ಬೆಂಗಳೂರು, (ನವೆಂಬರ್ 10): ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರು ಆಗಿರುವ ಹೆಚ್.ಡಿ. ಕುಮಾರಸ್ವಾಮಿ (ಎಚ್.ಡಿ.ಕುಮಾರಸ್ವಾಮಿ) ಅವರ ಪಕ್ಷದ ಪ್ರಮುಖ ಸಮಿತಿ (ಕೋರ್ ಸಮಿತಿ) ಯನ್ನು ಪುನಾರಚನೆ ಮಾಡಿದ್ದು, ನಿರೀಕ್ಷೆಯಂತೆ ಕೋರ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡ (ಜಿ.ಟಿ.ದೇವೇಗೌಡ) ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಇವರ ಸ್ಥಾನಕ್ಕೆ ಚಿಂತಾಮಣಿಯ ಮಾಜಿ ಶಾಸಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ನೂತನ ಅಧ್ಯಕ್ಷ ನೇಮಕ ಸಮಿತಿ ಮಾಡಿದ್ದಾರೆ. ಇನ್ನು ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕ ನೇಮಕ ಮಾಡಲಾಗಿದೆ.
ಕೋರ್ ಸಮಿತಿ ಸದಸ್ಯರು
ಮಾಜಿ ಶಾಸಕ ರಾಜವೆಂಕಟಪ್ಪ ನಾಯಕ ದೊರೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಆಲ್ಕೋಡ ಹನುಮಂತಪ್ಪ, ಹೆಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಕೆ.ಎಂ. ತಿಮ್ಮರಾಯಪ್ಪ, ಎ. ಮಂಜುನಾಥ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೆ.ಜಿ. ಪ್ರಸನ್ನಕುಮಾರ್, ಶಾಸಕರಾದ ಕರೆಮ್ಮ ನಾಯಕ, ನೇಮಿರಾಜ ನಾಯಕ, ಸಮೃದ್ಧಿ ಮಂಜುನಾಥ್, ಶರಣುಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಹಿರಿಯ ನಾಯಕ ಸಿ.ವಿ. ಚಂದ್ರಶೇಖರ್ ಅವರನ್ನು ಕೋರ್ ಸಮಿತಿ ಸದಸ್ಯ ನೇಮಕ ಮಾಡಲಾಯಿತು.
ಇದನ್ನೂ ಓದಿ: ಜೆಡಿಎಸ್ ನಿಂದ ರಾಜ್ಯಾದ್ಯಂತ ಬೆಳ್ಳಿ ಹಬ್ಬ ಆಚರಣೆ: ಕುಮಾರಸ್ವಾಮಿ ಹೇಳಿದ್ದಿಷ್ಟು
ಇನ್ನೂ ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಕುಣಿಗಲ್ ಕ್ಷೇತ್ರದ ಮಾಜಿ ಶಾಸಕ ಶ್ರೀ ಡಿ. ನಾಗರಾಜಯ್ಯರನ್ನು ನೇಮಿಸಲಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಶ್ರೀ ವೈ ಎಸ್ ವಿ ದತ್ತ ಅವರನ್ನು ನೇಮಿಸಲಾಗಿದೆ. ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಜೆಡಿಎಸ್ ಕೋರ್ ಸಮಿತಿಯಿಂದ ಜಿಟಿಡಿಗೆ ಕೊಕ್
ಜೆಡಿಎಸ್ ಪಕ್ಷದ 25ರ ಸಂಭ್ರಮದಲ್ಲಿ ಪ್ರಮುಖ ಸಮಿತಿ (ಕೋರ್ ಕಮಿಟಿ) ರಚಿಸಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಜಿಟಿ ದೇವೇಗೌಡರಿಗೆ ಜೆಡಿಎಸ್ ಕೋರ್ ಸಮಿತಿಯಿಂದ ಗೇಟ್ ಪಾಸ್ ನೀಡಲಾಗಿದೆ. ಪದೇ ಪದೇ ಕಾಂಗ್ರೆಸ್ ಜೊತೆ ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರನ್ನು ಜಿಟಿ ದೇವೇಗೌಡ್ರು ಹಾಡಿಹೊಗಳುತ್ತಿರುವುದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಈ ಸಂಬಂಧ ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು.
ಈ ಹಿಂದೆಯೂ ಸಹ ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡ ನಡುವೆ ಎಲ್ಲವೂ ಸರಿಯಿಲ್ಲ. ಆಗ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮಧ್ಯೆ ಪ್ರವೇಶಿಸಿ ಜಿಟಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ದೇವೇಗೌಡ್ರೇ ಮನೆಗೆ ಬಂದು ಮಾತುಕತೆ ನಡೆಸಿದ್ದರು. ಹೀಗಾಗಿ ಜಿಟಿ ದೇವೇಗೌಡ್ರು ಸಹ ಶಾಂತವಾಗಿದ್ದರು. ಆದರೆ, ಇದೀಗ ಕುಮಾರಸ್ವಾಮಿ, ಜಿಟಿ ದೇವೇಗೌಡರಿಗೆ ಕೋರ್ ಕಮಿಟಿಯಿಂದ ಕೊಕ್ ಕೊಟ್ಟಿದ್ದಾರೆ. ಈಗ ಜಿಟಿ ದೇವೇಗೌಡ ನಡೆ ಏನು ಎನ್ನುವುದನ್ನು ಕಾದುನೋಡಬೇಕಿದೆ.