
‘ಕಾಂತಾರ’ ಚಿತ್ರದ ಕುರಿತು ದೈವ ನರ್ತಕ ದಯಾನಂದ ಕತ್ತಲ್ ಸರ್ ನೀಡಿದ ಹೇಳಿಕೆಯು ವಿವಾದ ಸೃಷ್ಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಶೋಧಕಿ ಡಾ. ಲಕ್ಷ್ಮಿ ಜಿ. ಪ್ರಸಾದ್, ದೈವ ನರ್ತಕರ ಹೇಳಿಕೆಗಳು ದೈವದ ನುಡಿಯಲ್ಲ, ಇಂತಹ ಹೇಳಿಕೆಗಳು ದೈವಾರಾಧನೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಬಹುದೆಂದು ಎಂದಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ ₹509.25 ಕೋಟಿ ಗಳಿಕೆ ಸಾಧಿಸಿ ಹೊಸ ದಾಖಲೆ ನಿರ್ಮಿಸಿದೆ. ಇದರ ಬೆನ್ನಲ್ಲೇ ಕರಾವಳಿಯಲ್ಲಿ ದೈವಾರಾಧನೆ ಕುರಿತು ತೀವ್ರ ವಿವಾದ ಭುಗಿಲೆದ್ದಿದೆ. ದೈವದ ನುಡಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದ್ದು, ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎಂಬ ಹೊಸ ಚರ್ಚೆಗಳು ಸಂಚಲನ ಮೂಡಿಸಿವೆ.
‘ಕಾಂತಾರ’ ಸಿನಿಮಾ ಬಿಡುಗಡೆಯಾದ ಬಳಿಕ ಹಲವು ವಿವಾದಗಳಲ್ಲಿ ಇತ್ತೀಚಿನದು, ಪೆರಾರದಲ್ಲಿ ಪಿಲಿಚಂಡಿ ದೈವ ನರ್ತಕರಾದ ದಯಾನಂದ ಕತ್ತಲ್ ಸರ್ ನೀಡಿದ ಹೇಳಿಕೆ ಕುರಿತಾಗಿದೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ತುಳು ಸಂಶೋಧಕಿ ಡಾ. ಲಕ್ಷ್ಮಿ ಜಿ. ಪ್ರಸಾದ್, ದೈವ ನಂಬಿಕೆಯ ವಿಶ್ವಾಸಾರ್ಹತೆಯ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕಾಂತಾರ ಚಿತ್ರದಲ್ಲಿ ದೈವಗಳಿಗೆ ಯಾವುದೇ ರೀತಿಯ ಅವಮಾನವಾಗಿಲ್ಲ: ಡಾ. ಲಕ್ಷ್ಮಿ ಜಿ. ಪ್ರಸಾದ್
ದೈವಗಳು ಮತ್ತುದೈವರಾಧನೆ ಬಗ್ಗೆ ಸಂಶೋಧಕಿಯಾಗರುವ ಡಾ. ಲಕ್ಷ್ಮಿ ಜಿ. ಪ್ರಸಾದ್ ಅವರು ಕಾಂತಾರ ಸಿನಿಮಾದಲ್ಲಿ ಎಲ್ಲಿಯೂ ದೈವಗಳ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವಂತಹ ದೃಶ್ಯಗಳು ಇಲ್ಲ. ಚಿತ್ರವು ದೈವದ ಮಹತ್ವವನ್ನು ಕಡಿಮೆ ಮಾಡದೆ, ಕಥೆಯ ಅವಿಭಾಜ್ಯ ಅಂಶವಾಗಿ ಅದನ್ನು ಪ್ರಸ್ತುತಪಡಿಸಿದೆ ಎಂದು ಹೇಳಿದ್ದಾರೆ. “ರಿಷಬ್ ಶೆಟ್ಟಿ ಮುನ್ನಲೆಯಲ್ಲಿಯೇ ಅನೇಕರು ದೈವದ ಕುರಿತು ಚಿತ್ರಗಳನ್ನು ನಿರ್ಮಿಸಿದ್ದಾರೆ. ಆಗ ಯಾವುದೇ ರೀತಿಯ ವಿರೋಧ ಧ್ವನಿಗಳು ಕೇಳಿಬಂದಿಲ್ಲ. ಆದರೆ ಈಗ ಯಾಕೆ ಕೆಲವರು ವೈಯಕ್ತಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಪ್ರಶ್ನಾರ್ಹ ಎಂದು ಹೇಳಿದ್ದಾರೆ.
ದೈವನರ್ತಕರ ವೈಯಕ್ತಿಕ ಹೇಳಿಕೆ, ವಿಶ್ವಾಸಾರ್ಹತೆಗೆ ಧಕ್ಕೆ?
