
<p>ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಟ್ರೋಫಿ ಸಿಕ್ಕಿಲ್ಲ. ಇದೀಗ ಟ್ರೋಫಿ ಬೇಕಿದ್ದರೇ ಒಂದು ಕಂಡೀಷನ್ ಇದೆ ಅಂತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೊಸ ರಾಗ ಎಳೆದಿದ್ದಾರೆ.</p><img><p>ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಪ್ಟೆಂಬರ್ 28ರಂದು ನಡೆದ ಏಷ್ಯಾಕಪ್ ಫೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದೆ.</p><img><p>ಆದರೆ ಪಾಕಿಸ್ತಾನ ಗೃಹ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಆದರೆ ಪಟ್ಟು ಬಿಡದ ಮೊಹ್ಸಿನ್ ನಖ್ವಿ ಭಾರತಕ್ಕೆ ತಾವೇ ಟ್ರೋಫಿ ನೀಡಬೇಕು ಎಂದು ಹಠ ಹಿಡಿದರು.</p><img><p>ಇದೆಲ್ಲದರ ಹೊರತಾಗಿಯೂ ಭಾರತೀಯ ಆಟಗಾರರು ಟ್ರೋಫಿ ಸ್ವೀಕರಿಸಲು ವೇದಿಕೆ ಬಳಿ ಹೋಗಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಮೊಹ್ಸಿನ್ ನಖ್ವಿ, ತಮ್ಮ ಸಿಬ್ಬಂದಿ ಜತೆ ಟ್ರೋಫಿ ಹಾಗೂ ಚಾಂಪಿಯನ್ ತಂಡಕ್ಕೆ ನೀಡಲಾಗುವ ಮೆಡಲ್ ಸಹಿತ ತಾವಿದ್ದ ಹೋಟೆಲ್ಗೆ ಪರಾರಿಯಾದರು.</p><img><p>ಇನ್ನು ಟೀಂ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಮೈದಾನದಲ್ಲಿ ಚಾಂಪಿಯನ್ ಖುಷಿಯನ್ನು ಸಂಭ್ರಮಿಸಿದರು. ಇದರ ಜತೆಗೆ ಭಾರತ ತಂಡವು ಟ್ರೋಫಿ ಇಲ್ಲದೇ ತವರಿಗೆ ವಾಪಾಸ್ಸಾಗಿದೆ.</p><img><p>ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರ ಈ ನಡೆಯು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದನ್ನು ಬಿಸಿಸಿಐ ಕೂಡಾ ಕಟುವಾದ ಶಬ್ದಗಳಿಂದ ಖಂಡಿಸಿದೆ. ಇದೀಗ ಟ್ರೋಫಿ ನೀಡುವ ವಿಚಾರವಾಗಿ ನಖ್ವಿ ಹೊಸದೊಂದು ಕಂಡೀಷನ್ ಇಟ್ಟಿದ್ದಾರೆ.</p><img><p>ತಾವು ಭಾರತ ತಂಡಕ್ಕೆ ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸಲು ರೆಡಿಯಿದ್ದೇವೆ, ಆದರೆ ಅದಕ್ಕೊಂದು ಔಪಚಾರಿಕ ಕಾರ್ಯಕ್ರಮವನ್ನು ಆಯೋಜಿಸಬೇಕು. ಇದರ ಜತೆಗೆ ತಮ್ಮ ಕೈಯಿಂದ ಮಾತ್ರ ಏಷ್ಯಾಕಪ್ ಟ್ರೋಫಿಯನ್ನು ಸೂರ್ಯಕುಮಾರ್ ಪಡೆಗೆ ನೀಡುತ್ತೇನೆ ಎಂದು ಕಂಡೀಷನ್ ಹಾಕಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ.</p><img><p>ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದ್ದು, ಈ ರೀತಿಯ ಔಪಚಾರಿಕ ಕಾರ್ಯಕ್ರಮ ನಡೆಯೋದು ಅನುಮಾನ ಎನಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಭಾರತ ನಖ್ವಿ ಕೈಯಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸುವುದಂತೂ ಕನಸಿನ ಮಾತೇ ಸರಿ.</p>
Source link
ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?