ಚಿತ್ರದುರ್ಗ, (ಅಕ್ಟೋಬರ್ 21): ಪುಟ್ಟ ಬಾಲಕನ ಮೇಲೆ ಅಮಾನುಷ ಹಲ್ಲೆ. ಕಾಲಲ್ಲಿ ಒಡ್ಡು ತುಳಿದು ರಾಕ್ಷಸೀ ಕೃತ್ಯ. ಸಂಸ್ಕೃತ ಶಾಲೆಯಲ್ಲಿ ಕ್ರೌರ್ಯ ಮೆರೆದ ರಕ್ಕಸ ಶಿಕ್ಷಕ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ. ಹೌದು, ಈ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇಗುಲ ರಾಜ್ಯ ಮಾತ್ರ ದೇಶಾದ್ಯಂತ ಭಕ್ತರನ್ನು ಹೊಂದಿದೆ. ಜಾತ್ರೆ, ರಥೋತ್ಸವ ಸಂದರ್ಭದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ. ಇದೇ ದೇಗುಲ ಸೇರಿದ ಸಂಸ್ಕೃತ, ವೇದ, ವೀರಶೈವಾಗಮ ಶಾಲೆಯಲ್ಲಿದೆ. ಕಳೆದ 8ವರ್ಷಗಳಿಂದ ದೇಗುಲ ಹೊಂದಿಕೊಂಡಂತಿರುವ ಹಿಂಭಾಗದ ಕಟ್ಟಡದಲ್ಲೇ ಸಂಸ್ಕೃತ ಶಾಲೆಯಿದೆ. ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಮೂವತ್ತು ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಆದರೆ, ಸಂಸ್ಕೃತ ಶಾಲೆಯ ಶಿಕ್ಷಕನಾಗಿ ಸೇರಿಕೊಂಡಿರುವ ಗೌರಸಮುದ್ರ ಗ್ರಾಮದ ವೀರೇಶ್ ಹಿರೇಮಠ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದಿದ್ದಾನೆ. 9ವರ್ಷದ ವಿದ್ಯಾರ್ಥಿಗೆ ಅಜ್ಜಿಗೇಕೆ ಕರೆ ಮಾಡಿದೆ ಎಂದು ಪ್ರಶ್ನಿಸಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಶಿಕ್ಷಕ ವಿರೇಶನ ರಾಕ್ಷಸ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.