ಬೆಂಗಳೂರು, ನವೆಂಬರ್ 1: ಕಾರ್ತೀಕ ಮಾಸವು ದೀಪಗಳನ್ನು ಹಚ್ಚಿ ದೇವಿಯ ಕೃಪೆಗೆ ಪಾತ್ರರಾಗಲು ಅತ್ಯಂತ ಮಂಗಳಕರವಾದ ಸಮಯವಾಗಿದೆ. ಈ ಮಾಸದಲ್ಲಿ ತುಪ್ಪದ ದೀಪ, ಸಾಸಿವೆ ಎಣ್ಣೆ ದೀಪ, ಎಳ್ಳಿನ ದೀಪ, ಕೊಬ್ಬರಿ ದೀಪ, ಕುಂಬಳ ದೀಪ ಹೀಗೆ ನಾನಾ ರೀತಿಯ ದೀಪಗಳು ಬೆಳಗುತ್ತವೆ. ಆದರೆ, ಅತಿ ಶೀಘ್ರವಾಗಿ ಆಸೆ-ಆಕಾಂಕ್ಷೆಗಳನ್ನು ಪ್ರದರ್ಶಿಸಿ, ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶೇಷ ದೀಪವೆಂದರೆ ಅದು ನೆಲ್ಲಿಕಾಯಿ ದೀಪ ಅಥವಾ ನೆಲ್ಲಿ ದೀಪ.
ಹಿಂದೂ ಧರ್ಮದಲ್ಲಿ ನೆಲ್ಲಿಕಾಯಿಗೆ ಅಪಾರ ಮಹತ್ವವಿದೆ. ಶಂಕರಾಚಾರ್ಯರು ಭಿಕ್ಷೆ ಬೇಡಿದಾಗ ಪಡೆದ ನೆಲ್ಲಿಕಾಯಿಯಿಂದಲೇ ಕನಕಧಾರಾ ಸ್ತೋತ್ರದ ಮೂಲಕ ಬಂಗಾರದ ನೆಲ್ಲಿಕಾಯಿಗಳು ಪ್ರಾಪ್ತವಾದ ಇತಿಹಾಸವಿದೆ. ಕಾರ್ತೀಕ ಮಾಸದಲ್ಲಿ ನೆಲ್ಲಿ ದೀಪವನ್ನು ಹಚ್ಚುವುದರಿಂದ ಆಧ್ಯಾತ್ಮಿಕ ಪ್ರಗತಿ, ಮಾನಸಿಕ ನೆಮ್ಮದಿ, ಶ್ರೇಯಸ್ಸು, ಕೀರ್ತಿ, ಪ್ರತಿಷ್ಠೆ, ಸಾಲ ತೀರಿಸುವಿಕೆ ಮತ್ತು ಆರೋಗ್ಯ ಸುಧಾರಣೆ ಸಾಧ್ಯ. ಈ ದೀಪವನ್ನು ಗೋದೂಳಿ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತದಲ್ಲಿ ಮನೆಯ ದೇವರ ಮನೆಯಲ್ಲಿ ಇಷ್ಟದೇವರು, ಕುಲದೇವರಿಗೆ ಅರ್ಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.