
ಲಿಂಗಾಯತ ಪಂಚಮಸಾಲಿ ಪೀಠದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವುದು ಕಾನೂನುಬಾಹಿರ ಮತ್ತು ಏಕಪಕ್ಷೀಯ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಭಕ್ತರ ತೀರ್ಮಾನವೇ ಅಂತಿಮವಾಗಿದ್ದು, ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆ ಕರೆದು ಮತ್ತೊಂದು ಮಠ ಕಟ್ಟುವ ಬಗ್ಗೆಯೂ ಅವರು ಚಿಂತನೆ ನಡೆಸಿದ್ದಾರೆ.
ಬಾಗಲಕೋಟೆ(ಸೆ.23): ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಉಚ್ಚಾಟನೆ ಏಕಪಕ್ಷೀಯ, ಕಾನೂನು ಬಾಹಿರವಾಗಿದೆ. ಪೀಠಕ್ಕೂ ಟ್ರಸ್ಟ್ಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಉಚ್ಚಾಟನೆಯ ಖಂಡನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಗುರುಗಳನ್ನು ಉಚ್ಚಾಟನೆ ಮಾಡುವ ಅಧಿಕಾರ ಇರುವುದು ಕೇವಲ ಸೃಷ್ಟಿಕರ್ತ ಪರಮಾತ್ಮನಿಗೆ ಬಿಟ್ಟರೆ, ದೇವರ ಸ್ವರೂಪವಾದ ಭಕ್ತರಿಗೆ ಮಾತ್ರ. ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ ಎಂದರು.
ಮತ್ತೊಂದು ಮಠ:
ಮೂರ್ನಾಲ್ಕು ದಿನಗಳಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆಯನ್ನು ಕರೆಯುತ್ತೇನೆ. ಸಭೆಯಲ್ಲಿ ಭಕ್ತರು ಏನು ಹೇಳುತ್ತಾರೆಯೋ ಹಾಗೆ ಮಾಡುತ್ತೇನೆ. ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ ಕಟ್ಟುವ ವಿಚಾರ ಹೊಂದಿದ್ದೇವೆ. ಕೂಡಲಸಂಗಮದಲ್ಲಿ 13 ಗುಂಟೆ, ದಾವಣಗೆರೆಯಲ್ಲಿ ಭಕ್ತರು ಭೂಮಿ ದಾನ ಮಾಡಿದ್ದಾರೆ. ಅಲ್ಲಿ ನಾನು ಆಸ್ತಿಯನ್ನು ಮಾಡಿಲ್ಲ. ಈಗ ಎಐ ಮೂಲಕ ವಿಡಿಯೋ ಮಾಡಿದರೆ ಯಾವ ಭಕ್ತರು ನಂಬುವುದಿಲ್ಲ. ಜನರಿಗೆ ಸತ್ಯ ಏನು ಅಂತ ಗೊತ್ತಿದೆ. ಏನೇ ಬಂದರೂ ಗಟ್ಟಿಯಾಗಿ ಎದುರಿಸುತ್ತೇನೆ ಎಂದು ದೃಢವಾಗಿ ಹೇಳಿದರು.