Bengaluru Nandini Milk Parlor: ನಿವೃತ್ತ ಡಿಜಿಪಿ ಮಗಳಿಂದ ನಂದಿನಿ ಪಾರ್ಲರ್‌ನಲ್ಲಿ ಗಲಾಟೆ! | Bengaluru Retired Dgp Om Prakash Daughter Krithika Bobbery Nandini Parlor Sat

Bengaluru Nandini Milk Parlor: ನಿವೃತ್ತ ಡಿಜಿಪಿ ಮಗಳಿಂದ ನಂದಿನಿ ಪಾರ್ಲರ್‌ನಲ್ಲಿ ಗಲಾಟೆ! | Bengaluru Retired Dgp Om Prakash Daughter Krithika Bobbery Nandini Parlor Sat



ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಮಗಳು ಕೃತಿಕಾ, ಬೆಂಗಳೂರಿನ ನಂದಿನಿ ಪಾರ್ಲರ್‌ನಲ್ಲಿ ಗಲಾಟೆ ಮಾಡಿ, ವಸ್ತುಗಳನ್ನು ಹಾನಿಗೊಳಿಸಿ, ಮಾಲೀಕನಿಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜು. 03): ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ) ಓಂ ಪ್ರಕಾಶ್ ಅವರ ಮಗಳು ಕೃತಿಕಾ ಅವರು ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕಳೆದ ಸೋಮವಾರ ಸಂಜೆ, ಬೆಂಗಳೂರು ನಿವಾಸದ ಪಕ್ಕದಲ್ಲಿರುವ ‘ನಂದಿನಿ ಪಾರ್ಲರ್’ಗೆ ಭೇಟಿ ನೀಡಿದ ಕೃತಿಕಾ, ಆಕಸ್ಮಿಕವಾಗಿ ಗಲಾಟೆ ಸೃಷ್ಟಿಸಿದ್ದು, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ, ಮಾಲೀಕನಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯ ಪೊಲೀಸ್ ಮಾಹಿತಿ ಪ್ರಕಾರ, ಸಂಜೆ ಸಮಯದಲ್ಲಿ ಕೃತಿಕಾ ಅವರು ಪಾರ್ಲರ್ ಎದುರು ನಿಂತು ಅಲ್ಲಿನ ಮಾಲೀಕನನ್ನು ದಿಟ್ಟಿಸಿಕೊಂಡು ನೋಡಿದ್ದಾರೆ. ಆಗ ನಂದಿನಿ ಪಾರ್ಲರ್ ಮಾಲೀಕ’ಯಾಕೆ ಮೇಡಂ, ಏನಾಯ್ತು?’ ಎಂದು ಕೇಳಿದ್ದಾರೆ. ಇಷ್ಟಕ್ಕೆ ಕೋಪ ಮಾಡಿಕೊಂಡ ಕೃತಿಕಾ, ಅಂಗಡಿಯೊಳಗಿನ ಬಾಟಲ್‌ಗಳು ಹಾಗೂ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಅಂಗಡಿ ಮಾಲೀಕ ಸ್ವಾಮಿಗೆ ಶರೀರದಲ್ಲಿ ಗಾಯವಾಗುವಷ್ಟು ಹಲ್ಲೆ ಮಾಡಿದ್ದಾರೆ. ಇದರಿಂದ ಘಟನೆಗೆ ಭಯಗೊಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ಬಂದಾಗ, ಕೃತಿಕಾ ಯಾವುದೇ ಘಟನೆಯೇ ನಡೆದಿಲ್ಲ ಎಂಬಂತೆ ಮನೆಗೆ ತೆರಳಿದ್ದಾರೆ.

ನಂದಿನಿ ಪಾರ್ಲರ್ ಮಾಲೀಕ ಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕೃತಿಕಾ ಅವರು ಹಲವು ದಿನಗಳಿಂದ ನಮ್ಮ ಪಾರ್ಲರ್‌ಗೆ ಬರುತ್ತಿದ್ದರು. ಇಲ್ಲಿಗೆ ಬಂದ ನಂತರ ತಮ್ಮ ಪಾಡಿಗೆ ಟೀ ಕುಡಿದು ಹೋಗುತ್ತಿದ್ದರು. ಆದರೆ, ಅವರು ಇತ್ತೀಚೆಗೆ ಕೊಲೆಯಾದ ಡಿಜಿಪಿ ಓಂ ಪ್ರಕಾಶ್ ಅವರ ಮಗಳು ಎಂದು ನನಗೆ ಗೊತ್ತಿರಲಿಲ್ಲ. ಅವರು ಮಾಡಿದ ಗಲಾಟೆಯಿಂದಾಗಿ ಸುಮಾರು ₹7,000-₹8,000 ನಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಘಟನೆಯ ಬಳಿಕ ಅವರು ಪೊಲೀಸರು ಕೊಟ್ಟ ಸಲಹೆಯಂತೆ ಅಂಗಡಿ ಮುಚ್ಚಿ ನೇರವಾಗಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಕೃತಿಕಾ ಅವರು ಮಾನಸಿಕ ಒತ್ತಡದಲ್ಲಿರುವ ವ್ಯಕ್ತಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ನಿವೃತ್ತ ಡಿಜಿ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ನಂತರ ಕುಟುಂಬದಲ್ಲಿ ಬದಲಾವಣೆಗಳಾಗಿವೆ. ಅಪ್ಪನನ್ನೇ ಕೊಲೆ ಮಾಡಿದ ಆರೋಪದಲ್ಲಿ ಅಮ್ಮ ಜೈಲು ಸೇರಿದ್ದಾಳೆ. ಇನ್ನಿ ಅವರ ಸಹೋದರ ಮತ್ತು ಅತ್ತಿಗೆ ಸೇರಿದಂತೆ ಉಳಿದ ಕುಟುಂಬ ಸದಸ್ಯರು ಬೇರೆ ಕಡೆಗೆ ಸ್ಥಳಾಂತರವಾಗಿದ್ದಾರಂತೆ. ಇದೀಗ ಕೃತಿಕಾ ಈ ನಡುವೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಕುಟುಂಬದಲ್ಲಿ ನಡೆದ ಘಟನೆಗಳು ಆಕೆಯ ಮಾನಸಿಕ ಸ್ಥಿತಿಗೆ ಪರಿಣಾಮ ಬೀರಿರುವ ಸಾಧ್ಯತೆ ವ್ಯಕ್ತವಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮುಂದಿನ ಕ್ರಮಕ್ಕಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು, ಅಂಗಡಿ ಮಾಲೀಕರು ಮತ್ತು ಪೊಲೀಸರು ಈ ಘಟನೆ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *