ಒಳ ಮೀಸಲಾತಿ ಜಾರಿ ಕುರಿತು ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಬೆಂಗಳೂರು ನಗರದಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ನ್ಯಾ.ನಾಗಮೋಹನ್ ದಾಸ್ ಅವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಂದಿಬೆಟ್ಟ : ಒಳ ಮೀಸಲಾತಿ ಜಾರಿ ಕುರಿತು ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಬೆಂಗಳೂರು ನಗರದಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ನ್ಯಾ.ನಾಗಮೋಹನ್ ದಾಸ್ ಅವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಕೆ.ಎಚ್.ಮುನಿಯಪ್ಪ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಸಮೀಕ್ಷೆಗಳ ಬಗ್ಗೆ ಹಲವು ಗೊಂದಲಗಳು ಮೂಡುತ್ತಿವೆ. ಸಮೀಕ್ಷೆ ನಡೆಸದೆ ನಡೆಸಿರುವುದಾಗಿ ಹೇಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ನಗರದಲ್ಲಿ ಸಮೀಕ್ಷೆ ತೀರಾ ವಿಳಂಬವಾಗುತ್ತಿದ್ದು, ಇನ್ನೂ 10 ಸಾವಿರ ಮನೆಗಳ ಸಮೀಕ್ಷೆ ಪೂರ್ಣವಾಗಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾ.ನಾಗಮೋಹನ್ದಾಸ್ ಅವರ ನೇತೃತ್ವದಲ್ಲಿ ಸಮೀಕ್ಷೆಗೆ ಸೂಚಿಸಲಾಗಿದೆ. ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ಎಲ್ಲೂ ಸಮಸ್ಯೆಯಾಗದೆ ಸಮೀಕ್ಷೆ ನಡೆದಿದೆ. ಬೆಂಗಳೂರು ನಗರದಲ್ಲಿ ಮಾತ್ರ ಏನಾಗಿದೆ ಎಂಬ ಬಗ್ಗೆ ಅವರನ್ನು ಕರೆದು ಚರ್ಚಿಸಿ ಆದಷ್ಟು ಬೇಗ ಸಮೀಕ್ಷೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಒಳಮೀಸಲು ಸಲುವಾಗಿ ಬೆಂಗಳೂರಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯಗಳ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ
ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ
ಇನ್ನೂ 10 ಸಾವಿರ ಮನೆಗಳ ಸಮೀಕ್ಷೆ ಪೂರ್ಣವಾಗಬೇಕಿದೆ ಎಂದು ಬೇಸರ
ಈ ವೇಳೆ ನ್ಯಾ.ದಾಸ್ ಅವರನ್ನೇ ಕರೆಸಿ ಮಾಹಿತಿ ಪಡೆಯುವ ಕುರಿತು ಸಂಪುಟ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