ್ಣವಾಗಿದ್ದರೂ, ಬಿಬಿಎಂಪಿ ಅಧಿಕಾರಿಗಳು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಬೆಂಗಳೂರು (ಜೂ.28) :  ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ನಡೆದೇ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್‌ ಅಂಟಿಸುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿವೆ.

ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬದ ಸರ್ವೇ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ.91 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಸಮೀಕ್ಷೆ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಪೂರ್ಣಗೊಂಡ ಮನೆಗಳನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರು ಸ್ಟಿಕ್ಕರ್‌ ಅಂಟಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕಳೆದ ಜೂ.23 ರಿಂದ ನಗರದಲ್ಲಿ ಸ್ಟಿಕ್ಕರ್‌ ಅಂಟಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇದೀಗ ಸಮೀಕ್ಷೆ ನಡೆದೇ ಸ್ಟಿಕ್ಕರ್‌ ಅಂಟಿಸುತ್ತಿರುವ ಕುರಿತು ವ್ಯಾಪಕ ದೂರು ಕೇಳಿ ಬರುತ್ತಿವೆ.

ಸಮೀಕ್ಷೆ ನಡೆಸದೇ ಸ್ಟಿಕ್ಕರ್‌ ಅಂಟಿಸಿದ ಸಿಬ್ಬಂದಿ

ಬನಶಂಕರಿಯ ಇಸ್ರೋ ಲೇಔಟ್‌, ಕುಮಾರಸ್ವಾಮಿ ಲೇಔಟ್‌, ವಿಠಲ್‌ ನಗರ ಸೇರಿದಂತೆ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ, ಶುಕ್ರವಾರ ಮನೆ ಮನೆ ಸ್ಟಿಕ್ಕರ್‌ ಅಂಟಿಸುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಮಾಡುತ್ತಿದ್ದಾರೆ.

ಸ್ಟಿಕ್ಕರ್‌ ಅಂಟಿಸುವ ಮುನ್ನ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ ಎಂಬುದನ್ನು ಮನೆಯ ಸದಸ್ಯರಿಂದ ಖಾತರಿ ಪಡಿಸಿಕೊಳ್ಳಬೇಕು. ಆದರೆ, ಆ ಕಾರ್ಯ ಮಾಡದೇ ಬೇಕಾಬಿಟ್ಟಿ ಸ್ಟಿಕ್ಕರ್‌ ಅಂಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ರಾಮ್‌ ಪ್ರಸಾದ್‌ ದೂರಿದ್ದಾರೆ.

ರ್‍ಯಾಂಡಮ್‌ ಸ್ಟಿಕ್ಕರ್‌ ಅಂಟಿಸುವಿಕೆ

ಬಿಬಿಎಂಪಿಯ ಸಿಬ್ಬಂದಿ ಎಲ್ಲಾ ಮನೆಗೂ ಸ್ಟಿಕ್ಕರ್‌ ಅಂಟಿಸುವ ಕೆಲಸ ಮಾಡುತ್ತಿಲ್ಲ. ಪ್ರತಿ ಮೂರು ಅಥವಾ ನಾಲ್ಕು ಮನೆ ಬಳಿಕ ಒಂದು ಮನೆಗೆ ಸ್ಟಿಕ್ಕರ್‌ ಅಂಟಿಸುತ್ತಿದ್ದಾರೆ. ಸ್ಟಿಕ್ಕರ್‌ ಅಂಟಿಸಿದ ಯಾವುದೇ ಮನೆಯಲ್ಲಿಯೂ ಸಮೀಕ್ಷೆ ಕಾರ್ಯ ಮಾಡಿಲ್ಲ. ಸಮೀಕ್ಷೆಯ ಬಗ್ಗೆ ಆ ಮನೆಯ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ದೂರು ಸಲ್ಲಿಸಿದರೂ ಸ್ಪಂದನೆ ಇಲ್ಲ

ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯ ಲೋಪದ ಬಗ್ಗೆ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಸಹಾಯವಾಣಿ ಸಿಬ್ಬಂದಿಯೂ ಸರಿಯಾಗಿ ಮಾಹಿತಿ ಪಡೆಯದೇ ಸಬೂಬು ಹೇಳಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮ್‌ ಪ್ರಸಾದ್‌ ದೂರಿದ್ದಾರೆ



Source link

Leave a Reply

Your email address will not be published. Required fields are marked *