
ಇತ್ತೀಚಿನ ದಿನಗಳಲ್ಲಿ ಪತಿ ಹತ್ಯೆ ಪ್ರಕರಣ ಹೆಚ್ಚಾಗಿದೆ. ಇಂದೋರ್ ನಂತ್ರ ಈಗ ತೆಲಂಗಾಣ ಸರದಿ. ಮದುವೆಯಾದ ಒಂದೇ ತಿಂಗಳಿಗೆ ಗಂಡನನ್ನು ಯಮನ ಪಾದಕ್ಕೆ ಸೇರಿಸಿದ್ದಾಳೆ ಪತ್ನಿ.
ಮದುವೆ (Marriage) ಆಗೋಕೆ ಹುಡುಗಿಯರು ಸಿಗ್ತಿಲ್ಲ ಅಂತ ಈ ಹಿಂದೆ ಬೇಸರಪಟ್ಟುಕೊಳ್ತಿದ್ದ ಹುಡುಗ್ರು ಈಗ ಮಾತು ಬದಲಿಸಿದ್ದಾರೆ. ಮದುವೆ ಆದ್ಮೇಲೆ ಜೀವಂತ ಇರೋದೇ ಡೌಟು. ಮದುವೆಗಿಂತ ಒಂಟಿಯಾಗಿರೋದೇ ಬೆಸ್ಟ್ ಅಂತಿದ್ದಾರೆ. ಇದಕ್ಕೆ ಕಾರಣ ಒಂದಾದ್ಮೇಲೆ ಒಂದರಂತೆ ನಡೆಯುತ್ತಿರೋ ಪತಿ ಹತ್ಯೆ ಕೇಸ್. ಇಂದೋರ್ ಹನಿಮೂನ್ ಪ್ರಕರಣ (Indore Honeymoon Case)ದ ಬೆನ್ನಲ್ಲೆ ಈಗ ಮತ್ತೊಂದು ಕ್ರೈಂ ಕೇಸ್ ಹೊರಗೆ ಬಿದ್ದಿದೆ. ಮದುವೆಯಾಗಿ ಒಂದೇ ತಿಂಗಳಿಗೆ ಗಂಡನ ಕಥೆ ಮುಗಿಸಿದ್ದಾಳೆ ಪತ್ನಿ. ಅವಳಿಗೆ ಸಾಥ್ ನೀಡಿದ್ದು ಬೇರೆ ಯಾರೂ ಅಲ್ಲ, ಅವಳ ಅಮ್ಮ ಮತ್ತೆ ಪ್ರೇಮಿ.
ಘಟನೆ ನಡೆದಿರೋದು ತೆಲಂಗಾಣ (Telangana)ದ ಕರ್ನೂಲ್ ನಲ್ಲಿ. ಈ ಕಥೆ ಶುರುವಾಗೋದು ಫೆಬ್ರವರಿಯಿಂದ. ಫೆಬ್ರವರಿ 13ರಂದು ಕಾನ್ಪುರದ ಹುಡುಗಿ ಐಶ್ವರ್ಯ ಜೊತೆ ತೇಜೇಶ್ವರ್ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ನಾಲ್ಕು ದಿನ ಮೊದ್ಲೇ ಐಶ್ವರ್ಯ, ಮನೆಯಿಂದ ಓಡಿ ಹೋಗಿದ್ಲು. ಅವಳಿಗೆ ಮದುವೆ ಇಷ್ಟವಿಲ್ಲ, ಪ್ರೇಮಿ ಜೊತೆ ಓಡಿ ಹೋಗಿದ್ದಾಳೆ ಅಂತ ಗುಲ್ಲಾಗಿತ್ತು. ಆದ್ರೆ ಫೆಬ್ರವರಿ 16ಕ್ಕೆ ವಾಪಸ್ ಬಂದ ಐಶ್ವರ್ಯ, ವರದಕ್ಷಿಣೆ ಹಣ ನೀಡೋ ವಿಷ್ಯದಲ್ಲಿ ನನ್ನ ಮತ್ತೆ ಅಮ್ಮನ ಮಧ್ಯೆ ಭಿನ್ನಾಭಿಪ್ರಾಯವಿತ್ತು ಅಂತ ಕಥೆ ಹೇಳಿದ್ಲು. ಅಷ್ಟೇ ಅಲ್ಲ ಮತ್ತೆ ತೇಜೇಶ್ವರ್ ಮದುವೆಗೆ ದುಂಬಾಲು ಬಿದ್ದಿದ್ಲು. ಈಗ್ಲೂ ನಾನು ನಿನ್ನನ್ನು ಮದುವೆ ಆಗೋಕೆ ಸಿದ್ಧ, ನಾನು ಅಮಾಯಕಿ ಅಂತ ಅವನ ಮುಂದೆ ನಾಟಕ ಆಡಿದ್ಲು.
