Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ

Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ


ಜೂನ್ 23: ಗುಜರಾತ್, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ಈ ನಾಲ್ಕು ರಾಜ್ಯಗಳಲ್ಲಿ 5 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು (Assembly Bypoll Results) ಇಂದು ಪ್ರಕಟವಾಗಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತಲಾ ಒಂದು ಸ್ಥಾನವನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್ ಮತ್ತು ಪಂಜಾಬ್‌ನಲ್ಲಿ ಎರಡು ಸ್ಥಾನಗಳನ್ನು ಗೆದ್ದಿತು.

ಜೂನ್ 19ರಂದು ಕೇರಳದ ನೀಲಂಬೂರ್, ಗುಜರಾತ್‌ನ ವಿಸಾವದರ್ ಮತ್ತು ಕಾಡಿ, ಪಂಜಾಬ್‌ನ ಲುಧಿಯಾನ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ಉಪಚುನಾವಣೆಗಳು ನಡೆದವು. ಈ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಪಿಣರಾಯಿ ವಿಜಯನ್ ಅವರ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಜೂನ್ 19ರಂದು 4 ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶವನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷ (ಎಎಪಿ) 2 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಲಾ ಒಂದು ಸ್ಥಾನವನ್ನು ಗೆದ್ದಿವೆ.

ಇದನ್ನೂ ಓದಿ

ಪಂಜಾಬ್‌ನ ಲುಧಿಯಾನ ಪಶ್ಚಿಮ ಮತ್ತು ಗುಜರಾತ್‌ನ ವಿಸಾವದರ್‌ನಲ್ಲಿ ಎಎಪಿ ಅತಿ ಹೆಚ್ಚು ಗೆಲುವು ಸಾಧಿಸಿದೆ. ಕೇರಳದ ನೀಲಂಬೂರ್ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಗುಜರಾತ್‌ನ ಕಾಡಿಯಲ್ಲಿ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿತು. ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಿರಾಯಾಸವಾಗಿ ಗೆದ್ದಿತು.

ಇದನ್ನೂ ಓದಿ: ಇಂದು ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ

ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಕೇರಳದ ಆಡಳಿತಾರೂಢ ಸಿಪಿಐ(ಎಂ)ಗೆ ನೀಲಂಬೂರ್‌ನಲ್ಲಿ ಎಂ. ಸ್ವರಾಜ್ ಅವರನ್ನು 77,737 ಮತಗಳ ಅಂತರದಿಂದ ಸೋಲಿಸುವ ಮೂಲಕ ಪ್ರಮುಖ ಹಿನ್ನಡೆಯನ್ನುಂಟುಮಾಡಿದರು.

ಮಾಜಿ ಎಎಪಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ವಿಸಾವದರ್‌ನಲ್ಲಿ ಬಿಜೆಪಿಯ ಕಿರಿತ್ ಪಟೇಲ್ ಅವರನ್ನು 75,942 ಮತಗಳಿಂದ ಸೋಲಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ನಿತಿನ್ ರಣಪರಿಯಾ ಅವರು ಕೇವಲ 5,501 ಮತಗಳನ್ನು ಗಳಿಸುವ ಮೂಲಕ ಬಹಳ ಹಿಂದುಳಿದಿದ್ದಾರೆ. ಕಾಡಿಯಲ್ಲಿ ಬಿಜೆಪಿಯ ರಾಜೇಂದ್ರ ಚಾವ್ಡಾ ಅವರು ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಚಾವ್ಡಾ ಅವರನ್ನು 99,752 ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯ ಗಳಿಸಿದರು. ಫೆಬ್ರವರಿಯಲ್ಲಿ ಹಾಲಿ ಶಾಸಕ ಕರ್ಸನ್‌ಭಾಯ್ ಪಂಜಾಬಿ ಸೋಲಂಕಿ ಅವರ ನಿಧನದ ನಂತರ ಉಪಚುನಾವಣೆ ಅನಿವಾರ್ಯವಾಯಿತು.

ಲುಧಿಯಾನ ಪಶ್ಚಿಮದಲ್ಲಿ ಎಎಪಿಯ ಸಂಜೀವ್ ಅರೋರಾ ಅವರು ಕಾಂಗ್ರೆಸ್ ನಾಯಕ ಭರತ್ ಭೂಷಣ್ ಆಶು ಅವರನ್ನು 35,179 ಮತಗಳಿಂದ ಸೋಲಿಸಿ, ಪಂಜಾಬ್‌ನಲ್ಲಿ ಎಎಪಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಅವರು ಕಾಳಿಗಂಜ್ ಸ್ಥಾನವನ್ನು 1,02,759 ಮತಗಳ ಭಾರಿ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿಯ ಆಶಿಶ್ ಘೋಷ್ ಅವರನ್ನು ಸೋಲಿಸಿದರು.

ಇದನ್ನೂ ಓದಿ: ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್

ಗುಜರಾತ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಹಾಲಿ ಶಾಸಕರ ನಿಧನದ ಪರಿಣಾಮವಾಗಿ ಉಪಚುನಾವಣೆ ನಡೆಯಿತು. ಆದರೆ ನೀಲಂಬೂರ್ ಮತ್ತು ಗುಜರಾತ್‌ನಲ್ಲಿ ಶಾಸಕರ ರಾಜೀನಾಮೆಯಿಂದಾಗಿ ಒಂದು ಸ್ಥಾನಗಳಿಗೆ ಚುನಾವಣೆಗಳು ನಡೆದವು.

ಕೇಜ್ರಿವಾಲ್ ಸಂತಸ:

ವಿಶಾವದರ್ ಮತ್ತು ಲುಧಿಯಾನ ಪಶ್ಚಿಮ ಉಪಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುಜರಾತ್‌ನ ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ ಮತ್ತು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಗುಜರಾತ್ ಜನರು ಈಗ ಪರ್ಯಾಯಕ್ಕಾಗಿ ಆಮ್ ಆದ್ಮಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಗುಜರಾತ್ ಜನರು ಈಗ ಬಿಜೆಪಿಯಿಂದ ಬೇಸತ್ತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಭರವಸೆಯನ್ನು ನೋಡುತ್ತಿದ್ದಾರೆ ಎಂದು ಅವರು ಹಿಂದಿಯಲ್ಲಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷವು ಬಿಜೆಪಿಯ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು. “ಕಾಂಗ್ರೆಸ್ ಈಗ ಒಂದರ ನಂತರ ಒಂದರಂತೆ ಬಿಜೆಪಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮಾತ್ರ ಕೆಲಸ ಮಾಡುತ್ತಿದೆ. ಅದರ ಉನ್ನತ ನಾಯಕತ್ವವು ಬಿಜೆಪಿಯ ಮಡಿಲಲ್ಲಿ ಆರಾಮವಾಗಿ ಕುಳಿತಿದೆ” ಎಂದು ಅವರು ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 





Source link

Leave a Reply

Your email address will not be published. Required fields are marked *