ಪೆರಾರದಲ್ಲಿ ಪಿಲಿಚಂಡಿ ದೈವ ನರ್ತಕರಾಗಿ ದಯಾನಂದ ಕತ್ತಲ್ ಸರ್ ಭಾಗವಹಿಸಿದ್ದರು. ಆದರೆ ಅವರು ನೀಡಿದ ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯವಾಗಿದ್ದು, ದೈವದ ನುಡಿಗಳಲ್ಲ ಎಂದು ಡಾ. ಲಕ್ಷ್ಮಿ ತಿಳಿಸಿದ್ದಾರೆ. “ದೈವನರ್ತಕರಾಗಿ ನೀಡಿದ ವೈಯಕ್ತಿಕ ಹೇಳಿಕೆಗಳು ಜನರ ದೈವ ನಂಬಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತದ್ದಾಗಿದೆ. ರಿಷಬ್ ಶೆಟ್ಟಿ ತಂಡ ಈ ವಿಚಾರವನ್ನು ನೇರ ವೈಯಕ್ತಿಕ ದಾಳಿ ಎಂದು ಅಲ್ಲ, ಪ್ರಶ್ನೆಯ ರೂಪದಲ್ಲಿ ಬೇರೆ ವೇದಿಕೆಗಳಲ್ಲಿ ಇರಬೇಕು, ಎಂದು ಅವರು ಸಲಹೆ ನೀಡಿದ್ದಾರೆ.
ದೈವ ಎಂದೂ ಭಕ್ತರನ್ನು ಶಿಕ್ಷಿಸುವುದಿಲ್ಲ: ಡಾ. ಲಕ್ಷ್ಮಿಯ ಸ್ಪಷ್ಟನೆ
ದೈವಗಳು ಯಾರನ್ನೂ “ನಾಶಮಾಡುತ್ತೇನೆ”, “ಆಸ್ಪತ್ರೆಗೆ ಸೇರಿಸುತ್ತೇನೆ” ಎಂಬ ರೀತಿಯ ಮಾತುಗಳನ್ನು ಯಾವಾಗಲೂ ಹೇಳುವುದಿಲ್ಲ. ಪೆರಾರದಲ್ಲಿ ಪಿಲಿಚಂಡಿ ದೈವ ಹೀಗೆ ಮಾತಾನಾಡಿದಂತೆಯೂ ಇಲ್ಲ. “ಕಾಂತಾರ” ಸಿನಿಮಾದಲ್ಲಿ ಕೋರ್ಟ್ ಮೆಟ್ಟಿಲಲ್ಲಿ ನೋಡುವುದಾಗಿ ಹೇಳಿರುವುದು ಕಥೆಯ ಭಾಗ. ಅದು ದೈವದ ನುಡಿ ಅಲ್ಲ. ದೈವಗಳು ದುಡ್ಡಿನ ಬಗ್ಗೆ ಎಂದಿಗೂ ಮಾತಾನಾಡುವುದಿಲ್ಲ. ಯಾರು ಹಣ ಗಳಿಸಿದರೂ ಶಿಕ್ಷೆ ನೀಡುತ್ತೇನೆ ಎಂಬ ಮಾತುಗಳು ದೈವ ಸಂಸ್ಕೃತಿಯಲ್ಲಿ ಇಲ್ಲ. ದೈವ ನರ್ತಕರೇ ದುಡ್ಡು ಸ್ವೀಕರಿಸದವರಾ? ದೈವದ ಬಗ್ಗೆ ತಪ್ಪಾಗಿ ಅಥವಾ ವೈಯಕ್ತಿಕವಾಗಿ ಮಾತನಾಡುವುದರಿಂದ ದೈವ ನಂಬಿಕೆ ಮತ್ತು ಸಂಸ್ಕೃತಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ದಯಾನಂದ ಕತ್ತಲ್ ಸರ್ ಹಿಂದಿನ ದಿನಗಳಲ್ಲಿ ನಾಟಕ ರಂಗಭೂಮಿಯಲ್ಲಿ ಕೊರಗಜ್ಜ ವೇಷ ಧರಿಸಿ ಹಲವು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು ಎಂಬುದನ್ನು ಡಾ. ಲಕ್ಷ್ಮಿ ಸ್ಮರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವೈಯಕ್ತಿಕ ಹೇಳಿಕೆಗಳನ್ನು ದೈವದ ನುಡಿಯಂತೆ ಪರಿಗಣಿಸುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂತಾರ ಸಿನಿಮಾ, ತುಳು ನಾಡಿನ ದೈವ ಭಕ್ತಿಯ ಪರಂಪರೆ, ಭೂತಕೋಲಾ ಸಂಸ್ಕೃತಿ ಹಾಗೂ ಪಾರಂಪರಿಕ ನಂಬಿಕೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿದ ಚಿತ್ರವಾಗಿದೆ. ಈಗ ಉಂಟಾಗಿರುವ ಈ ವಿವಾದವು ದೈವನರ್ತಕರ ವೈಯಕ್ತಿಕ ಹೇಳಿಕೆ ಮತ್ತು ದೈವದ ನುಡಿಯ ನಡುವಿನ ಗಡಿಯನ್ನು ಪುನಃ ಚರ್ಚೆಗೆ ತಂದಿದೆ. ಡಾ. ಲಕ್ಷ್ಮಿ ಜಿ. ಪ್ರಸಾದ್ ಅವರ ಅಭಿಪ್ರಾಯಗಳು ಈ ವಿವಾದಕ್ಕೆ ಹೊಸ ಅರ್ಥ ನೀಡುತ್ತಿದ್ದು, ದೈವ ನಂಬಿಕೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಸ್ಪಷ್ಟಪಡಿಸುತ್ತವೆ.