ತೇಜೇಶ್ವರ್ ಅವಳ ಹಾಗೂ ಅವಳ ಅಮ್ಮನ ಮಾತನ್ನು ಸಂಪೂರ್ಣ ನಂಬಿದ್ದ. ಮೇ. 18ರಂದು ಮನೆಯವರೆಲ್ಲ ಒಪ್ಪಿ, ತೇಜೇಶ್ವರ್ ಹಾಗೂ ಐಶ್ವರ್ಯ ಮದುವೆ ಮಾಡಿದ್ರು. ಮದುವೆ ಆಗ್ತಿದ್ದಂತೆ ಐಶ್ವರ್ಯ ವರಸೆ ಬದಲಾಗಿತ್ತು. ಬಹುತೇಕ ಟೈಂ ಫೋನ್ ನಲ್ಲಿರ್ತಿದ್ದ ಪತ್ನಿ ಮೇಲೆ ತೇಜೇಶ್ವರ್ ಗೆ ಅನುಮಾನ ಬಂದಿತ್ತು. ಜೂನ್ 17ರಂದು ತೇಜೇಶ್ವರ್ ಮನೆಯಲ್ಲಿ ಕಾಣಿಸಲಿಲ್ಲ. ಅಚಾನಕ್ ಕಾಣೆಯಾಗಿದ್ದ ಅವನನ್ನು ಹುಡುಕಿ ಕೊಡುವಂತೆ ತೇಜೇಶ್ವರ್ ಸಹೋದರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ.
ಅಮ್ಮ – ಮಗಳಿಗೆ ಒಂದೇ ಪ್ರೇಮಿ ! : ವಿಚಾರಣೆ ವೇಳೆ ಐಶ್ವರ್ಯ ಹಾಗೂ ಅವಳ ಅಮ್ಮ ಬಾಯ್ಬಿಟ್ಟಿದ್ದಾರೆ. ತೇಜೇಶ್ವರ್ ಕೊಲೆ ಮಾಡಿಸಿರೋದನ್ನು ಒಪ್ಪಿಕೊಂಡಿದ್ದಾರೆ. ಬ್ಯಾಂಕ್ ಉದ್ಯೋಗಿ ಜೊತೆ ಐಶ್ವರ್ಯ ಅಮ್ಮನ ಅಫೇರ್ ಇತ್ತು. ಅನೇಕ ವರ್ಷಗಳಿಂದ ಈ ಸಂಬಂಧ ಮುಂದುವರೆದಿತ್ತು. ಅಮ್ಮನ ಜೊತೆ ಐಶ್ವರ್ಯ ಕೂಡ ಈಗ ಅದೇ ಬ್ಯಾಂಕ್ ಉದ್ಯೋಗಿ ಪ್ರೀತಿಯಲ್ಲಿದ್ಲು. ಐಶ್ವರ್ಯ, ಮದುವೆಯಾದ್ಮೇಲೆ ಸುಮಾರು 2 ಸಾವಿರಕ್ಕೂ ಹೆಚ್ಚು ಬಾರಿ ತನ್ನ ಪ್ರೇಮಿ ಜೊತೆ ಮಾತನಾಡಿದ್ದಾಳೆ. ಐಶ್ವರ್ಯ ಪ್ರೇಮಿ, ಸುಫಾರಿ ಕಿಲ್ಲರ್ ಸಹಾಯ ಪಡೆದು, ಜಮೀನು ತೋರಿಸೋ ನೆಪದಲ್ಲ ತೇಜೇಶ್ವರ್ ನನ್ನು ಮನೆಯಿಂದ ಕರೆದುಕೊಂಡು ಹೋಗಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ನಂತ್ರ ರಸ್ತೆ ಬದಿಯಲ್ಲಿ ಶವ ಎಸೆದು ಹೋಗಿದ್ದಾರೆ. ಬ್ಯಾಂಕ್ ಸಿಬ್ಬಂದಿ ತನ್ನ ಕಾರು ಡ್ರೈವರ್ ನನ್ನ ಕೂಡ ಅಲ್ಲಿಗೆ ಕಳ್ಸಿದ್ದ.
ಆಸ್ತಿ ಹಾಗೂ ಪ್ರೀತಿ ವಿಷ್ಯಕ್ಕೆ ತೇಜೇಶ್ವರ್ ಅಡ್ಡಿಯಾಗಿದ್ದೇ ಹತ್ಯೆಗೆ ಕಾರಣ ಎನ್ನಲಾಗ್ತಿದೆ. ಪ್ರೇಮಿ ಜೊತೆ ಮಾತನಾಡೋಕೆ ತೇಜೇಶ್ವರ್ ವಿರೋಧಿಸಿರಬೇಕು. ಐಶ್ವರ್ಯ ಹಾಗೂ ಅವಳ ಅಮ್ಮನನ್ನು ಬಂಧಿಸಲಾಗಿದೆ. ಆದ್ರೆ ಬ್ಯಾಂಕ್ ಸಿಬ್ಬಂದಿ, ಸುಫಾರಿ ಕಿಲ್ಲರ್ಸ್ ಕಾಣೆಯಾಗಿದ್ದು, ಪತ್ತೆ ಕಾರ್ಯ ಶುರುವಾಗಿದೆ. ವಿಚಾರಣೆ ವೇಳೆ ಇನ್ನಷ್ಟು ಸತ್ಯ ಹೊರಬರಲಿದೆ.