
ಬಳ್ಳಾರಿಯ ತೋರಣಗಲ್ಲಿನಲ್ಲಿ, ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಮಗು ಕಾಣೆಯಾಗಿದೆ ಎಂದು ನಾಟಕವಾಡಿದ ಆರೋಪಿ ತಾಯಿಯನ್ನು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ (ಸೆ.21): ಹೆಣ್ಣು ಮಗು ಹುಟ್ಟಿತು ಅನ್ನೋ ಕಾರಣಕ್ಕೆ ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದ ಆಘಾತಕಾರಿ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ನಡೆದಿದೆ.
ಆರೋಪಿ ತಾಯಿ ಪ್ರಿಯಾಂಕಾ ದೇವಿ ಎಂಬಾಕೆಯನ್ನು ತೋರಣಗಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಿಯಾಂಕಾ ದೇವಿ ಮತ್ತು ಆಕೆಯ ಪತಿ ಸರೋಜ್ ಕುಮಾರ್ ಬಿಹಾರ ಮೂಲದವರಾಗಿದ್ದು, ತೋರಣಗಲ್ಲಿನಲ್ಲಿ ವಾಸವಾಗಿದ್ದರು. ಸರೋಜ್ ಕುಮಾರ್ ಜಿಂದಾಲ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೇ ಮಗುವೂ ಹೆಣ್ಣಾದ ಕಾರಣ, ಪ್ರಿಯಾಂಕಾ ದೇವಿ ತನ್ನ ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ.
ಶಿಶುವನ್ನ ಕಾಲುವೆಗೆ ಎಸೆದು ಕಾಣೆಯಾಗಿದೆ ಎಂದು ಡ್ರಾಮಾ!
ಪ್ರಿಯಾಂಕಾ ದೇವಿ, ಮಗು ಕಾಣೆಯಾಗಿದೆ ಎಂದು ಅಮಾಯಕಳಂತೆ ಕಣ್ಣೀರಿಟ್ಟು ಗೋಳಾಡಿದ್ದಳು. ಆಕೆಯ ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ. ಈ ಪ್ರಕರಣದಲ್ಲಿ ಹೆತ್ತ ತಾಯಿಯೇ ಶಿಶುವನ್ನು ಎತ್ತಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ತಾಯಿಯನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ತಾನೇ ಶಿಶುವನ್ನು ಕಾಲುವೆಗೆ ಎಸೆದಿರುವ ಸತ್ಯ ಬಯಲಿಗೆ ಬಂದಿದೆ.
ಸದ್ಯ ತೋರಣಗಲ್ ಪೊಲೀಸರು ಆರೋಪಿ ಪ್ರಿಯಾಂಕಾ ದೇವಿಯನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಮಗುವಿನ ಕೊಲೆಗೆ ತಾಯಿಯೇ ಕಾರಣವಾದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.